ಬೆಂಗಳೂರು
ಸಾಲ ತೀರಿಸಲು 30 ಸಾವಿರ ಹಣ ಕೊಡದ ಕಾರಣಕ್ಕೆ ಗುಟ್ಕಾ ವ್ಯಾಪಾರಿಯನ್ನು ಸುಲಿಗೆ ಮಾಡಿಸಿದ್ದ ದೂರದ ಸಂಬಂಧಿ ಹಾಗೂ ಮೂವರು ಸುಲಿಗೆಕೋರರು ಸೇರಿ ನಾಲ್ವರನ್ನು ಕೋರಮಂಗಲ ಪೊಲೀಸರು ಬಂಧಿಸಿಗಿದ್ದಾರೆ.
ಕೋರಮಂಗಲದ ಮೇಸ್ತ್ರಿ ಪಾಳ್ಯದ ಮುರುಗನ್ (36), ಆಡುಗೋಡಿಯ ಹೇಮಂತ ಅಲಿಯಾಸ್ ಗೂಳು (30), ವಿವೇಕ್ ನಗರದ ಅರುಣ್ ಕುಮಾರ್ ಅಲಿಯಾಸ್ ಅರುಣ್ (34), ನೀಲಸಂದ್ರದ ಬಸವರಾಜ ಅಲಿಯಾಸ್ ಬಸು (33) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 7 ಲಕ್ಷ 40 ಸಾವಿರ ನಗದು, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಸಿಟಿ ಮಾರುಕಟ್ಟೆಯ ವಿಮಲಾ ಗುಟ್ಕಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುನಿಯಪ್ಪ(50) ಅವರು ಅಂಗಡಿಗಳಿಗೆ ಗುಟ್ಕಾಗಳನ್ನು ಸರಬರಾಜು ಮಾಡಿ ಹಣ ಪಡೆದುಕೊಂಡು ಮಾಲೀಕರಿಗೆ ನೀಡುತ್ತಿದ್ದರು.
ಇವರ ದೂರದ ಸಂಬಂಧಿಯಾಗ ಆರೋಪಿ ಮುರುಗನ್ ಮಾಡಿಕೊಂಡಿದ್ದ ಸಾಲ ತೀರಿಸಲು ಮುನಿಯಪ್ಪನ ಬಳಿ 30 ಸಾವಿರ ರೂ.ಗಳನ್ನು ಕೇಳಿದ್ದ. ಹಣ ಕೊಡಲು ಮುನಿಯಪ್ಪ ನಿರಾಕರಿಸಿದ್ದರಿಂದ ಅವರ ಬಳಿ ಇರುವ ಹಣ ದೋಚಲು ಮುರುಗನ್ ಸಂಚು ರೂಪಿಸಿದ್ದ.ಸ್ನೇಹಿತರಾದ ಹೇಮಂತ, ಅರುಣ್ ಹಾಗೂ ಬಸವರಾಜನಿಗೆ ಮುನಿಯಪ್ಪನ ಬಳಿ ಹಣ ಇರುವುದನ್ನು ಹೇಳಿ ಸುಲಿಗೆ ಮಾಡಲು ಸಂಚು ರೂಪಿಸಿದ್ದರು.
ಅದರಂತೆ ಕಳೆದ ಏ. 22 ರಂದು ಗುಟ್ಕಾಗಳನ್ನು ಚಂದಾಪುರದ ಪರಮೇಶ್ ಅಂಗಡಿಗೆ ಕೊಟ್ಟು 6 ಲಕ್ಷ ಹಣ ಪಡೆದುಕೊಂಡು ಕೋರಮಂಗಲದ ಮೇಸ್ತ್ರಿಪಾಳ್ಯದ ಭಾಮೈದನ ಮನೆಯಲ್ಲಿ ಉಳಿದುಕೊಂಡಿದ್ದರು.ಮರುದಿನ ಏ. 23ರಂದು ಬೆಳಿಗ್ಗೆ 10ರ ವೇಳೆ 6 ಲಕ್ಷ ಹಣವಿದ್ದ ಬ್ಯಾಗ್ ತೆಗೆದುಕೊಂಡು ಕೃಪಾನಿಧಿ ಕಾಲೇಜ್ ಬಸ್ ಸ್ಟಾಂಡ್ಗೆ ಹೋಗಲು ವೀರಯೋಧ ವನ ಪಾರ್ಕ್ ಬಳಿ ನಡೆದುಕೊಂಡು ಹೋಗುವಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಬ್ಯಾಗ್ ಕಸಿದು ಪರಾರಿಯಾಗಿದ್ದರು.
ಬ್ಯಾಗ್ನಲ್ಲಿದ್ದ ಹಣದಲ್ಲಿ 1 ಲಕ್ಷ ಮಾತ್ರ ಮುರುಗನ್ಗೆ ಕೊಟ್ಟು ಉಳಿದೆಲ್ಲ ಹಣವನ್ನು ಮೂವರು ಆರೋಪಿಗಳು ಹಂಚಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಕೋರಮಂಗಲ ಪೆÇಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ಆರ್. ವರ್ಣಿ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








