ಬಳ್ಳಾರಿ:
ಬಳ್ಳಾರಿಯಲ್ಲಿ ದ್ವೈಮಾಸಿಕ ಕೃಷಿ ಕಾರ್ಯಾಗಾರ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ನಡೆಯಿತು.
ಈ ಕಾರ್ಯಾಗಾರದಲ್ಲಿ ಕೃಷಿ ಹಗೂ ಕೃಷಿ ಸಂಬಂಧಿತ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹಗರಿ, ಕೃಷಿ ವಿಸ್ತರಣಾ ಶಿಕ್ಷಣ ಘಟಕ ಹಡಗಲಿ ಹಾಗೂ ಸಿರಗುಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಪಾಲ್ಗೊಂಡಿದ್ದರು. ಸಿರಗುಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಬಸವಣ್ಣೆಪ್ಪ ಅವರು ನೇರ ಕೂರಿಗೆ ಭತ್ತದಲ್ಲಿ ಕಳೆ ನಿರ್ವಹಣೆಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಹಗರಿ ಕೃಷಿ ವಿಜ್ಞಾನ ಕೇಂದ್ರದ ಡಾ.ಎಂ.ಆರ್.ಗೋವಿಂದಪ್ಪ, ಆನಂದಕುಮಾರ, ಡಾ.ಬಿ.ಕೆ.ರಮೇಶ ಅವರು ಜಿಲ್ಲೆಯ ಹಲವಾರು ಪ್ರದೇಶದಿಂದ ರೋಗ ಮತ್ತು ಕೀಟಬಾಧಿತ ಬೆಳೆಗಳ ಮಾದರಿಗಳನ್ನು ಪರಿಶೀಲಿಸಿ ಅವುಗಳ ನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿ ನಿಡಿದರು. ಕೃಷಿ ವಿಜ್ಞಾನಿ ಚಂದ್ರನಾಯಕ ಅವರು ಮೆಕ್ಕೆ ಜೋಳದಲ್ಲಿ ತೆನೆಕೊಳೆ ರೋಗದ ತೀವ್ರತೆಯ ಬಗ್ಗೆ ವಿವರಿಸಿ ನಿರ್ವಹಣೆಯ ಮಾಹಿತಿಯನ್ನು ತಿಳಿಸಿಕೊಟ್ಟರು.
ಕೃಷಿ ಇಲಾಖೆಯ ಬಳ್ಳಾರಿ ಮತ್ತು ಹೊಸಪೇಟೆ ಉಪನಿರ್ದೇಶಕರು ಕೃಷಿ ಇಲಾಖೆ ಸಿಬ್ಬಂದಿ ಸಕಾಲದಲ್ಲಿ ರೈತರ ಸಮಸ್ಯೆಗಳಿಗೆ ವಿಜ್ಞಾನಿಗಳ ಸಂಪರ್ಕದೊಂದಿಗೆ ಸ್ಪಂದಿಸಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ದಿವಾಕರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ಡಾ.ಬಿ.ಸಿ.ವಡ್ಡೇರ್ ವಂದಿಸಿದರು.







