ಎಚ್1 ಎನ್ 1 ಹರಡದಂತೆ ಮುಂಜಾಗ್ರತೆ ವಹಿಸಿ

 ಹಾವೇರಿ:

      ಜಿಲ್ಲೆಯಲ್ಲಿ ಎಚ್ 1 ಎನ್1 ರೋಗ (ಇನ್‍ಫ್ಲೋಎಂಝಾ) ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

      ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಎಚ್ 1 ಎನ್ 1 ಪ್ರಕರಣಗಳು ಹಲವೆಡೆ ಕಂಡುಬಂದಿದೆ. ಜಿಲ್ಲೆಯಲ್ಲೂ ಕೆಲವೆಡೆ ಈ ಸೋಂಕು ಪತ್ತೆಯಾಗಿರುವುದರಿಂದ ರೋಗ ನಿಯಂತ್ರಣಕ್ಕೆ ಗರಿಷ್ಠ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸಲಹೆ ಮಾಡಿದರು.

      ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜಿಲ್ಲಾ ಆಸ್ಪತ್ರೆ ಒಳಗೊಂಡಂತೆ ಎಲ್ಲ ಸರ್ಕಾರಿ ತಾಲೂಕಾ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಎಚ್1 ಎನ್1 ರೋಗ ಲಕ್ಷಣಗಳ ಕುರಿತಂತೆ ಮನೆ ಮನೆಗೆ ಭೇಟಿ ನೀಡಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ಅರಿವು ಮೂಡಿಸಬೇಕು. ಹೆಚ್ಚಾಗಿ ಸೋಂಕುಪೀಡಿತ ಗ್ರಾಮಗಳಲ್ಲಿ ವೈದ್ಯಕೀಯ ಕ್ಯಾಂಪ್ ನಡೆಸಿ ಸಕಾಲಿಕ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

      ಎಚ್ 1 ಎನ್ 1 ರೋಗವು ಕೆಮ್ಮುವಾಗ ಮತ್ತು ಸೀನುವಾಗ ಗಾಳಿಯಲ್ಲಿ ಹರಡುತ್ತದೆ. ಜನಸಾಂದ್ರತೆ ಅಥವಾ ಜನಜಂಗುಳಿ ಪ್ರದೇಶದಲ್ಲಿ ಉಸಿರಾಟದ ಸೋಂಕಿನಿಂದ, ಎಚ್ 1 ಎನ್1 ರೋಗಕ್ಕೆ ತುತ್ತಾದ ವ್ಯಕ್ತಿಗಳ ಸ್ಪರ್ಶದಿಂದ ಹಾಗೂ ಅವರು ಬಳಸುವ ವಸ್ತುಗಳಿಂದ ಅನೈರ್ಮಲ್ಯದಿಂದ ಈ ಸೋಂಕು ತಗಲುತ್ತದೆ. ಶೀತ, ತಲೆನೋವು, ಕೆಮ್ಮು ಮತ್ತು ಜ್ವರ ಚಳಿಯು ಇದ್ದು ದೇಹ ಬಳಲುವಿಕೆ, ಉಸಿರಾಟದಲ್ಲಿ ತೊಂದರೆ, ಕೆಲವೊಮ್ಮೆ ವಾಂತಿ ಮತ್ತು ಬೇಧಿಯು ಆಗಬಹುದು. ಇದು ಈ ರೋಗದ ಲಕ್ಷಣವಾಗಿದ್ದು. ಈ ಲಕ್ಷಣ ಕಂಡುಬಂದರೆ ತಕ್ಷಣವೇ ಮುಂಜಾಗ್ರತಾ ಕ್ರಮವಾಗಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.

      ಶಾಲಾ-ಕಾಲೇಜು, ಬಸ್‍ಗಳಲ್ಲಿ ಪ್ರಯಾಣ, ಸಂತೆ-ಜಾತ್ರೆಗಳಲ್ಲಿ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಈ ರೋಗ ಸುಲಭವಾಗಿ ಹರಡುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆಯನ್ನು ವಹಿಸಬೇಕು. ಸಾಧ್ಯವಾದರೆ ಮುಖಕ್ಕೆ ಮಾಸ್ಕ್‍ಗಳನ್ನು ಹಾಕಿಕೊಳ್ಳಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್, ಕೈವಸ್ತ್ರ, ಟೀಶು ಹಾಳೆಗಳನ್ನು ಉಪಯೋಗಿಸಬೇಕು. ಆಗಾಗಾ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು. ವೈಯಕ್ತಿಕ ಸ್ವಚ್ಛತೆಯನ್ನು ಪಾಲಿಸಬೇಕು. ನಿಯಮಿತ ಸ್ನಾನ, ಸುಭ್ರವಾದ ಬಟ್ಟೆ ಧರಿಸುವುದು ಸೂಕ್ತ, ತಮ್ಮ ವ್ಯಾಪ್ತಿಯಲ್ಲಿ ಸೋಂಕು ಹರಡಿಸಿದರೆ ಮಾಸ್ಕ್ ಧರಿಸಿ ಮನೆಯಲ್ಲೇ ಇರುವುದು ಸೂಕ್ತ. ಚಿಕ್ಕ ಮಕ್ಕಳಿದ್ದರೆ ಸೋಂಕಿತ ವ್ಯಕ್ತಿಗಳಿಂದ ದೂರವಿರಿಸಿ. ವಯಸ್ಕರು, ಮಕ್ಕಳು ದೀರ್ಘಕಾಲದ ರೋಗಪೀಡಿತರಿಗೆ ತ್ವರಿತವಾಗಿ ಈ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಿವುದು ಒಳಿತು ಎಂದು ತಿಳಿಸಿದರು.

      ಉಸಿರಾಟದ ತೊಂದರೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ. ವೈದ್ಯರ ಸಲಹೆ ಇಲ್ಲದೆ ಸ್ವಂತವಾಗಿ ಔಷಧಿಗಳನ್ನು ಸೇವಿಸಬೇಡಿ. ಕೈಯಿಂದ ಮೂಗು, ಬಾಯಿಯನ್ನು ಆಗಾಗ ಮುಟ್ಟಿಕೊಳ್ಳುವುದು ಬೇಡ. ಎಲ್ಲಂದರಲ್ಲಿ ಉಗಳಬೇಡಿ ಎಂದು ಸಲಹೆ ನೀಡಿದರು.

      ವೈದ್ಯರೂ ಸಹ ರೋಗಿಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸಿ ಎಲ್ಲ ಮುನ್ನೆಚ್ಚರಿಕೆ ವಹಿಸಬೇಕು. ಆಸ್ಪತ್ರೆ ವಾರ್ಡ್‍ಗಳಲ್ಲಿ ಪ್ರತ್ಯೇಕ ಬೆಡ್‍ಗಳ ವ್ಯವಸ್ಥೆಮಾಡಿ ಸೂಕ್ತ ಚಿಕಿತ್ಸೆ ನೀಡಬೇಕು. ರೋಗ ಪೀಡಿತ ಕುಟುಂಬದವರಿಗೂ ಟ್ಯಾಮಿಪ್ಲೂವಾ ಮಾತ್ರೆಗಳನ್ನು ನೀಡಿ ಸೂಕ್ತ ಚಿಕಿತ್ಸೆಯನ್ನು ನೀಡಬೇಕು ಎಂದು ಸಲಹೆ ಮಾಡಿದರು.

      ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಹಂದಿಗಳ ಸಾಗಾಣಿಕೆ, ದೂರು ಇರುವಂತೆ ಕ್ರಮವಹಿಸಬೇಕು. ಹಂದಿಗಳ ನಿಯಂತ್ರಣವನ್ನು ಕೈಗೊಳ್ಳಬೇಕು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

24 ಪ್ರಕರಣ:

      ಜಿಲ್ಲೆಯಲ್ಲಿ ಎಚ್1 ಎನ್1 ಸಂಶಯಾತ್ಮಕ 24 ಪ್ರಕರಣಗಳು ವರದಿಯಾಗಿವೆ. ರಾಣೇಬೆನ್ನೂರ ತಾಲೂಕಿನಲ್ಲಿ 11, ಹಾವೇರಿ-04, ಬ್ಯಾಡಗಿ-02, ಶಿಗ್ಗಾಂವ-01, ಸವಣೂರು -03 ಹಾಗೂ ಹಾನಗಲ್ ತಾಲೂಕಿನಲ್ಲಿ 03 ಪ್ರಕರಣಗಳು ವರದಿಯಾಗಿವೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ.

      ಸಂಶಯಾಸ್ಪದ ಸೋಂಕಿತ 24 ಜನರ ಪೈಕಿ ಎಂಟು ಪ್ರಕರಣಗಳು ಖಚಿತವಾಗಿವೆ. ಎಚ್ 1 ಎನ್ 1ಸೋಂಕು ಪತ್ತೆಗಾಗಿ ಮಣಿಪಾಲ್ ಆಸ್ಪತ್ರೆ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಪುಣಾ ಮತ್ತು ಬೆಂಗಳೂರು ಮೂಲದ ತಲಾ ಓರ್ವ ಹಾನಗಲ್ ಮತ್ತು ಬ್ಯಾಡಗಿಯಲ್ಲಿ ಮರಣಹೊಂದಿದ್ದಾರೆ ಎಂದು ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ.ಜಗದೀಶ ಪಾಟೀಲ ಸಭೆಗೆ ವಿವರಿಸಿದರು.

      ಎಚ್1 ಎನ್1 ರೋಗದ ಹರಡವಿಕೆ, ಲಕ್ಷಣಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಡಾ.ಶಾಮಲಾ ಶೆಟ್ಟಿ ಸಭೆಗೆ ವಿವರಿಸಿ, ಪ್ರಾಣಿ, ಮನುಷ್ಯ ಹಾಗೂ ಗಾಳಿಯ ಉಸಿರಾಟದಿಂದ ಎಚ್1 ಎನ್ 1 ವೈರಾಣು ಹರಡುತ್ತದೆ. ಚಿಕ್ಕ ಮಕ್ಕಳು ವಯಸ್ಸಾದವರಿಗೆ ಹಾಗೂ ಸೋಂಕಿತರ ಸ್ಪರ್ಶದಿಂದ, ಗಾಳಿಯಿಂದ ಈ ಸೋಂಕು ಹರಡುತ್ತದೆ. ಸೋಂಕು ತಗುಲಿದ ತಕ್ಷಣ ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬೇಕು. ಮಳೆಗಾಲ ಮತ್ತು ಚಳಿಗಾಲದಲ್ಲಿ ಈ ರೋಗ ಲಕ್ಷಣಗಳು ಕಂಡುಬರುತ್ತದೆ. ಜಗತ್ತಿನಾದ್ಯಂತ ಈ ಸೋಂಕು ಹರಡಿದೆ. ರಾಜ್ಯದಲ್ಲೂ ಈ ಸೋಂಕು ಕಾಣಿಸಿಕೊಂಡಿದ್ದು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸೋಂಕಿತರಿಂದ ದೂರ ಇರುವುದು, ಅವರನ್ನು ಸ್ಪರ್ಶ ಮಾಡದಿರುವುದು, ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣ ಬಂದರೆ ಸ್ವಯಂ ಉಪಚಾರದ ಬದಲು ತಕ್ಷಣವೇ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

      ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ್, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಜಿ.ಪಂ.ಸಹಕಾರ್ಯದರ್ಶಿ ಜಾಫರ ಸುತಾರ, ಹಾವೇರಿ ನಗರಸಭೆ ಪರಿಸರ ಅಭಿಯಂತರ ಚಂದ್ರಕಾಂತ, ವಿವಿಧ ತಾಲೂಕಾ ವೈದ್ಯಾಧಿಕಾರಿಗಳು, ಪುರಸಭೆ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link