ದಾವಣಗೆರೆ
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಯಪಡದೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ ಸಹಕರಿಸಿದಾಗ ಮಾತ್ರ ಭ್ರಷ್ಟಾಚಾರ ಎಂಬ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ದಾವಣಗೆರೆಯ ಪೂರ್ವ ವಲಯದ ಎ.ಸಿ.ಬಿ ಪೊಲೀಸ್ ಅಧೀಕ್ಷಕ ಜಿ.ಎ ಜಗದೀಶ್ ತಿಳಿಸಿದರು.
ಭ್ರಷ್ಟಾಚಾರ ನಿಗ್ರಹ ದಳ, ಪೂರ್ವ ವಲಯ ದಾವಣಗೆರೆ ಇವರ ಸಹಯೋಗದಲ್ಲಿ ಶುಕ್ರವಾರ (ಏ.12) ನಗರದ ಎಸ್.ಎಸ್.ಬಡಾವಣೆಯ ಬಾಪೂಜಿ ಬಿ.ಸ್ಕೂಲ್ನಲ್ಲಿ ಆಯೋಜಿಸಲಾಗಿದ್ದ ಭ್ರಷ್ಟಾಚಾರ ಪ್ರಕರಣಗಳಲ್ಲಿ ತನಿಖಾ ಕೌಶಲ್ಯ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಭ್ರಷ್ಟಾಚಾರ ತನಿಕಾ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಹಾಗೂ ನಾಗರಿಕರು ಪ್ರಾಮಾಣಿಕವಾಗಿ ಕೈಜೋಡಿಸಬೇಕು ಎಂದರು.
ಪ್ರಧಾನ ಜಿಲ್ಲಾ ಹಾಗೂ ವಿಶೇಷ ನ್ಯಾಯಾಧೀಶ ಅಂಬಾದಾಸ್.ಜಿ.ಕುಲಕರ್ಣಿ ಮಾತನಾಡಿ, ಪ್ರತಿನಿತ್ಯ ಪತ್ರಿಕೆಗಳಲ್ಲಿ ಭ್ರಷ್ಟಾಚಾರದ ಕುರಿತಾದ ಸುದ್ದಿಗಳಿಲ್ಲದ ದಿನಗಳಿಲ್ಲ. ಈ ನಿಟ್ಟಿನಲ್ಲಿ ದಾವಣಗೆರೆಯ ಎ.ಸಿ.ಬಿ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಭ್ರಷ್ಟಾಚಾರದ ಅನೇಕ ಪ್ರಕರಣಗಳಲ್ಲಿ ಶಾಂತ ರೀತಿಯಲ್ಲಿ ತನಿಖೆ ನಡೆಸಿ ಸಮಯಕ್ಕೆ ಸರಿಯಾಗಿ ಸಾಕ್ಷಿಗಳನ್ನು ಒದಗಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹಕ್ಕಿಂತ ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಆಗಬೇಕು ಎಂದು ಆಶಿಸಿದರು.
ಬೆಂಗಳೂರಿನ ನಿವೃತ್ತ ಪೊಲೀಸ್ ಅಧೀಕ್ಷಕ ಕುಣಿಗಲ್ ಶ್ರೀಕಂಠ ಮಾತನಾಡಿ, ಎಲ್ಲ ರೀತಿಯ ಕಾಯ್ದೆ-ಕಾನೂನುಗಳಿಗೆ ಅನೇಕ ತಿದ್ದುಪಡಿಗಳಾಗುತ್ತಿವೆ ಹಾಗೂ ನ್ಯಾಯಾಲಯಗಳ ತೀರ್ಪುಗಳಲ್ಲಿಯೂ ಧನಾತ್ಮಕ ಬದಲಾವಣೆಗಳಾಗುತ್ತಿವೆ. ಇಂತಹ ವಿಚಾರಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಲು ಕಾರ್ಯಾಗಾರ ನಡೆಸಲುವುದು ಅವಶ್ಯಕ. ಭ್ರಷ್ಟಾಚಾರದ ಪ್ರಕರಣಗಳಲ್ಲಿ ಎಲ್ಲಾ ರೀತಿಯ ತನಿಖಾ ಮಾದರಿಗಳನ್ನು ಅನುಸರಿಸಿ ಪರಿಣಾಮಕಾರಿಯಾದ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆಯ ವಿಶೇಷ ಅಭಿಯೋಜಕರಾದ ಆದಿಮನಿ, ಬಾಪೂಜಿ ಎಂಬಿಎ ಕಾಲೇಜಿನ ನಿರ್ದೇಶಕ ತ್ರಿಭುವನಂದ, ಬಾಪೂಜಿ ಎಂಬಿಎ ಕಾಲೇಜಿನ ಉಪನ್ಯಾಸಕಿ ಇಂಚರ ಸೇರಿದಂತೆ ಚಿತ್ರದುರ್ಗ, ಹಾವೇರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
