ಹುಳಿಯಾರು
ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರ ಅವರ ಕಿರಿಯ ಮಗ ಡಾ.ಎಚ್.ಡಿ.ರಮೇಶ್ ಅಖಾಡಕ್ಕಿಳಿದಿದ್ದಾರೆ.
ಹುಳಿಯಾರಿನ ಜಿಲ್ಲಾ ಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಹಾಗೂ ಜೆಡಿಎಸ್ ಮುಖಂಡ ಹಾರೂನ್ ಷರೀಪ್ ಅವರ ಮನೆಗೆ ಬೇಟಿ ನೀಡಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ಚುನಾವಣೆಯ ತಂತ್ರಗಾರಿಗೆ ಬಗ್ಗೆ ಹೋಬಳಿಯ ಕೆಲ ಮುಖಂಡರ ಜೊತೆ ಚರ್ಚಿಸಿ, ನಂತರ ದೇವೇಗೌಡರ ಗೆಲುವಿಗೆ ಒಗ್ಗಟ್ಟಿನಿಂದ ಬೆಂಬಲಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕೆಲ ಕಾರ್ಯಕರ್ತರು ಮಾತನಾಡಿ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಎಲ್ಲರೂ ಹೇಮಾವತಿ ನೀರಿನ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ನೀರಿನ ಹಾಹಾಕಾರ ಹೆಚ್ಚಿದ್ದು ತಂದೆಯವರ ಬಳಿ ಹೇಳಿ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುವಂತೆ ಮನವಿ ಮಾಡಿದರು. ಅಲ್ಲದೆ ಹೇಮಾವತಿ ಯೋಜನೆ ಸ್ಥಗಿತಗೊಂಡಿದ್ದು ತಮ್ಮ ಅಣ್ಣನವರಾದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನ ಸೆಳೆದು ಕಾಮಗಾರಿಗೆ ವೇಗ ಕೊಡುವಂತೆ ಕೇಳಿಕೊಂಡರು.
ಇದಕ್ಕೆ ಸ್ಪಂಧಿಸಿದ ಡಾ.ಎಚ್.ಡಿ.ರಮೇಶ್ ಅವರು ಇದುವರೆವಿಗೂ ತಾನು ತಂದೆ ಮತ್ತು ಅಣ್ಣನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡದೆ ತಾನಾಯಿತು ತನ್ನ ಕೆಲಸವಾಯಿತು ಎಂದಿದ್ದೆ. ಇಬ್ಬರ ಬಳಿಯೂ ಒಂದೇ ಒಂದು ಸಣ್ಣ ಬೇಡಿಕೆಯನ್ನೂ ಸಹ ಅವರ ಬಳಿ ಇಟ್ಟಿಲ್ಲ. ಆದರೆ ಇಲ್ಲಿನ ನೀರಿನ ಹಾಹಾಕಾರದ ತೀರ್ವವಾಗಿದ್ದು ಜನರ ನೋವಿನ ಅರಿವಾಗಿದೆ. ಹಾಗಾಗಿ ಚುನಾವಣೆ ಮುಗಿದ ಬಳಿದ ಖುದ್ದು ತಂದೆ ಮತ್ತು ಅಣ್ಣನ ಬಳಿ ತುಮಕೂರು ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸುವಂತೆ ಹೇಳುವುದಲ್ಲದೆ ಪಟ್ಟು ಹಿಡಿದು ಕೆಲಸ ಮಾಡಿಸುತೇನೆ. ಈ ನಿಟ್ಟಿನಲ್ಲಿ ತಂದೆಯವರು ಗೆದ್ದರೆ ಕೇಂದ್ರ ಸರ್ಕಾರದಿಂದಲೂ ವಿಶೇಷ ಅನುದಾನ ತಂದು ಹಳ್ಳಿಹಳ್ಳಿಗೂ ನಿರಿನ ವ್ಯವಸ್ಥೆ ಕಲ್ಪಿಸಬಹುದಾಗಿದ್ದು ಈ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿ ಎಂದರು.
ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ, ತಾಪಂ ಸದಸ್ಯ ಏಜೆಂಟ್ ಕುಮಾರ್, ಪಪಂ ಸದಸ್ಯರುಗಳಾದ ವೆಂಕಟೇಶ್, ರಾಘವೇಂದ್ರ, ಗೀತಾಶೋಕ್ಬಾಬು, ತರಕಾರಿ ರಾಮಣ್ಣ, ಏಜಾಸ್, ವೆಂಕಟಮ್ಮ, ಗಣೇಶ್, ಪುಟ್ಟಿಬಾಯಿ, ಕೆಂಕೆರೆಶಿವಕುಮಾರ್, ಶ್ರೀನಿವಾಸ್, ಜಾಫರ್, ಜಲಾಲ್ ಸಾಬ್, ಅಫ್ಜಲ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
