ಕಾವೇರಿ ನೀರು ವಿವಾದ: ಪ್ರಧಾನಿ ಜೊತೆ ಚರ್ಚೆಗೆ ಬಿಜೆಪಿ ಮುಖಂಡರು ಸಮಯ ನಿಗದಿಪಡಿಸಲಿ : ಎಂ.ಬಿ ಪಾಟೀಲ

ಬೆಂಗಳೂರು

   ಕರ್ನಾಟಕ ಹಾಗೂ ತಮಿಳುನಾಡು ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಬಿಜೆಪಿಯವರಿಗೆ ತಮ್ಮದೇ ಪ್ರಧಾನಮಂತ್ರಿಯನ್ನು ಭೇಟಿ ಮಾಡಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯ ತೀವ್ರ ಕೊರತೆಯಿಂದಾಗಿ ನಮ್ಮ ರಾಜ್ಯದಲ್ಲೇ ಕುಡಿಯುವ ನೀರಿಲ್ಲ. ಅದರಲ್ಲೂ, ಬೆಂಗಳೂರಿಗೆ ತುಂಬಾ ಸಮಸ್ಯೆಯಾಗುವ ಪರಿಸ್ಥಿತಿ ಇದೆ. ಹೀಗಿರುವಾಗ, ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಆದೇಶ ಪಾಲಿಸಲು ಅಸಾಧ್ಯ ಎಂದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಈಗಾಗಲೇ ಸರ್ವಪಕ್ಷ ಸಭೆ ನಡೆಸಿದ್ದು, ಚರ್ಚೆಗಾಗಿ ಪ್ರಧಾನಿ ಸಮಯ ಕೇಳಿದ್ದರೂ ಅವರಿನ್ನೂ ಸಮಯ ಕೊಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಬಿಜೆಪಿಯ ಇತರ ಸಂಸದರು ಇವರೆಲ್ಲಾ ಸೇರಿ ಪ್ರಧಾನಿ ಜೊತೆ ಚರ್ಚೆಗೆ ಸಮಯ ನಿಗದಿಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

    ನಮ್ಮ ಪರಿಸ್ಥಿತಿಯನ್ನು ಕೇಂದ್ರದ ಕಾನೂನು ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು. ಕಾವೇರಿ ನೀರು ಹಂಚಿಕೆ ಸಂಬAಧ ಸಂಕಷ್ಟ ಸಂದರ್ಭಕ್ಕೆ ಅನ್ವಯವಾಗುವ ಸೂತ್ರ ಇಲ್ಲದಿರುವುದು ತೊಡಕಾಗಿದೆ. ನೀರು ಹರಿಸಲು ಅಸಾಧ್ಯವಾದ ಪರಿಸ್ಥಿತಿ ಇರುವುದರಿಂದ ಸುಪ್ರೀಂಕೋರ್ಟ್ ಮೊರೆ ಹೋಗದೆ ಬೇರೆ ದಾರಿ ಇಲ್ಲ ಎಂದರು.

   ನಾಡಿನ ನೆಲ, ಜಲದ ವಿಷಯಗಳು ಬಂದಾಗ ವಿಪಕ್ಷಗಳೂ ಸೇರಿದಂತೆ ನಾವೆಲ್ಲರೂ ಸೇರಿ ಸಂಘಟಿತ ಪ್ರಯತ್ನ ಮಾಡಬೇಕಾಗುತ್ತದೆ. ಈ ವಿಷಯದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ. ನೆಲ, ಜಲದ ವಿಷಯ ಬಂದಾಗ ತಮಿಳುನಾಡಿನವರು ಹೇಗೆ ಒಗ್ಗಟ್ಟಾಗಿ ಧ್ವನಿ ಎತ್ತುತ್ತಾರೋ ನಾವು ಕೂಡ ಅದೇ ತರಹ ಮಾಡಬೇಕು. ಆದರೆ ನಮ್ಮಲ್ಲಿ ಇದಕ್ಕೆ ಸಂಬಂಧಿಸಿದಂತೆ ಎಲ್ಲೋ ಸ್ವಲ್ಪ ಅಪವಾದ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.

    ನೀರು ಹರಿಸುವುದನ್ನು ನಾವಾಗಿಯೇ ನಿಲ್ಲಿಸಿ ಕೋರ್ಟಿನ ಮುಂದೆ ಹೋದರೆ ಆಗ ಕೋರ್ಟು ಅದನ್ನು ಬೇರೆ ರೀತಿ ಭಾವಿಸುವುದು ಈ ಹಿಂದೆ ಹಲವಾರು ಸಲ ನಮ್ಮ ಅನುಭವಕ್ಕೆ ಬಂದಿದೆ. ಇಂತಹ ಸೂಕ್ಷಗಳನ್ನು ಗಮನದಲ್ಲಿರಿಸಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪಾಟೀಲ ವಿವರಿಸಿದರು.

    ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕಾದ ವಿಷಯವನ್ನು ಯಾರೂ ಹಗುರವಾಗಿ ತೆಗೆದುಕೊಂಡಿಲ್ಲ. ಜಲ ಸಂಪನ್ಮೂಲ ಸಚಿವರಾದ ಡಿಸಿಎಂ ಡಿ.ಕೆ ಶಿವಕುಮಾರ್ ಅವರಗಲೀ ಅಥವಾ ಸಂಬಂಧಿಸಿದ ಅಧಿಕಾರಿಗಳಾಗಲೀ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ನ್ಯಾಯಾಲಯದ ಮುಂದಕ್ಕೆ ಸ್ಪಷ್ಟವಾದ ಮಾಹಿತಿಯನ್ನು ಒದಗಿಸುವುದು ಮುಖ್ಯ. ಅದಕ್ಕಾಗಿ ಅಧಿಕಾರಿಗಳು ಸ್ಥಳಕ್ಕೆ ಹೋಗುತ್ತಾರೋ ಅಥವಾ ಆನ್ ಲೈನ್ ನಂತಹ ಮೂಲಗಳಿಂದ ಮಾಹಿತಿಗಳನ್ನು ಕಲೆ ಹಾಕುತ್ತಾರೋ ಎನ್ನುವುದು ಮುಖ್ಯವಲ್ಲ. ನ್ಯಾಯಾಲಯಕ್ಕೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡುವುದಷ್ಟೇ ಮುಖ್ಯ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap