ಯಾದಗಿರಿ
ಕೌಟುಂಬಿಕ ಕಲಹ ಹಿನ್ನೆಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಹೆಸರಲ್ಲಿ ರೈತ ಮಹಿಳೆ ಆತ್ಮಹತ್ಯೆ ಎಂದು ಕುಟುಂಬಸ್ಥರೇ ಐದು ಲಕ್ಷ ರೂ ಪರಿಹಾರ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವಂತಹ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ದಂಡ ಸೊಲಾಪುರ ತಾಂಡಾದಲ್ಲಿ ನಡೆದಿದೆ. 2023 ಅಕ್ಟೋಬರ್ 7 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದು ಸಹಜ ಸಾವಲ್ಲ, ಹಿಂಸೆ ನೀಡಿ ಪ್ರಚೋದನೆಯಿಂದ ಸಾವಾಗಿದೆ ಎಂದು ಬಂಜಾರ ಮುಖಂಡರು ಆರೋಪಿಸಿದ್ದು, ತನಿಖೆ ಮಾಡಿ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮೋನಾಬಾಯಿ ಪುನಿಮ್ ಚಂದ್ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಮೋನಾಬಾಯಿಗೆ ಸಂತೋಷ್, ಠಾಕೂರ್ ಮತ್ತು ಗೇನುಸಿಂಗ್ ಎಂಬ ಮೂವರು ಅಣ್ಣಂದಿರಿದ್ದಾರೆ. ಶೀಲಾಭಾಯಿ, ಪದ್ಮಾವತಿ ಮತ್ತು ಸರಸ್ವತಿ ಎಂಬ ಮೂವರು ಅತ್ತಿಗೆಯರಿದ್ದಾರೆ. ಇವರೇ ಆಕೆಗೆ ದೈಹಿಕ, ಮಾನಸಿಕ ಹಿಂಸೆ ನೀಡಿಲ್ಲದೇ ಹೊಡೆದಿರುವ ಶಂಕೆ ವ್ಯಕ್ತವಾಗಿದ್ದು, ನಿರಂತರ ಕಿರಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅನುಮಾನಿಸಲಾಗಿದೆ. ಸದ್ಯ ಯುವತಿ ಸಾವಿನ ಸುತ್ತ ಸಾಕಷ್ಟು ಅನುಮಾನದ ಹುತ್ತಗಳು ಹುಟ್ಟಿಕೊಂಡಿವೆ.
ಇನ್ನು ಸಾಯುವ ಮುನ್ನ ವಿಡಿಯೋ ಮಾಡಿರುವ ಮೋನಾಬಾಯಿ, ತಮ್ಮ ಬಂಜಾರ ಭಾಷೆಯಲ್ಲಿ ಎಲ್ಲವನ್ನು ವಿವರಿಸಿದ್ದಾರೆ. ‘ನಮ್ಮ ಅತ್ತಿಗೆ ನನ್ನ ಜೊತೆ ಭಯಂಕರ ಜಗಳ ಮಾಡಿದ್ದಾರೆ. ನಮ್ಮ ಅಣ್ಣ ನನಗೆ ಬಹಳ ಹೊಡೆದಿದ್ದಾರೆ. ನನ್ನಂತ ಪರಿಸ್ಥಿತಿ ಯಾರಿಗೂ ಬರಬಾರದು. ನಾನು ವಿಷ ಕುಡಿದು ಸಾಯುತ್ತಿದ್ದೇನೆ’ ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾರೆ.ಇಲ್ಲಿ ಒಂದು ಗಮನಿಸಬೇಕಾದ ವಿಷಯವೆಂದರೆ, ಮೃತ ಯುವತಿ ಮೋನಾಬಾಯಿ ಮಾಡಿದ ವಿಡಿಯೋದಲ್ಲಿ ಯಾರ ಹೆಸರನ್ನು ಹೇಳಿಲ್ಲ. ಹೀಗಾಗಿ ಆಕೆಯೆ ಸಾವಿಗೆ ಕಾರಣ ಯಾರು ಮತ್ತು ಯಾಕೆ ಎಂಬುದು ತನಿಖೆ ಮೂಲಕ ಹೊರ ಬರಬೇಕಿದೆ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡವರ ಹೆಸರಿನಲ್ಲಿ ಕುಟುಂಬಸ್ಥರು ಪರಿಹಾರ ಪಡೆದು ಸರ್ಕಾರಕ್ಕೆ ವಂಚನೆ ಕೂಡ ಮಾಡಿದ್ದಾರೆ.
