ಬೆಂಗಳೂರು
ಬಸ್ಸು ರೈಲುಗಳಲ್ಲಿ ಲಗೇಜ್ ಬ್ಯಾಗ್ಗಳಲ್ಲಿ ಒರಿಸ್ಸಾದಿಂದ ಗಾಂಜಾ ಸಾಗಿಸಿಕೊಂಢು ಬಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಬೊಮ್ಮನಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿ ೫೬ ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಿಹಾರದ ಬರ್ತಾಪುರ್ನ ಸಂಜಯ್ಕುಮಾರ್ದಾಸ್ ಹಾಲನಾಯಕನಹಳ್ಳಿಯ ಚಂದ್ರಪ್ರಸಾದ್ ಶರ್ಮಾ, ಜನಗನಪಾಳ್ಯದ ಆಶೀಶ್ ರಬೀದಾಸ್ ಹಾಗೂ ದಿಬಾಕರ್ ಬಿಸೋಯಿ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ತಿಳಿಸಿದ್ದಾರೆ.
ಆರೋಪಿ ಸಂಜಯ್ಕುಮಾರ್ ದಾಸ್ನಿಂದ ೪ ಕೆಜಿ ೯೦ ಗ್ರಾಂ ಚಂದ್ರಪ್ರಸಾದ್ ಶರ್ಮಾನಿಂದ ೩೧ ಕೆಜಿ ೫೯೦ ಗ್ರಾಂ, ಆಶೀಶ್ನಿಂದ ೧೩ ಕೆಜಿ ೨೦೦ ಗ್ರಾಂ, ದಿಬಾಕರ್ನಿಂದ ೭ ಕೆಜಿ ೮೦ ಗ್ರಾಂ ಸೇರಿ ೨೮ ಲಕ್ಷ ಮೌಲ್ಯದ ೫೬ ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಒರಿಸ್ಸಾದ ಸಿಮಿಲಿಗುಡಾ ಪ್ರದೇಶದಿಂದ ಗಾಂಜಾವನ್ನು ಸೂಟ್ಕೇಸ್ ಹಾಗೂ ಏರ್ಬ್ಯಾಗ್ಗಳಲ್ಲಿ ತುಂಬಿಕೊಂಡು ಬಸ್ ಹಾಗೂ ರೈಲುಗಳಲ್ಲಿ ನಗರಕ್ಕೆ ತೆಗೆದುಕೊಂಡು ಬರುತ್ತಿದ್ದರು.ಬೊಮ್ಮನಹಳ್ಳಿ ಸುತ್ತಮುತ್ತಲ ಪ್ರದೇಶಗಳ ಐಟಿ-ಬಿಟಿ ಉದ್ಯೋಗಿಗಳು, ಖಾಸಗಿ ಕಂಪನಿಗಳ ನೌಕರರು, ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಗಾಂಜಾ ಮಾರಾಟ ಮಾಡಿ, ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಬೊಮ್ಮನಹಳ್ಳಿಯ ಗಾಂಜಾ ಗಿರಾಕಿಯೊಬ್ಬರು ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡು ಇನ್ಸ್ಪೆಕ್ಟರ್ ಡಿ.ಆರ್ ನಾಗರಾಜ್ ನೇತೃತ್ವದ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಅವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
