ಎಲ್ಲಾ ಸುಳ್ಳು, ನಾನ್ಯಾವ ಬಿಜೆಪಿ ಕಾರ್ಯಕ್ರಮಕ್ಕೂ ಹೋಗುತ್ತಿಲ್ಲ: ರಾಹುಲ್ ದ್ರಾವಿಡ್

ನವದೆಹಲಿ:

ನಾನ್ಯಾವ ಬಿಜೆಪಿ ಕಾರ್ಯಕ್ರಮಕ್ಕೂ ಹೋಗುತ್ತಿಲ್ಲ. ಈ ವರದಿಗಳೆಲ್ಲಾ ಸುಳ್ಳು ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ಧಾರೆ.
ಹಿಮಾಚಲಪ್ರದೇಶ ರಾಜ್ಯದ ಧರ್ಮಶಾಲಾದಲ್ಲಿ ನಡೆಯಲಿರುವ ಬಿಜೆಪಿ ಯುವ ಮೋರ್ಚಾದ ಸಭೆಯಲ್ಲಿ ರಾಹುಲ್ ದ್ರಾವಿಡ್ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಸ್ವತಃ ಅವರೇ ಇಂದು ಅಲ್ಲಗಳೆದು ಸ್ಪಷ್ಟನೆ ನೀಡಿದ್ದಾರೆ.

“ಮೇ 12-15ರವರೆಗೆ ಹಿಮಾಚಲ ಪ್ರದೇಶದಲ್ಲಿ ನಡೆಯುವ ಸಭೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವರದಿ ತಪ್ಪು ಎಂದು ಸ್ಪಷ್ಟಪಡಿಸುತ್ತಿದ್ದೇನೆ” ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ರಾಹುಲ್ ದ್ರಾವಿಡ್ ತಿಳಿಸಿದ್ಧಾರೆ.

ಬಿಜೆಪಿ ಶಾಸಕನ ಮಾತಿನಿಂದ ವದಂತಿ: ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ರಾಹುಲ್ ದ್ರಾವಿಡ್ ಪಾಲ್ಗೊಳ್ಳಲಿದ್ಧಾರೆ ಎಂದು ಗುಸು ಗುಸು ಸುದ್ದಿಯನ್ನು ಹರಿಯಬಿಟ್ಟಿದ್ದು ಧರ್ಮಶಾಲಾದ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ.

“ಯುವ ಮೋರ್ಚಾದ ಸಭೆಯಲ್ಲಿ ಹಿಮಾಚಲ ಪ್ರದೇಶದ ನಾಯಕರು ಮತ್ತು ಬಿಜೆಪಿಯ ರಾಷ್ಟ್ರೀಯ ನಾಯಕರು ಭಾಗಿಯಾಗುತ್ತಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಸಚಿವರು ಮೊದಲಾದವರೂ ಇರಲಿದ್ದಾರೆ,” ಎಂದು ಮಾಧ್ಯಮಗಳಿಗೆ ತಿಳಿಸಿದ್ದ ವಿಶಾಲ್ ನೆಹ್ರಿಯಾ, ರಾಹುಲ್ ದ್ರಾವಿಡ್ ಉಪಸ್ಥಿತಿಯೂ ಇರಲಿದೆ ಎಂದು ಹೇಳಿದ್ದರು. “ಭಾರತೀಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಕೂಡ ಪಾಲ್ಗೊಳ್ಳುತ್ತಾರೆ. ಅವರ ಸಾಧನೆಯು ನಮ್ಮ ಯುವ ಸಮುದಾಯಕ್ಕೆ ಒಳ್ಳೆಯ ಪ್ರೇರಣೆಯಾಗುತ್ತದೆ. ರಾಜಕೀಯ ಮಾತ್ರವಲ್ಲ, ಬೇರೆ ಕ್ಷೇತ್ರಗಳಲ್ಲೂ ನಾವು ಪ್ರಗತಿ ಕಾಣಬಹುದು” ಎಂದು ಅವರು ಹೇಳಿಕೆ ಕೊಟ್ಟಿದ್ದರು. ಹಿಮಾಚಲಪ್ರದೇಶದಲ್ಲಿ ಈ ವರ್ಷವೇ ವಿಧಾನಸಭಾ ಚುನಾವಣೆಗಳ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಸಂಘಟನೆ ಕಟ್ಟುವ ಕಾಯಕದಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ಈ ವಾರಾಂತ್ಯದವರೆಗೂ ಕ್ಷದ ಯುವ ಮೋರ್ಚಾದ ಸಭೆ ನಡೆಯುತ್ತಿದೆ.

ಸದ್ಯ ಹಿಮಾಚಲಪ್ರದೇಶದಲ್ಲಿ ಬಿಜೆಪಿಯೇ ಆಡಳಿತದಲ್ಲಿದೆ. ಕಳೆದ ಬಾರಿಯ ಚುನಾವಣೆಯಲ್ಲಿ 68 ಸ್ಥಾನಗಳ ಪೈಕಿ ಬಿಜೆಪಿ 44 ಸ್ಥಾನ ಗೆದ್ದು ಸ್ಪಷ್ಟಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link