ಹಾನಗಲ್ಲ
ಹಾನಗಲ್ಲ ಪುರಸಭೆಗೆ ಇಪ್ಪತ್ಮೂರು ಸದಸ್ಯರ ಆಯ್ಕೆ ಮಾಡಬೇಕಾದ ಹಾನಗಲ್ಲ ಪುರಸಭೆ ಚುನಾವಣೆಯಲ್ಲಿ 57 ಅಭ್ಯರ್ಥಿಗಳು ಸ್ಪರ್ಧೆ ಒಡ್ಡಿದ್ದು, ಬಿಜೆಪಿ ಕಾಂಗ್ರೇಸ್ ನಡುವೆ ನೇರ ಹಣಾಹಣಿ ಇದ್ದರೂ ಜೆಡಿಎಸ್ನ 6 ಹಾಗೂ ಪಕ್ಷೇತರ 5 ಅಭ್ಯರ್ಥಿಗಳು 11 ಕಡೆ ತ್ರಿಕೋನ ಸ್ಪರ್ಧೆಗೆ ಕಾರಣರಾಗಿದ್ದು, ಉಳಿದ 12 ವಾರ್ಡುಗಳಲ್ಲಿ ಬಿಜೆಪಿ ಕಾಂಗ್ರೇಸ್ ನೇರ ಹಣಾಹಣಿಯಲ್ಲಿದೆ.
ಬಿಜೆಪಿ ಸ್ಥಳಿಯ ನಾಯಕರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಹಾಲಿ ಶಾಸಕ ಸಿ.ಎಂ.ಉದಾಸಿ ಹಾಗೂ ಸಂಸದ ಶಿವಕುಮಾರ ಉದಾಸಿ ಅವರ ಉಸ್ತುವಾರಿಯಲ್ಲಿ ಚುನಾವಣೆ ಪ್ರಚಾರ ನಡೆದಿದೆ. ಆದರೆ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೇಸ್ ನಾಯಕ ಮಾಜಿ ಸಚಿವ ಮನೋಹರ ತಹಶೀಲ್ದಾರ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳ ಚುನಾವಣೆ ಪ್ರಚಾರಕ್ಕೆ ಹೊಸ ಸೇರ್ಪಡೆಯಾಗಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ತುರುಸಿನ ಚುನಾವಣೆಗೆ ಕೈ ಜೋಡಿಸಿದ್ದಾರೆ. ಇದರೊಂದಿಗೆ ಕಾಂಗ್ರೇಸ್ ರಾಜ್ಯ ಮಟ್ಟದ ನಾಯಕರಾದ ಈಶ್ವರ ಖಂಡ್ರೆ ಪ್ರಚಾರ ಸಭೆ ನಡೆಸಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿದ್ದಾರೆ. ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಜಮೀರಅಹ್ಮದ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೇಸ್ ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದು, ಆಡಳಿತಾತ್ಮಕವಾಗಿ ಸಹಕಾರ ಸಿಗುವುದರ ಜೊತೆಗೆ ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಅನುದಾನ ತರುತ್ತೇವೆ ಎಂಬ ಭರವಸೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಚಾರ ಕಾರ್ಯದಲ್ಲಿದೆ. ಹಾನಗಲ್ಲ ಪುರಸಭೆಗೆ ಹಿಂದಿನ ಅವಧಿಯಲ್ಲಿ ಕಾಂಗ್ರೇಸ್ ಸರಕಾರ ಸರಿಯಾಗಿ ಅಭಿವೃದ್ಧಿ ಅನುದಾನ ನೀಡಲಿಲ್ಲ. ಈ ಬಾರಿ ಮತ್ತೆ ಬಿಜೆಪಿ ಆಡಳಿತ ಹಾನಗಲ್ಲ ಪುರಸಭೆಯದಾಗಲಿದೆ ಎಂಬ ವಿಶ್ವಾಸ ಬಿಜೆಪಿ ಪಕ್ಷದ್ದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
