ವೃದ್ಧೆಯ ಉಪಕಾರ

      ಬ್ರಹ್ಮಪುಚಿಚಿರವೆಂಬ ಪಟ್ಟಣದ ಜನರು ತುಂಬಾ ಭಯಭೀತರಾಗಿದ್ದರು. ಏಕೆಂದರೆ ಸಮೀಪದಲ್ಲಿದ್ದ ಪರ್ವತದ ತುದಿಯಲ್ಲಿ ಘಂಟಾಕರ್ಣನೆಂಬ ರಾಕ್ಷಸನಿರುವನೆಂದು ಅವರು ನಂಬಿದ್ದರು. ಆ ಪ್ರದೇಶದಲ್ಲಿ ಆಗಾಗ ಗಂಟೆಯ ಸಪ್ಪಳವೂ ಕೇಳಿಬರುತ್ತಿತ್ತು. ಆದ್ದರಿಂದ ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಘಂಟಾಕರ್ಣನು ಜನರನ್ನು ತಿನ್ನುತ್ತಾನೆ ಎಂಬ ಸುದ್ದಿ ಹಬ್ಬಲು ಜನರು ಊರು ಬಿಟ್ಟು ಹೋಗತೊಡಗಿದರು.

      ಅಲ್ಲಿಯ ಅರಸನು ಬಹಳ ಚಿಂತಾಕ್ರಾಂತನಾದನು. ಯಾರಾದರೂ ಘಂಟಾಕರ್ಣನ ಕಾಟವನ್ನು ತಪ್ಪಿಸಿದರೆ ಹೇರಳ ಹಣವನ್ನು ಕೊಡುವುದಾಗಿ ಅರಸ ಡಂಗುರ ಸಾರಿಸಿದನು. ಯಾರು ಆ ಸಾಹಸಕ್ಕೆ ಹೊರಡಲಿಲ್ಲ. ಕೊನೆಗೆ ಒಬ್ಬಳು ವೃದ್ಧೆಗೆ ಡಂಗುರದ ಸುದ್ದಿ ತಿಳಿಯಿತು. ಅವಳು ಜನರ ಮಾತನ್ನು ನಂಬಲಿಲ್ಲ. ತನ್ನ ದೈವವನ್ನು ಪರೀಕ್ಷಿಸಬೇಕೆಂದು ಅವಳು ಧೈರ್ಯದಿಂದ ಕಾಡಿಗೆ ಹೊರಟಳು. ಬಹುದೂರ ನಡೆದಾಗ ದೂರದಲ್ಲಿದ್ದ ಮರದ ಮೇಲಿನ ಮಂಗಗಳು ಗಂಟೆ ಬಾರಿಸುತ್ತಿರುವುದು ಕಣ್ಣಿಗೆ ಬಿತ್ತು. ವೃದ್ಧೆಗೆ ನಿಜಸ್ಥಿತಿಯ ಅರಿವಾಯಿತು.

      ಕೂಡಲೇ ವೃದ್ಧೆಯು ರಾಜನ ಬಳಿಗೆ ಬಂದು ಘಂಟಾಕರ್ಣನ ಕಾಟವನ್ನು ನಾನು ತಪ್ಪಿಸುವೆನು ಎಂದಳು. ಅರಸನಿಗೆ ಆಶ್ಚರ್ಯವಾಯಿತು. ಏಕೆಂದರೆ ಇಂತಹ ಧೈರ್ಯವನ್ನು ಇದುವರೆಗೆ ಯಾರೂ ಮಾಡಿರಲಿಲ್ಲ. ಆದ್ದರಿಂದ ವೃದ್ಧೆಯ ಮಾತಿಗೆ ಅರಸ ಒಪ್ಪಿದ.

      ವೃದ್ಧೆಯು ಅಡವಿಗೆ ಧೈರ್ಯದಿಂದ ನಡೆದಳು. ಈಗಂತೂ ಅವಳಿಗೆ ಯಾವ ಅಂಜಿಕೆಯೂ ಇರಲಿಲ್ಲ. ಗಂಟೆಯನ್ನು ಬಾರಿಸುತ್ತ ಕೋತಿಗಳು ಕುಳಿತ ಮರದಡಿಗೆ ಬಂದು, ನೆಲದ ಮೇಲೆ ಹಣ್ಣು-ಹಂಪಲುಗಳನ್ನು ಹರವಿಡಲು. ಕೂಡಲೇ ಮರದ ಮೇಲಿದ್ದ ಕಪಿಗಳು ಗಂಟೆಯನ್ನು ಎಸೆದು ಹಣ್ಣು ತಿನ್ನಲೆಂದು ಕೆಳಗೆ ಬಂದವು. ವೃದ್ಧೆಯು ಗಂಟೆಯನ್ನು ತೆಗೆದುಕೊಂಡು ಹೋಗಿ ಬಿಟ್ಟಳು. ಅಂದಿನಿಂದ ಮುಂದೆಂದೂ ಗಂಟೆಯ ಸದ್ದು ಯಾರಿಗೂ ಕೇಳಿಬರಲಿಲ್ಲ.

      ಅರಸನು ಸಂತುಷ್ಟನಾಗಿ ಅವಳಿಗೆ ಹೇರಳ ಸಂಪತ್ತನ್ನು ನೀಡಿದನು. ಪ್ರಜೆಗಳು ವೃದ್ಧೆಯ ಉಪಕಾರವನ್ನು ನೆನೆಯುತ್ತಾ ನೆಮ್ಮದಿಯಿಂದಿದ್ದರು. ಆದ್ದರಿಂದ ಯಾವುದನ್ನು ಸಂಪೂರ್ಣವಾಗಿ ವಿಚಾರ ಮಾಡದೆ ನಂಬಬಾರದು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap