ತುಮಕೂರು
ಇಂದು ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಬಿ.ಎನ್.ರಾಮರೆಡ್ಡಿರವರು ಶಾಲೆಯ ನಿರ್ದೇಶಕರೂ, ಪ್ರಾಂಶುಪಾಲರೂ, ಶೈಕ್ಷಣಿಕ ಮಾರ್ಗದರ್ಶಕರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳು ಮಾತನಾಡಿ ವಿದ್ಯಾರ್ಥಿಗಳು, ದಿವಂಗತ ಡಾ| ಎಸ್.ರಾಧಕೃಷ್ಣನ್ ಅವರ ಆದರ್ಶಗಳನ್ನು ಪಾಲಿಸಬೇಕು. ಅಂದಿನ ವಿದ್ಯೆಯನ್ನು ಅವತ್ತೆ ಓದಿ ಮನನ ಮಾಡಿ ಶಾಲೆಗೆ, ತಂದೆತಾಯಿಯರಿಗೆ, ನಾಡಿಗೆ ಹೆಸರನ್ನು ತರಬೇಕು ಎಂದು ತಿಳಿಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಆದರ್ಶ ನಿರ್ದೇಶಕರಾದ ಶ್ರೀಯುತ ಕೆ.ಇಮಾಂರವರು ಬಾಲಗಂಗಾಧರತಿಲಕ್ ರವರನ್ನು ಹಾಗು ತಮ್ಮೆಲ್ಲ ಶಿಕ್ಷಕರನ್ನು ಸ್ಮರಿಸಿಕೊಂಡರು. ದಿವಂಗತ ಡಾ|| ಎಸ್.ರಾಧಾಕೃಷ್ಣನ್ರವರು ನೀಡಿದ್ದ ಅನೇಕ ಸಂದೇಶಗಳನ್ನು ತಿಳಿಸಿ ಶಿಕ್ಷಕರ ಮಹತ್ವ, ಶಿಕ್ಷಕರ ಗುರುತರ ಜವಾಬ್ದಾರಿಯನ್ನು ವಿವರಿಸಿದರು. ಸಮಾಜ ಮತ್ತು ದೇಶದ ಏಳ್ಗೆಯಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುವರು, ಹೀಗಾಗಿ ಶಿಕ್ಷಕರು ಸಮಾಜ ಮತ್ತು ದೇಶದ ಅಭಿವೃದ್ಧಿಯ ಹರಿಕಾರರಾಗಬೇಕೆಂದು ತಿಳಿಸಿದರು. ಶಿಕ್ಷಕರ ವೃತ್ತಿ ಪವಿತ್ರವಾದ ವೃತ್ತಿ ಎಂದ ಅವರು ಇಂದಿನ ದಿನ ಶಿಕ್ಷಕರು ತಮ್ಮ ವೃತ್ತಿಗೂ ತಮಗೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕರೆನೀಡಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಯಾದ ಚಿ| ಹೆಚ್.ಎಸ್ ತಿಪ್ಪೇಸ್ವಾಮಿ ದಿವಂಗತ ಡಾ| ಎಸ್.ರಾಧಕೃಷ್ಣನ್ ಅವರ ಹುಟ್ಟು,ಬಾಲ್ಯ ವಿದ್ಯಾಭ್ಯಾಸ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ನಡೆಸಿದ ಸ್ಪರ್ಧೆಗಳು, ಸಾಂಸ್ಕತಿಕ ಕಾರ್ಯಕ್ರಮಗಳು ಎಲ್ಲರ ಮನರಂಜಿಸಿದವು. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಗೆದ್ದ ಶಿಕ್ಷಕ ಶಿಕ್ಷಕಿಯರಿಗೆ ಬಹುಮಾನಗಳನ್ನು, ವಿವಿಧ ಬಿರುದಾವಳಿಗಳನ್ನು ನೀಡಿದರು.ಕಾರ್ಯಕ್ರಮವನ್ನು 10ನೇ ತರಗತಿಯ ವಿದ್ಯಾರ್ಥಿ,ವಿದ್ಯಾರ್ಥಿನಿಯರು ನಿರೂಪಿಸಿದರು.ಕು| ಕೃತಿಕರಾಣಿ ಹಾಗು ತಂಡದವರು ಪ್ರಾರ್ಥಿಸಿದರು. ಕು| ಲಬ್ಧಿ ಜೈನ್ ಸ್ವಾಗತಿಸಿದರು. ಕು| ಪ್ರೇರಣ ಎಸ್. ವಂದಿಸಿದರು.ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು,ಬೋಧಕೇತರ ಸಿಬ್ಬಂದಿಯವರು ಈ ಸಂದರ್ಭದಲ್ಲಿ ಹಾಜರಿದ್ದರು.