ದಾವಣಗೆರೆ:
ನಮ್ಮದು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಲ್ಲ. ಈ ನಾಡಿನ ಆರೂವರೆ ಕೋಟಿ ಜನರ ಸರ್ಕಾರವಾಗಿದ್ದು, ಸಮಯ ವ್ಯರ್ಥ ಮಾಡದೇ ಜನರ ಸಂಕಷ್ಟ ಬಗೆಹರಿಸುವ ಕೆಲಸ ಮಾಡುತ್ತಿದ್ದೇವೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಎಸ್.ಎಸ್.ಕನ್ವೆನ್ಷನ್ ಹಾಲ್ನಲ್ಲಿ ಶನಿವಾರದಿಂದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಏರ್ಪಡಿಸಿರುವ 29ನೇ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ರಾಜ್ಯ ಮಟ್ಟದ ಸಮ್ಮೇಳನ ಸಂಕಲ್ಪ-2018ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ಆರೂವರೆ ಕೋಟಿ ಜನರ ಸರ್ಕಾರವಾಗಿದ್ದು, ರಾಜ್ಯದ ಪ್ರತಿಯೊಂದು ಕುಟುಂಬಗಳ ಸಂಕಷ್ಟ ಬಗೆಹರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು, ಜನರು ತರಿಗೆಯ ರೂಪದಲ್ಲಿ ಸರ್ಕಾರಕ್ಕೆ ಪಾವತಿಸುವ ಹಣ ಸದ್ವಿನಿಯೋಗ ಆಗುವ ಮೂಲಕ ನಾವು-ನೀವು ಸೇರಿ ನಾಡು ಕಟ್ಟುವ ಕೆಲಸ ಮಾಡೋಣ ಎಂದು ಜನತೆಗೆ ಕರೆ ನೀಡಿದರು.
ಮಾಧ್ಯಮಗಳ ವಿರುದ್ಧ ಕಿಡಿ:
ತಮ್ಮ ಭಾಷಣದ ವೇಳೆಯಲ್ಲಿ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ ಅವರು, ಇತ್ತೀಚೆಗೆ ಒಂದು ದಿನ ರಾತ್ರಿ ಸುದ್ದಿ ವಾಹಿನಿಯೊಂದು ನೋಡುತ್ತಿದ್ದ ಸಂದರ್ಭದಲ್ಲಿ ರಾತ್ರಿ 11.30ರ ವೇಳೆಗೆ ಶಿವಮೊಗ್ಗದ ಆರ್ಎಫ್ಓ ಒಬ್ಬರು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದನ್ನು ವಿರೋಧಿ ಶವವನ್ನು ಇಟ್ಟುಕೊಂಡು ರೈತರು ಪ್ರತಿಭಟಿಸುತ್ತಿದ್ದ ಸುದ್ದಿ ಬರುತ್ತಿತ್ತು. ತಕ್ಷಣವೇ ನಾನು ಶಿವಮೊಗ್ಗದ ಜಿಲ್ಲಾಧಿಕಾರಿಗಳಿಗೆ ಫೋನು ಮಾಡಿ, ವರದಿ ಕೇಳಿ, ಯಾವುದೇ ಕಾರಣಕ್ಕೂ ಒಕಲೆಬ್ಬಿಸಬಾರದು. ಹಾಗೂ ಒಕ್ಕಲೆಬ್ಬಿಸಲು ಯತ್ನಿಸಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಸೂಚಿಸಿದೆ. ಹೀಗೆ ಸ್ಥಳದಲ್ಲಿಯೇ ಪರಿಹಾರ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಆದರೆ, ಬೆಳ್ಳಿಗ್ಗೆ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ ಅಲ್ಲಿ ಶವ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದ ವ್ಯಕ್ತಿ, ಪ್ರತಿಭಟನೆಗೇ ಹೋಗಿರಲಿಲ್ಲ. ಮನೆಯಲ್ಲೇ ನಿಧನರಾಗಿದ್ದರು. ಆದರೆ, ಆ ಶವವನ್ನು ಅಲ್ಲಿ ತಂದು ಪ್ರತಿಭಟನೆ ಮಾಡುತ್ತಿದ್ದರು. ಈ ವಾಸ್ತವನ್ನು ಅರಿಯದೇ ಸುದ್ದಿ ವಾಹಿನಿಗಳು ಸುದ್ದಿ ಬಿತ್ತರಿಸಿದರೇ ಹೇಗೆ ಎಂದು ಪ್ರಶ್ನಿಸಿದರು.
ಮೊನ್ನೆ ಬೆಳಿಗ್ಗೆಯಿಂದ ಸಂಜೆಯ ವರೆಗೆ ರೈತರ ಸಭೆ ಮಾಡಿ, ಸಭೆ ಮುಗಿಯುವ ಹೊತ್ತಿಗೆ ಯುವಕನೊಬ್ಬ ಸೋಯಾಬಿನ್ಗೆ ಬೆಲೆ ಸಿಗುತ್ತಿಲ್ಲ. ಸರಿಯಾದ ಬೆಲೆ ಕೊಡಿಸಿದರೆ, ಇನ್ನೂ ಹೆಚ್ಚಿನ ಇಳುವರಿ ತಗೆಯುತ್ತೇನೆ. ಆಗ ನೀವು ನಮ್ಮ ಸಾಲ ಮನ್ನಾ ಮಾಡುವ ಅವಶ್ಯಕತೆ ಇಲ್ಲ. ಬೇಕಾದರೆ, ರೈತರೇ ಸಾಲ ನೀಡುತ್ತಾರೆ ಎಂಬುದಾಗಿ ಹೇಳಿದ್ದರು. ಅಲ್ಲಿ ನಾನು ಬೆಳಿಗ್ಗೆಯಿಂದ ಸಂಜೆಯ ವರೆಗೆ ರೈತರ ಸಮಸ್ಯೆ ಬಗೆಹರಿಸಲು ಚರ್ಚಿಸಿದ್ದ್ಯಾವುದು ಸುದ್ದಿ ವಾಹಿನಿಗಳಲ್ಲಿ ಬರಲಿಲ್ಲ. ಆದರೆ, ಕೊನೆಗೆ ಆ ಯುವಕ ಮಾತನಾಡಿದನ್ನು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದ ಯುವಕ ಎಂಬುದಾಗಿ ಸುದ್ದಿ ಬಂತು. ಹಾಗಾದರೆ, ನಾವು ಬೆಳಿಗ್ಗೆಯಿಂದ ಸಂಜೆಯ ವರೆಗೆ ಪಟ್ಟ ಶ್ರಮ ವ್ಯರ್ಥವೇ ಎಂದು ಹೇಳಿದರು.
ಇನ್ನೂ ಮಾಧ್ಯಮಗಳು ರೈತರ ಸಾಲ ಮನ್ನಾ ಇನ್ನೂ ಆಗಿಲ್ಲ ಎಂಬುದಾಗಿ ಸುದ್ದಿ ಮಾಡುವ ಮೂಲಕ ರೈತರಲ್ಲಿ ಗೊಂದಲ ಮೂಡಿಸುತ್ತಿವೆ. ಒಮ್ಮೆಯೇ 45000 ಕೋಟಿ ರೈತರ ಸಾಲ ಮನ್ನಾ ಮಾಡಲು ಒಂದು ನಿಯಮಾವಳಿ ಬೇಡವೇ? ಸರ್ಕಾರ ಬೊಕ್ಕಸದಲ್ಲಿ ಹಣ ತುಂಬಿಕೊಂಡು ಯಾವುದೇ ಸರ್ಕಾರ ಬಜೆಟ್ ಮಾಡುವುದಿಲ್ಲ. ಸಾರ್ವಜನಿಕರು ತೆರಿಗೆ ರೂಪದಲ್ಲಿ ಕೊಟ್ಟ ಹಣದಲ್ಲಿ ಸರ್ಕಾರ ನಡೆಸುತ್ತೇವೆ ಹಾಗೂ ಯೋಜನೆಗಳನ್ನು ರೂಪಿಸುತ್ತೇವೆ. ಮಾಧ್ಯಮಗಳು ಹೀಗೆ ಗೊಂದಲ ಮೂಡಿಸಿದರೆ, ಅಕಸ್ಮಾತ್ ಸಾಲ ಮನ್ನಾ ಆಗಲ್ಲ ಎಂಬುದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡರೇ ಯಾರು ಹೊಣೆ. ಸುಖಾಸುಮ್ಮನೇ ಜನರಲ್ಲಿ ತಪ್ಪು ಮಾಹಿತಿ ನೀಡಬೇಡಿ ಎಂದು ಮಾಧ್ಯಮಗಳಿಗೆ ಸಲಹೆ ನೀಡಿದರು.
ಸಾಂದರ್ಭಿಕವಾಗಿ ನಾನು ಅಧಿಕಾರಕ್ಕೆ ಬಂದಿದ್ದೇನೆ ಎಂಬುದಾಗಿ ಹೇಳಿದ್ದನ್ನೇ ಕೆಲ ಮಾಧ್ಯಮಗಳು ಸಾಂದರ್ಭಿಕ ಶಿಶು ಎಂಬುದಾಗಿ ಸುದ್ದಿ ಮಾಡಿ, ಗೊಂದಲ ಸೃಷ್ಟಿಸಿದವು. ಹೀಗೆ ಹೆಜ್ಜೆ, ಹೆಜ್ಜೆಗೂ ಕಾಲು ಎಳೆದರೆ ಹೇಗೆ ಕೆಲಸ ಮಾಡುವುದು. 12 ವರ್ಷಗಳ ಹಿಂದೆ ಇದ್ದ ಶಕ್ತಿ ಈಗ ನನ್ನಲಿಲ್ಲ. ಭಗವಂಥನ ಇಚ್ಚೆಯಿಂದ 2ನೇ ಬಾರಿ ಅಧಿಕಾರ ನಡೆಸುತ್ತಿದ್ದೇನೆ. ಪ್ರೋತ್ಸಾಹ ನೀಡಿದರೆ, ಇನ್ನೂ ಉತ್ಸಾಹದಿಂದ ಕೆಲಸ ಮಾಡುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
