ಅಪ್ಪ, ಮಕ್ಕಳ, ಮೊಮ್ಮಕ್ಕಳ ಹಾಗೂ ಸೊಸೆಯಂದಿರ ಪಕ್ಷ ಜೆಡಿಎಸ್ ಜಗದೀಶ ಶೆಟ್ಟರ್ ಲೇವಡಿ

ಹಗರಿಬೊಮ್ಮನಹಳ್ಳಿ:

      ರಾಜ್ಯದಲ್ಲಿ ಅಪ್ಪ ಮಕ್ಕಳ ಹಾಗೂ ಮೊಮ್ಮಕ್ಕಳ ಜೊತೆಗೊಂದಿಷ್ಟು ಸೊಸೆಯಂದಿರ ಪಕ್ಷವಾಗಿರುವ ಜೆಡಿಎಸ್, ದೇಶದಲ್ಲಿ ಪ್ರಧಾನ ಮಂತ್ರಿಯಾಗಲು ಪೈಪೋಟಿಗಿಳಿದ ಗಟಬಂಧನ್ ಇಂದು ದೇಶವನ್ನು ಅದೋಗತಿಗೆ ಇಳಿಸಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.

        ಅವರು ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ಲೋಕಸಭಾ ಚುನಾವಣೆಯ ನಿಮ್ಮಿತ್ತ ಸೋಮವಾರ ಹಮ್ಮಿಕೊಳ್ಳಲಾಗಿದ್ದ, ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮಾಯಾವತಿ, ದೇವೇಗೌಡ್ರು, ಅಖಿಲೇಶ್ ಹಾಗೂ ರಾಹುಲು ಸೇರಿದಂತೆ 9ಜನ ಘಟಬಂಧನ್‍ದಲ್ಲಿರುವ ಇವರು ಪೈಪೋಟಿಯ ನಡುವೆ ಈಗ ಛಿದ್ರಛಿದ್ರವಾಗಿದ್ದಾರೆ ಎಂದರು.

      ಉಗ್ರಗಾಮಿಗಳು ದೇಶದ ಯೋಧರನ್ನು ಬಲಿ ತೆಗೆದುಕೊಂಡಾಗ, ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಪ್ರಧಾನಮಂತ್ರಿ ಮನಮೋಹನ್‍ಸಿಂಗ್ ತರ ಕೈಕಟ್ಟಿ ಕುಳಿತುಕೊಳ್ಳದೆ, ದಿಟ ಹೋರಾಟ ಮನೋಭಾವವನ್ನು ಹೊಂದಿರುವ ಮೋದಿಯವರು ನೇರ ಸೈನಿಕರಿಗೆ ಅಧಿಕಾರ ಕೊಡುವ ಮೂಲಕ ಪಾಕಿಸ್ತಾನವನೊಕ್ಕು ಉಗ್ರಗಾಮಿಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

       ದೇಶದ ಸುರಕ್ಷತೆಗಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡುವಲ್ಲಿ ದೇಶದ ಯುವಕರು ಕಂಕಣಬದ್ಧರಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿಯ ರಾಜ್ಯಸರ್ಕಾರ ಇಂದಿಗೂ ನೆಟ್ಟಗಿಲ್ಲ ಹಿರಿಯರೆಲ್ಲ ಸೇರಿ ಒಪ್ಪಿಗೆ ಇಲ್ಲದ ಮದುವೆ ಮಾಡಿದ್ದಾರೆ. ಆದರೆ, ಈ ಜೋಡಿ ಇಂದಿಗೂ ನೆಟ್ಟಗೆ ಸಂಸಾರ ಮಾಡಿಲ್ಲ ಎಂದು ಮತ್ತೊಷ್ಟು ಲೇವಡಿಮಾಡುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಆಡಳಿತದ ಕ್ಷಣವನ್ನು ಹಾಸ್ಯಕ್ಕಿಟ್ಟುಕೊಂಡರು.

       ಕಳೆದ ಉಪಚುನಾವಣೆಯಲ್ಲಿ ಜಿಲ್ಲೆಗೆ ಸರ್ಕಾರವೇ ಬಂದುನಿಂತು ಚುನಾವಣೆ ಮಾಡಿ ಭ್ರಷ್ಟ ಹಣವನ್ನು ತಂದು ಇಲ್ಲಿ ಸುರಿದ ಪರಿಣಾಮ ನಾವು ಸೋತಿದ್ದೇವೆ. ಆದರೆ ಈ ಬಾರಿ ರಾಜ್ಯದ 28 ಕ್ಷೇತ್ರದಲ್ಲೂ ಗೆಲ್ಲುವ ಮೂಲಕ ಮೋದಿಯವರನ್ನು ಪ್ರಧಾನಿ ಮಂತ್ರಿಯಾಗಿ ನೋಡುತ್ತೇವೆ ಎಂದ ಅವರು, ಡಿ.ಕೆ.ಶಿವಕುಮಾರ್ ಕಾಂಗ್ರೆಸ್‍ನ ಹೆಣ ಮತ್ತು ಪಲ್ಲಕ್ಕಿ ನಾನೇ ಹೋರುತ್ತೇನೆ ಎಂದು ಹೇಳಿದ್ದಾರೆ. ಆದರೆ, ಪಲ್ಲಕ್ಕಿ ಹೋರಿದ್ದು ಆಗಿದೆ, ಇನ್ನೇನಿದ್ದರೂ ಹೆಣವನ್ನು ಹೋರವುದೊಂದೇ ಬಾಕಿ ಎಂದರು. ದೇವೆಗೌಡ್ರು ಮತ್ತು ಮಕ್ಕಳ ಗುಂಡಾಗಿರಿ ರಾಜಕೀಯ ಅಂತ್ಯವಾಗುತ್ತಿದೆ ಎಂದು ಭವಿಷ್ಯ ನುಡಿದರು. ಇದೆಲ್ಲದಕ್ಕೂ ಮುಕ್ತಿ ಕಾಣಲು ದೇಶದ ಸುಭಿಕ್ಷೆಗಾಗಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರಿಗೆ ಮತಹಾಕಿಸಿ ಎಂದು ಕರೆ ನೀಡಿದರು.

        ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕರಾದ ಶ್ರೀರಾಮುಲು ಮಾತನಾಡಿ, ರಾಜ್ಯದೆಲ್ಲೆಡೆ ಬಿಜೆಪಿ ಗೆಲ್ಲಲೇಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ನೇತೃತ್ವದಲ್ಲಿ ರಾಜ್ಯಾಧ್ಯಂತ ಪ್ರವಾಸಮಾಡುತ್ತಿದ್ದೇವೆ. ಡಿ.ಕೆ.ಶಿವಕುಮಾರ್ ಸಂಡೂರಿನಲ್ಲಿ ಕಾರ್ಯಕ್ರಮ ಮಾಡಲು ಬಂದರೆ ಕಾಂಗ್ರೆಸ್‍ನ ಹಲವಾರು ಮುಖಂಡರು ಅಂದೇ ಪಕ್ಷವನ್ನು ತ್ಯಜಿಸಿದ್ದಾರೆ. ಅದ್ದರಿಂದ ಈ ಬಾರಿ ರಾಜ್ಯಲ್ಲಿ ಕಾಂಗ್ರೆಸ್‍ನವರ ದೊಬ್ಬರಾಟ ನಡೆಯುವುದಿಲ್ಲ.

      ಉಗ್ರಪ್ಪ ಸಂಸದರಾಗಿ ಬಳ್ಳಾರಿ ಜಿಲ್ಲೆಗೆ ಏನು ಮಾಡಿಲ್ಲ. ನಾವು ಸಂಸದರಾಗಿದ್ದಾಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಪ್ರಧಾನಿ ಮೋದಿಯವರ ಉಜ್ವಲ ಯೋಜನೆಯು ದೇಶದ ಮಹಿಳೆಯರ ಆಶಾಕಿರಣವಾಗಿದೆ. ಮೊದಲಿನಿಂದಲೂ ನಮ್ಮ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿ ಬಿಜೆಪಿ ಶಕ್ತಿ ಕೇಂದ್ರವಾಗಿದೆ. ಕ್ಷೇತ್ರದಲ್ಲಿ ಈ ಹಿಂದೆ ನೇಮಿರಾಜ್ ಶಾಸಕರಾಗಿದ್ದಾಗ ಬಂದಂತಹ ಅನುದಾನದಲ್ಲಿ ಆಗಿರುವ ಕೆಲಸಗಳೇ ಈಗಲೂ ಮುಂದುವರೆಯುತ್ತಿವೆ ಎಂದರು.

        ಮಾಜಿ ಶಾಸಕ ಕೆ.ನೇಮಿರಾಜ್‍ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸರಳ ಸಜ್ಜನಿಕೆಯ ನೇರ ನಡೆನುಡಿಯ ಶ್ರೀಸಾಮಾನ್ಯ ವ್ಯಕ್ತಿ ದೇವೇಂದ್ರಪ್ಪನವರು ಎಲ್ಲರ ಒಮ್ಮತದ ಬಳ್ಳಾರಿ ಲೋಕಸಭಾದ ಅಭ್ಯರ್ಥಿಯಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಈ ಕ್ಷೇತ್ರದಿಂದ 25ಸಾವಿರಕ್ಕೂ ಅಧೀಕ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳುತ್ತೇವೆ ಎಂದು ಹೇಳಿದರು.

        ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ 3.5ಕೋಟಿ ರೂ.ಗಳ ಅನುದಾನ ನೀಡಿದ್ದರು. ಒಟ್ಟಾರೆ ಆಗಿನ ರಾಜ್ಯದ ಬಿಜೆಪಿಯ ಯಡಿಯೂರಪ್ಪ, ಸದಾನಂದಗೌಡರ ಹಾಗೂ ಜಗದೀಶ ಶೆಟ್ಟರ್ ಅಧಿಕಾರ ಅವಧಿಯಲ್ಲಿ ಈ ಕ್ಷೇತ್ರಕ್ಕೆ 800ಕೋಟಿ ರೂ. ಅನುದಾನ ಹರಿದುಬಂದಿತ್ತು. ತಾಲೂಕಿನಲ್ಲಿ ಬಡವರು ಹಾಗೂ ರೈತರು ತಮ್ಮ ವಾಸಕ್ಕೊಂದು ಸೂರು ಕಟ್ಟಿಕೊಳ್ಳಲು ಎತ್ತಿನ ಗಾಡಿಲ್ಲಿ ಮರಳು ತಂದರೆ ಅವರ ಮೇಲೆ ಕೇಸು ದಾಖಲಾಗುತ್ತವೆ. ಅದೇ ಅಕ್ರಮ ಮರಳು ದಂದೆಗೆ ಇಲ್ಲಿನ ಶಾಸಕರು ಬೆಂಗಾವಲಾಗಿ ನಿಂತು ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು. ದೇಶದ ಒಳಿತಿಗಾಗಿ ಬಿಜೆಪಿಗೆ ಮತಹಾಕಿಸಿ ಎಂದು ಕರೆ ನೀಡಿದರು.

         ಅಭ್ಯರ್ಥಿ ದೇವೇಂದ್ರಪ್ಪ ಮಾತನಾಡಿ, ನಮ್ಮ ಹಾಗೂ ನಿಮ್ಮ ನಡುವೆ ಒಂದು ದೊಡ್ಡ ಪವಾಡ ನಡೆಯುವ ದೃಶ್ಯವನ್ನು ದೇವರು ಸೃಷ್ಠಿ ಮಾಡಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಮಲ ಗುರ್ತಿಗೆ ಓಟ್ ಹಾಕುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಮಾಡೋಣ, ನನ್ನನ್ನು ನೀವು ದತ್ತು ತೆಗೆದುಕೊಳ್ಳಿ, ನೀವು ಕರೆದಾಗ ಬಂದು ನಿಮ್ಮ ಸಂಕಷ್ಟಕ್ಕೆ ಎದೆಗೊಟ್ಟು ನಿಲ್ಲುವ ಮೂಲಕ ನೆರವಾಗುತ್ತೇನೆ ಎಂದರು.

          ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮೃತ್ಯುಂಜಯ ಜಿನಗಾ, ವೈ.ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ, ಬಸವರಾಜ್, ಸ್ವರೂಪನಂದ, ತಿಂದಪ್ಪ, ಕಿನ್ನಾಳ್ ಸುಭಾಷ್, ಜಿ.ಪಂ.ಸದಸ್ಯರಾದ ಗುರುಸಿದ್ದಪ್ಪ, ಆನಂದ್, ಎಸ್.ಟಿ.ಘಟಕದ ಅಧ್ಯಕ್ಷ ಟಿ.ಮಹೇಂದ್ರ, ಒಬಿಸಿ ಅಧ್ಯಕ್ಷ ಕಲ್ಲಳ್ಳಿ ನಿಂಗಪ್ಪ, ಪುರಸಭೆ ಸದಸ್ಯರಾದ ಹುಳ್ಳಿ ಮಂಜುನಾಥ, ಮೃತ್ಯುಂಜಯ ಬದಾಮಿ, ಹೆಚ್.ಎಂ.ಚೋಳರಾಜ್, ಲಕ್ಷ್ಮಣ ಕಲಾಲ್, ಸಬೀಯಾಬೇಗಂ, ಮುಖಂಡರಾದ ರಾಜಲಿಂಗಪ್ಪ, ಚಿತ್ತವಾಡ್ಗಿ ಪ್ರಕಾಶ್, ಸಂಗಯ್ಯ, ಬಿ.ಶ್ರೀನಿವಾಸ, ಬಂಟರ ಹುಲುಗಪ್ಪ, ಸರ್ಧಾರ್ ಯಮನೂರ್, ಬಡಿಗೇರ್ ಬಸವರಾಜ್, ಪೂಜಾರ್ ಸಿದ್ದಪ್ಪ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.ಮಂಡಲ ಅಧ್ಯಕ್ಷ ನರೆಗಲ್ ಕೊಟ್ರೇಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜೆ.ಬಿ.ಶರಣಪ್ಪ ಹಾಗೂ ಡಾ.ಅಜ್ಜಯ್ಯ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link