ಹೊಸಪೇಟೆ:
ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಶೆ. 3 ರಿಂದ ಶೇ 7 ರವರೆಗೆ ಮೀಸಲು ಹೆಚ್ಚಿಸುವ ಬಗ್ಗೆ ಸೆರಿದಂತೆ ಸಮಾಜದ ಆಗು ಹೋಗುಗಳ ಬಗ್ಗೆ ಮೇ 21 ರಂದು ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ರಾಜ್ಯಮಟ್ಟದ ತುರ್ತು ಸಭೆ ಕರೆಯಲಾಗಿದೆ ಎಂದು ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಧರ್ಮದರ್ಶಿ ಜಂಬಯ್ಯ ನಾಯಕ್ ತಿಳಿಸಿದರು.
ನಗರದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ನಾನಾ ಸಮುದಾಯಗಳನ್ನು ಸೇರಿಸಲು ಸರಕಾರ ಮುಂದಾಗಿರುವುದು ಸರಿಯಲ್ಲ ಎಂದು ದೂರಿದರು.
ಸಮುದಾಯಕ್ಕೆ ನ್ಯಾಯಯುತವಾದ ಮೀಸಲಾತಿ ನೀಡದೆ ಆಡಳಿತ ಪಕ್ಷಗಳು ಅನ್ಯಾಯಮಾಡುತ್ತಿವೆ. ಇದರಿಂದ ಸಮುದಾಯದ ಜನರು ಶೈಕ್ಷಣಿಕ, ರಾಜಕೀಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಹಿನ್ನೆಡೆಯಾಗುತ್ತಿದೆ. ಇದರಿಂದ ಸಮುದಾಯದ ಅಭಿವೃದ್ಧಿ ಕುಂಠಿತವಾಗಲಿದೆ ಎಂದರು.
ಮೇ 21 ರಂದು ರಾಜನಹಳ್ಳಿ ಗುರುಪೀಠದಲ್ಲಿ ಶ್ರೀವಾಲ್ಮೀಕಿ ಮಹಾಸಂಸ್ಥಾನದ ಶ್ರೀವಾಲ್ಮೀಕಿ ಪ್ರಸನ್ನಾಂದ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯ ಮಟ್ಟದ ತುರ್ತು ಸಭೆ ಕರೆಯಲಾಗಿದೆ. ಸಭೆಯಲ್ಲಿ ಸಮಾಜದ ರಾಜಕೀಯ ಮುಖಂಡರು, ಧರ್ಮದರ್ಶಿಗಳು ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಅನ್ಯ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಕ್ಕೆ ಸೇರಿಸಬಾರದು, ಎಸ್ ಟಿ ಜನಸಂಖ್ಯೆ ಗೆ ಅನುಗುಣವಾಗಿ ಈಗಿರುವ ಮೀಸಲಾತಿಯನ್ನು ಶೇ. 3 ರಿಂದ ಶೇ 7 ಕ್ಕೆ ಹೆಚ್ಚಿಸಬೇಕು ಹಾಗೂ ನಕಲಿ ಪ್ರಮಾಣ ಪತ್ರವನ್ನು ಕೊಡುವ ಅಧಿಕಾರಿ ಮತ್ತು ಪಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಗುಜ್ಜಲ್ ನಿಂಗಪ್ಪ, ಕಟಗಿ ಜಂಬಯ್ಯ, ಶ್ರೀಕಂಠ, ವೆಂಕೋಬ ಪೂಜಾರ್, ಬಸವರಾಜ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ