ದಾವಣಗೆರೆ:
ತಂಬಾಕು ಮುಕ್ತ ನಗರವನ್ನಾಗಿಸಲು ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ನಗರ ಕೇಂದ್ರ ವೃತ್ತ ನಿರೀಕ್ಷಕ ಇ.ಆನಂದ್ ಕರೆ ನೀಡಿದರು.ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಶುಕ್ರವಾರ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ 13 (ಕೋಟ್ಪಾ) ವತಿಯಿಂದ ನಡೆದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿನಿತ್ಯವೂ ತಂಬಾಕು ಪ್ರಕರಣಗಳು ದಾಖಲಾಗುತ್ತಿದ್ದು, ಪ್ರಕರಣ ಎಷ್ಟು ದಾಖಲಾಗಿವೆ ಎನ್ನುವುದಕ್ಕಿಂತ, ನಾವು ತಂಬಾಕು ಉತ್ಪನ್ನದಿಂದ ಮುಕ್ತರಾಗಿದ್ದೇವೆ ಎನ್ನುವುದು ಮುಖ್ಯ ಎಂದರು.
ನಾವು ಮಾಡುವ ಕಾರ್ಯದಲ್ಲಿ ಆತ್ಮ ಸಂತೋಷವಿರಬೇಕು. ಅದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಶಾಲಾ ಕಾಲೇಜು ಸುತ್ತಮುತ್ತಲು ಸಿಗರೇಟ್, ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ನಿಷೇಧ ಮಾಡಲಾಗಿದೆ. ಇದರಿಂದಾಗಿ ಎಷ್ಟೋ ಮಕ್ಕಳನ್ನು ರಕ್ಷಣೆ ಮಾಡಿದಂತಾಗಿದೆ. ಸಿಗರೇಟು, ತಂಬಾಕು ಉತ್ಪನ್ನಗಳನ್ನೇ ನಿಷೇಧ ಮಾಡಿದರೆ, ಇಂತಹ ಸಮಸ್ಯೆಗಳು ಎದುರಾಗುವುದೇ ಇಲ್ಲ. ಆದರೆ, ಒಂದು ಕಡೆ ಉತ್ಪನ್ನಕ್ಕೆ ಅನುಮತಿ ನೀಡಿ, ಇನ್ನೊಂದೆಡೆಗೆ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಕಾಯ್ದೆ ರೂಪಿಸುವುದು ಸಮಂಜಸವಲ್ಲ ಎಂದು ಹೇಳಿದರು.
ಪ್ರಕರಣ ದಾಖಲಿಸುವುದರಿಂದ ಚಟ ಬಿಡಿಸಲು ಸಾಧ್ಯವಿಲ್ಲ. ಅವರಲ್ಲೇ ತಿಳುವಳಿಕೆ ಬರಲಿ ಎಂಬ ಕಾರಣಕ್ಕೆ ಪ್ರಕರಣ ದಾಖಲು ಮಾಡಲಾಗುತ್ತದೆ. ಆದರೂ ಸಹ ಕೆಲವರು ಉದ್ಧಟತನದಿದಂದ ದಂಡ ಪಾವತಿಸಿ ಹೋಗುವುದು ಸರಿಯಲ್ಲ. ಇಂತಹ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರ ಹೆಚ್ಚಾಗಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ತ್ರಿಪುಲಾಂಬ ಮಾತನಾಡಿ, ಯುವವ ಜನತೆ ಕುತೂಹಲಕ್ಕಾಗಿ ಇಂತಹ ಚಟಗಳಿಗೆ ಒಳಗಾಗುತ್ತಾರೆ. ಎಲ್ಲಾ ಇಲಾಖೆಗಳ ಸಹಕಾರದಿಂದ ತಂಬಾಕು ದುಷ್ಪರಿಣಾಮದ ಬಗ್ಗೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ. ಜಿಲ್ಲಾಸ್ಪತ್ರೆಯಲ್ಲೂ ಸಹ ತಂಬಾಕು ಚಟ ಬಿಡಿಸುವ ಕೇಂದ್ರವಿದೆ. ತಂಬಾಕು ಚಟದಿಂದ ಯುವ ಸಮೂಹವನ್ನು ಮುಕ್ತ ಗೊಳಿಸಬೇಕಾದ ಅವಶ್ಯಕತೆ ಇದೆ ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಓರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ.ರಾಜೇಶ್ವರಿ ಅಣಗೇರಿ, ರಾಜ್ಯ ತಂಬಾಕು ನಿಯಂತ್ರಣ ಕೋಶದ ರಾಜ್ಯ ವಿಭಾಗೀಯ ಸಂಯೋಜನಾಧಿಕಾರಿ ಮಹಾಂತೇಶ್ ಉಳ್ಳಾಗಡ್ಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಘಟಕದ ಸಲಹೆಗಾರ ಸತೀಶ್ ಕಲಹಾಳ ಇವರು ತಂಬಾಕು ಕಾರ್ಯಾಚರಣೆಯಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಗಂಗಾಧರ್, ರಾಮಚಂದ್ರಪ್ಪ, ಬಸವಣ್ಣ, ಮಹೇಶ್ ದೇವರಾಜ್, ರಾಚಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
