ಹಾನಗಲ್ಲ :
ಜಗತ್ತಿನ ಧಾರ್ಮಿಕ ಕ್ಷೇತ್ರದ ಕ್ರಾಂತಿಕಾರಿ ಗುರುಗಳಲ್ಲೊಬ್ಬರಾದ ಜೈನಮುನಿ ತರುಣ ಮುನಿಸಾಗರ ಮಹರಾಜ ಅವರು ಸಲ್ಲೇಖನದ ಮೂಲಕ ಜಿನೈಕ್ಯರಾಗಿರುವ ಸಂಗತಿ ಅತ್ಯಂತ ದು:ಖಕರವಾಗಿದ್ದು, ದೇಶಕ್ಕೆ ಓರ್ವ ಉತ್ತಮ ಸಂತನನ್ನು ಕಳೆದುಕೊಂಡಂತಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಸಂತಾಪ ಸೂಚಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಪಾದಚಾರಿಯಾಗಿ ಸಂಚರಿಸಿ ಧಾರ್ಮಿಕ ವಿಷಯಗಳ ಉಪನ್ಯಾಸ ನೀಡುತ್ತ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ದ ಮಹಾತ್ಮರಾಗಿದ್ದಾರೆ. ಸಮಾಜವನ್ನು ತಿದ್ದುವುದು, ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವುದಕ್ಕಾಗಿ ಜಗತ್ತಿನ 122 ದೇಶಗಳಲ್ಲಿ ಮಹಾವೀರ ವಾಣಿ ಮೂಲಕ ಹೆಸರುವಾಸಿಯಾಗಿದ್ದವರು ಭಾರತೀಯ ಒಬ್ಬ ಸಂತರು ಎಂಬುದೇ ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ತಮ್ಮ 14ನೇ ವಯಸ್ಸಿನಲ್ಲಿ 1988ರಲ್ಲಿ ದೀಕ್ಷೆ ಪಡೆಯುವ ಮೂಲಕ ತ್ಯಾಗ, ಸಂಯಮ, ಅಹಿಂಸೆ ಪ್ರತಿಪಾದಿಸಿದವರು. ಮಧ್ಯಪ್ರದೇಶ, ಮಹರಾಷ್ಟ್ರ, ಗುಜರಾತ ಸೇರಿದಂತೆ ಹಲವು ರಾಜ್ಯಗಳು ಇವರನ್ನು “ಸರ್ಕಾರಿ ಅತಿಥಿ” ಎಂದು ಪರಿಗಣಿಸಿ ಗೌರವಿಸಿವೆ. ವ್ಯಕ್ತಿಯ ಚಾರಿತ್ರ್ಯ ಬದಲಾವಣೆ ಮಾಡಬೇಕಾದ ವಿಷಯದಲ್ಲಿ ಚರಿತ್ರೆಯನ್ನು ನಿರ್ಮಾಣ ಮಾಡಿದ್ದರು.
ಅತ್ಯಂತ ರೋಚಕವಾದ `ಕಡವೆ ಪ್ರವಚನ’ದ ಮೂಲಕ ಲಕ್ಷಾಂತರ ಭಕ್ತರನ್ನು ಹೊಂದಿದ್ದ ಅವರು, ಧಾರ್ಮಿಕ ನೆಲೆಗಟ್ಟಿನಲ್ಲಿ ಎಲ್ಲರನ್ನೂ ಮೀರಿಸುವ ಮಟ್ಟದಲ್ಲಿ ಆಧ್ಯಾತ್ಮಿಕ ಸಾಧನೆ-ಬೋಧನೆ ಮಾಡಿದ್ದರು. ಅಂಥ ಮಹಾತ್ಮರನ್ನು ಕಳೆದುಕೊಂಡಿರುವುದು ಸಮಾಜಕ್ಕೆ ದೊಡ್ಡ ಹಾನಿಯಾಗಿದೆ. ಅವರನ್ನು ಬೇರೆಯವರಿಗೆ ಹೋಲಿಕೆ ಮಾಡಲು ಸಾಧ್ಯವಾಗದು. ನೂರಾರು ಧಾರ್ಮಿಕ ಬೋಧನೆಗಳ ಪುಸ್ತಕಗಳನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಬೆಂಗಳೂರು, ರಾಣೆಬೆನ್ನೂರು, ಹಾವೇರಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಮಾತುಗಳಿಂದ ಪ್ರಭಾವಿತನಾಗಿದ್ದೇನೆ ಎಂದು ಉದಾಸಿ ನೆನಪಿಸಿಕೊಂಡರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
