ಬಳ್ಳಾರಿ:
1982 ರಿಂದ ಪ್ರತಿ ವರ್ಷ ನಡೆಯುವ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮದ ಮೂಲಕ ಅಪೌಷ್ಠಿಕತೆಯ ವಿರುದ್ದ ಹೋರಾಡಲು ವ್ಯಾಪಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಬಳ್ಳಾರಿ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಇವರ ಆಶ್ರಯದಲ್ಲಿ ಬಳ್ಳಾರಿ ತಾಲೂಕಿನ ಕುಡುತಿನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೆಪ್ಟಂಬರ್ ತಿಂಗಳು ಪೌಷ್ಠಿಕ ಆಹಾರ ಮಾಸಾಚಾರಣೆ ಅಂಗವಾಗಿ ಪ್ರತಿ ವಾರ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕನಿಷ್ಟ 2 ವರ್ಷಗಳವರೆಗೆ ಎದೆ ಹಾಲು ನೀಡುವದರಿಂದ ಮಗುವು ಸಶಕ್ತವಾಗಿ ಮತ್ತು ಆರೋಗ್ಯವಾಗಿ ಬೆಳೆಯಲು ಸಹಾಯಕವಾಗುತ್ತದೆ. ಆರು ತಿಂಗಳಿನಿಂದ ಪೂರಕ ಆಹಾರ ಪಡೆಯುವ ಮಗು ಉತ್ತಮ ಬೆಳವಣಿಗೆ ಹೊಂದುತ್ತದೆ. ಮನೆಯಲ್ಲಿಯೇ ತಯಾರಿಸಿದ ಮಂದವಾದ ಮೃದು ಸಾಂದ್ರತೆಯಿರುವ ಚಮಚೆಯಲ್ಲಿ ಸುಲಭವಾಗಿ ನಿಲ್ಲುವ ಆಹಾರ ಸುಲಭವಾಗಿ ಜೀರ್ಣಗೊಂಡು ಮಗುವಿನ ಹೊಟ್ಟೆ ತುಂಬಿಸುತ್ತದೆ ಎಂದು ಅವರು ಹೇಳಿದರು.
ಪ್ರಾಣಿ ಆಹಾರ ಮಕ್ಕಳಿಗೆ ವಿಶೇಷ ಆಹಾರವಾಗಿದೆ. ದ್ವಿದಳ ಧಾನ್ಯ-ಬಟಾಣಿ ಬೀನ್ಸ್, ಅವರೆ ಮತ್ತು ಬೇಳೆ ಕಾಳುಗಳು ಸಹ ಪೌಷ್ಟಿಕಾಂಶದ ಉತ್ತಮ ಮೂಲಗಳು. ವಿಟಮಿನ್ ಸಿ ಹೆಚ್ಚಿರುವ ಆಹಾರಗಳು ಕಬ್ಬಿಣಾಂಶದ ಹೀರುವಿಕೆಗೆ ಸಹಕಾರಿ ಎಂದು ವಿವರಿಸಿದ ಅವರು, ದಟ್ಟ ಹಸಿರೆಲೆಗಳು ಮತ್ತು ಕಿತ್ತಳೆ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು ವಿಟಮಿನ್ ಎ ನಿಂದ ಸಂಪದ್ಬರಿತವಾಗಿದೆ ಮತ್ತು ಇವುಗಳು ಕಡಿಮೆ ಸೋಂಕುಗಳಾಗಲು ಸಹಕಾರಿಯಾಗಿದೆ ಎಂದರು.
ಬೆಳೆಯುವ ಮಗುವಿಗೆ ಮೇಲಿಂದ ಮೇಲೆ ಆಹಾರ ಮತ್ತು ಅಲ್ಪ ಆಹಾರದ ಅವಶ್ಯಕತೆ ಇದೆ. ವಿವಿಧ ರೀತಿಯ ಆಹಾರ ನೀಡಿರಿ ಎಂದು ಹೇಳಿದ ಅವರು ಬೆಳೆಯುವ ಮಗುವಿಗೆ ಆಹಾರ ಪ್ರಮಾಣದಲ್ಲಿ ಏರಿಕೆ ಅಗತ್ಯವಿದೆ. ಬೆಳೆಯುತ್ತಿರುವ ಮಗುವಿಗೆ ತಾನೇ ತಿನ್ನಲು ಕಲಿಸಿ ಪ್ರೋತ್ಸಾಹಿಸಿರಿ ಎಂದು ಸಲಹೆ ನೀಡಿದರು.
ಮಗು ಖಾಯಿಲೆ ಬಿದ್ದಾಗ, ಖಾಯಿಲೆಯಿಂದ ಗುಣವಾದ ನಂತರ ಹೆಚ್ಚು ಆಹಾರ ಕೊಡಿರಿ ಏಕೆಂದರೆ ಕಳೆದ ಬೆಳವಣಿಗೆಯನ್ನು ಮರಳಿ ಪಡೆಯಲು ಸಹಾಯ ಮಾಡಿ ಇದು ಕುಂಠಿತ ಬೆಳವಣಿಗೆ ಹಾಗೂ ಅಪೌಷ್ಠಿಕತೆಯನ್ನು ತಡೆಯುತ್ತದೆ. ತಾಯಿಯ ಆರೋಗ್ಯದ ಕಡೆಗೂ ಗಮನಹರಿಸಿ ಎಂದು ಸಲಹೆ ನೀಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯಾಧಿಕಾರಿಗಳಾದ ಡಾ.ರವಿಚಂದ್ರ,ಡಾ.ಸುರೇಶ, ಸಹಾಯಕ ಶೀಶು ಅಭಿವೃದ್ದಿ ಯೋಜನಾಧಿಕಾರಿ ಕಲಾವತಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಗೋವಿಂದ ಪೂಜಾರಿ, ಐಸಿಡಿಎಸ್ ಮೇಲ್ವಿಚಾರಕಿ ಸುಶೀಲಮ್ಮ, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ