ಬಳ್ಳಾರಿ
ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದು ಇದೀಗ ದೇಶ, ನಾಯಕತ್ವ ಮತ್ತು ಆಡಳಿತ ಬದಲಾವಣೆ ಕಾರಣಬೇಕಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಹೇಳಿದರು.
ಮೈತ್ರಿ ಪಕ್ಷದ ಅಭ್ಯರ್ಥಿ ವಿಎಸ್ ಉಗ್ರಪ್ಪ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರಿಗೆ ಈ ಚುನಾವಣೆ ಬಹುದೊಡ್ಡ ಅಸ್ತ್ರವಾಗಿದೆ. ಇಲ್ಲಿನ ಮತದಾರರು ಬುದ್ಧಿವಂತರು ಮತ್ತು ಪ್ರಬುದ್ಧರಿದ್ದಾರೆ. ಉಗ್ರಪ್ಪ ಮತ್ತೊಮ್ಮೆ ಗೆದ್ದರೆ ಬಳ್ಳಾರಿಗರ ಧ್ವನಿಯಾಗಿ ಸಂಸತ್ ನಲ್ಲಿ ಮಾತನಾಡಲಿದ್ದಾರೆ.
ಕಳೆದ ಉಪ ಚುನಾವಣೆಯಲ್ಲಿ ನೀಡಿದ ಅಭೂತಪೂರ್ವ ಮತಗಳನ್ನು ಮತ್ತೊಮ್ಮೆ ನೀಡಲಿದ್ದಾರೆ ಎನ್ನುವ ನಂಬಿಕೆ ನನ್ನಲ್ಲಿದೆ. ನಮಗೆ ಹಣ ಮುಖ್ಯವಲ್ಲ. ಮತದಾರರ ವಿಶ್ವಾಸ ಮುಖ್ಯ. ಇಲ್ಲಿ ಬಡತನವೂ ಇದೆ. ಶ್ರೀಮಂತಿಕೆಯೂ ಇದೆ. ಉದ್ಯೋಗ, ನೀರು, ವಿದ್ಯುತ್ ಸೇರಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಗುರಿ ನಮ್ಮದಿದ್ದು, ಮತದಾರರು ತಮ್ಮ ಮತವನ್ನು ಜವಾಬ್ದಾರಿಯಿಂದ ಹಾಕಬೇಕು ಎಂದರು.
ಮೈತ್ರಿ ಅಭ್ಯರ್ಥಿ ಉಗ್ರಪ್ಪ ಮಾತನಾಡಿ, ಕಳೆದ ಉಪಚುನಾವಣೆಯಲ್ಲಿ ಜನತೆ ನನ್ನ ಕೈ ಹಿಡಿದಿದ್ದಾರೆ. ಮೈತ್ರಿ ಆಡಳಿತವನ್ನು ಮೆಚ್ಚಿಕೊಂಡಿರುವ ಇಲ್ಲಿನ ಜನತೆ ಈ ಬಾರಿಯೂ ನನ್ನನ್ನು ಗೆಲ್ಲಿಸಿಕೊಡಲಿದ್ದಾರೆ. ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಗೆದ್ದು ಬಂದಲ್ಲಿ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ ಎಂದರು.
ವಿಧಾನಪರಿಷತ್ ಸದಸ್ಯರಾದ ಕೆಸಿ ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಸಚಿವರಾದ ಇ.ತುಕಾರಾಮ್, ಪಿಟಿ ಪರಮೇಶ್ವರ ನಾಯಕ್, ಶಾಸಕರಾದ ಆನಂದ್ ಸಿಂಗ್, ಭೀಮಾ ನಾಯ್ಕ, ಬಿ.ನಾಗೇಂದ್ರ, ಮಾಜಿ ಶಾಸಕ ಅನಿಲ್ ಲಾಡ್, ಡಿಸಿಸಿ ಅಧ್ಯಕ್ಷ ಜಿಎಸ್ ಮಹಮ್ಮದ್ ರಫೀಕ್, ಪ್ರಚಾರ ಸಮಿತಿ ಅಧ್ಯಕ್ಷ ಜೆಎಸ್ ಆಂಜನೇಯಲು ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
