ಚಿತ್ರದುರ್ಗ:
ಅಧಿಕಾರ ವಿಕೇಂದ್ರಿಕರಣದಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೆ ಸರ್ಕಾರ ಅಧಿಕಾರ ನೀಡಿರುವುದನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳನ್ನು ಅಭಿವೃದ್ದಿಪಡಿಸಿ ಎಂದು ಜಿ.ಪಂ.ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಕರೆ ನೀಡಿದರು.
ಬ್ರೆಡ್ಸ್ ಬೆಂಗಳೂರು ಮತ್ತು ಚಿತ್ರಡಾನ್ಬೋಸ್ಕೋ ಇವರುಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಗ್ರಾ.ಪಂ.ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಗ್ರಾಮಗಳ ಅಭಿವೃದ್ದಿ ಮತ್ತು ಮಕ್ಕಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಗ್ರಾ.ಪಂ.ಅಧ್ಯಕ್ಷರುಗಳೇ ಸುಪ್ರಿಂ. ಅದಕ್ಕಾಗಿ ನೀವುಗಳು ಮನಸ್ಸು ಮಾಡಿದರೆ ಗ್ರಾಮಗಳಲ್ಲಿ ಜನತೆಗೆ ಬೇಕಾಗಿರುವ ರಸ್ತೆ, ಬೀದಿದೀಪ, ಶುದ್ದ ಕುಡಿಯುವ ನೀರು, ಚರಂಡಿ ವ್ಯವಸ್ಥೆಯನ್ನು ಕಲ್ಪಿಸಬಹುದು. ಇವಿಷ್ಟೆ ಅಲ್ಲದೆ ಗ್ರಾಮೀಣ ಜನತೆಯ ಆರೋಗ್ಯ ಹಾಗೂ ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜೊತೆಗೆ ಅವರ ಹಕ್ಕುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದು ಹೇಳಿದರು.
ಚುನಾಯಿತ ಪ್ರತಿನಿಧಿಗಳಾಗಿ ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ ಗ್ರಾಮಗಳ ಅಭಿವೃದ್ದಿಗಷ್ಟೆ ನಿಮ್ಮ ಗಮನ ಇರಬೇಕು. ಅದನ್ನು ಬಿಟ್ಟು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವುದರಲ್ಲಿಯೇ ಕಾಲ ಕಳೆದರೆ ಅಧಿಕಾರವಧಿ ಮುಗಿದು ಹೋಗುತ್ತದೆ. ಏನು ಅಭಿವೃದ್ದಿ ಮಾಡಲು ಆಗುವುದಿಲ್ಲ. ಮೊದಲು ಎಲ್ಲರ ಮನಃಪರಿವರ್ತನೆಯಾಗಬೇಕು ಎಂದರು.
ಫಾದರ್ ಸೋನಿಜೈನ್ ಮ್ಯಾಥ್ಯೂವ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಹಕ್ಕೋತ್ತಾಯ ಸಿಬ್ಬಂದಿಗಳಾದ ಕೃಪಾ, ಶ್ರೀನಿವಾಸಗಾಣಿಗ, ಶ್ರೀನಿವಾಸಮೂರ್ತಿ, ಸುರೇಶ್, ಕ್ರೀಂ ಸಿಬ್ಬಂದಿಗಳಾದ ಬಿ.ವೀಣ, ಮಂಜುನಾಥ, ಸಣ್ಣನಿಂಗಪ್ಪ, ಮಹಂತೇಶ್, ನೀಲಪ್ಪ, ಅರುಣ್ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.