ತುಮಕೂರು:
ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯಲ್ಲಿ ಆಗಸ್ಟ್ 31 ರಂದು ನಡೆಯಲಿರುವ ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳ ಚುನಾವಣೆಯ ಬಹಿರಂಗ ಪ್ರಚಾರ ಇಂದು ಬೆಳಗ್ಗೆ 7ಗಂಟೆಗೆ ಅಂತ್ಯವಾಗಲಿದೆ.
ಜಿಲ್ಲೆಯ ಮಧುಗಿರಿ ಹಾಗೂ ಚಿಕ್ಕನಾಯಕನಹಳ್ಳಿ ಪುರಸಭೆ, ಕೊರಟಗೆರೆ ಮತ್ತು ಗುಬ್ಬಿ ಪಟ್ಟಣ ಪಂಚಾಯತಿಗಳಿಗೂ ಆಗಸ್ಟ್ 31 ರಂದೇ ಚುನಾವಣೆ ನಡೆಯುತ್ತಿದೆ. ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಗೆಳ ಅವಧಿ ಎಂದರೆ ಆ.29ರ ಬೆಳಗ್ಗೆ 7 ಗಂಟೆಯಾಗಿದ್ದು, ಆನಂತರದ ಚುನಾವಣಾ ಬಹಿರಂಗ ಪ್ರಚಾರಗಳಿಗೆ ಅವಕಾಶವಿರುವುದಿಲ್ಲ. ರಾಜಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರವಾಗಿ ಇತರೆ ಯಾರೇ ಆಗಲಿ ಬಹಿರಂಗ ಚುನಾವಣಾ ಪ್ರಚಾರ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರ ಪ್ರಕರಣ 41 ರಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ಪೌರ ಸಭೆಗಳ ಅಧಿನಿಯಮ 1964 ರ ಪ್ರಕರಣ 32ರ ಪ್ರಕಾರ ಯಾರೇ ವ್ಯಕ್ತಿ ಮತದಾನ ನಡೆಯುವ ದಿನಾಂಕ ಅಥವಾ ದಿನಾಂಕಗಳಲ್ಲಿ ಆ ಮತದಾನ ಕೇಂದ್ರದೊಳಗೆ ಅಥವಾ 100 ಗಜದೊಳಗೆ ಯಾವುದೇ ಸಾರ್ವಜನಿಕ, ಖಾಸಗಿ ಸ್ಥಳದಲ್ಲಿ ಮತ ಪ್ರಚಾರ ಮಾಡುವುದು, ಮತ ಕೋರುವುದು, ಮತದಾರನ ಮನವೊಲಿಸುವುದು ಚಿನ್ಹೆಯನ್ನು ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದೆ. ಇವುಗಳನ್ನು ಉಲ್ಲಂಘಿಸಿ ನಡೆದುಕೊಂಡಿದ್ದೇ ಆದಲ್ಲಿ ಕಾನೂನಿನ ಪ್ರಕಾರ ಶಿಕ್ಷೆಗೊಳಪಡಿಸಲಾಗುವುದು ಎಂದು ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಆಗಸ್ಟ್ 29ರ ಬೆಳಗ್ಗೆ 7 ಗಂಟೆಯ ನಂತರ ಮತದಾರರಲ್ಲದ ಬೆಂಬಲಿಗರು, ರಾಜಕೀಯ ಪಕ್ಷದ ಪದಾಧಿಕಾರಿಗಳು, ಮುಖಂಡರು, ಪಕ್ಷದ ಕಾರ್ಯಕರ್ತರು ವಾರ್ಡ್ ವ್ಯಾಪ್ತಿಯಲ್ಲಿ ತಮ್ಮ ವಾಸ್ತವ್ಯ ಮುಂದುವರೆಸಿದಲ್ಲಿ ಮುಕ್ತ ಚುನಾವಣೆಗೆ ಧಕ್ಕೆಯಾಗುವ ಸಂಭವ ಇರುವುದರಿಂದ ಮತದಾರರಲ್ಲದ ವ್ಯಕ್ತಿಗಳು ಆ ವಾರ್ಡ್ನ ವ್ಯಾಪ್ತಿಯಿಂದ ಹೊರಗೆ ಹೋಗಲು ಸೂಚಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆ ವಾರ್ಡಿನ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪ, ಸಮುದಾಯ ಭವನ ಇತರೆ ಸ್ಥಳಗಳಲ್ಲಿ ವಾರ್ಡ್ನ ವ್ಯಾಪ್ತಿಗೆ ಒಳಪಡದ ವ್ಯಕ್ತಿಗಳು ಇರುವಂತಿಲ್ಲ. ಪ್ರವಾಸಿಗರ ವಸತಿ ಗೃಹಗಳಲ್ಲಿ ಮತ್ತು ಪ್ರವಾಸ ಮಂದಿರದಲ್ಲಿಯೂ ಇರತಕ್ಕದ್ದಲ್ಲ. ವಾರ್ಡ್ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವಾಹನಗಳು ಮತ್ತು ಜನಸಂಚಾರ ಕಂಡುಬಂದರೆ ಅಂತಹವರ ಮೇಲೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭೆ :
ಬುಧವಾರ ಬೆಳಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳು ಮಾದರಿ ನೀತಿ ಸಂಹಿತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಮತದಾನ ಸಂದರ್ಭದಲ್ಲಿ ಯಾವುದೇ ಗಂಭೀರ ಸಮಸ್ಯೆ ಉಂಟಾದರೆ ಕೂಡಲೇ ದೂರವಾಣಿಗೆ ಮಾಹಿತಿ ನೀಡಲು ಸೆಕ್ಟರ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಕಂಡುಬಂದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶಿವಕುಮಾರ್ ಸೇರಿದಂತೆ ಚುನಾವಣಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಭಾಗವಹಿಸಿದ್ದರು.
ಮತದಾನ ಸಂದರ್ಭದಲ್ಲಿ ಯಾವುದೇ ಗಂಭೀರ ಸಮಸ್ಯೆ ಉಂಟಾದರೆ ಕೂಡಲೇ ದೂರವಾಣಿಗೆ ಮಾಹಿತಿ ನೀಡಲು ಸೆಕ್ಟರ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಕಂಡುಬಂದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಡಾ.ರಾಕೇಶ್ಕುಮಾರ್ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
