ಚಿತ್ರದುರ್ಗ,
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅಕ್ಟೋಬರ್ 28ರಂದು ಮತದಾನ ನಡೆಯಲಿದ್ದು, ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ವೀಕ್ಷಕರು ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಎಂಸಿಸಿ ನೋಡಲ್ ಅಧಿಕಾರಿ ಹಾಗೂ ವಿವಿಧ ಮಾದರಿ ನೀತಿ ಸಂಹಿತೆ ಅನುಷ್ಠಾನ ಸಮಿತಿ ಅಧಿಕಾರಿಗಳೊಂದಿಗೆ ಚುನಾವಣೆ ಸಂಬಂಧ ಕೈಗೊಳ್ಳಲಾದ ಕ್ರಮಗಳ ಕುರಿತು ಕೈಗೊಳ್ಳಲಾದ ಪರಿಶೀಲನಾ ಸಭೆಯಲ್ಲಿ ಅವರು ಸೂಚನೆ ನೀಡಿದರು.
ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳ 32 ಮತದಾನ ಕೇಂದ್ರಗಳಲ್ಲಿ ಮತದಾನ ನಡೆಯಲಿದ್ದು, 13,681 ಪುರುಷ ಹಾಗೂ 7342 ಮಹಿಳಾ ಹಾಗೂ ಇತರೆ 1 ಮತದಾರರು ಸೇರಿ 21,024 ಮತದಾರರಿದ್ದಾರೆ. ಆಯೋಗದ ನಿರ್ದೇಶನದ ಅನ್ವಯ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲು ರಚಿಸಲಾಗಿರುವ ತಂಡಗಳು ಸಕ್ರಿಯವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಆರು ತಾಲ್ಲೂಕುಗಳಲ್ಲಿ ತಲಾ ಮೂರು ತಂಡಗಳಂತೆ ಒಟ್ಟು 15 ಎಫ್ಎಸ್ಟಿ ತಂಡ, ತಲಾ ಒಂದರಂತೆ ವಿಎಚ್ಟಿ ತಂಡ, ತಲಾ ಒಂದರಂತೆ ಆರು ವಿವಿಟಿ ತಂಡ, ತಲಾ ಒಂದರಂತೆ ಆರು ಎಂಸಿಸಿ ತಂಡ, ಮೊಳಕಾಲ್ಮುರು ಒರ್ವ ಸೆಕ್ಟರ್ ಅಧಿಕಾರಿ ಉಳಿದ ಐದು ತಾಲ್ಲೂಕುಗಳಲ್ಲಿ ತಲಾ ಇಬ್ಬರು ಸೇರಿ ಒಟ್ಟು 11 ಸೆಕ್ಟರ್ ಅಧಿಕಾರಿಗಳಿದ್ದಾರೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ವಿದ್ಯುನ್ಮಾನ ಮಾಧ್ಯಮ, ಮುದ್ರಣ ಮಾಧ್ಯಮಗಳಲ್ಲಿನ ಜಾಹೀರಾತು ವೀಕ್ಷಿಸಲು ಮತ್ತು ಚುನಾವಣೆಗೆ ಸಂಬಂಧಿಸಿದ ಜಾಹೀರಾತುಗಳಿಗೆ ಅನುಮತಿ ನೀಡಲು ಎಂಸಿಎಂಸಿ ತಂಡ ಕ್ಯಾಶ್ ಸೀಸರ್ ರೆಡ್ರೆಸಲ್ ತಂಡ ಕಂಪ್ಲೇಂಡ್ ಮಾನಿಟರಿಂಗ್ ತಂಡ ರಚಿಸಲಾಗಿದೆ.
ಎಲ್ಲ ತಂಡಗಳ ಮುಖ್ಯಸ್ಥರು ಜಾಗೃತಿಯಿಂದ ಕರ್ತವ್ಯನಿರ್ವಹಿಸಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾನಿ ಅನುಷ್ಠಾನಗೊಳಿಸಲು ಸೂಚಿಸಿದರು. ಮತದಾನ ಸಿಬ್ಬಂದಿಗೆ ಅಕ್ಟೋಬರ್ 16 ರಂದು ಮೊದಲು ತರಬೇತಿ, 21 ರಂದು ಎರಡನೇ ತರಬೇತಿ ನೀಡಲಾಗಿದ್ದು 27 ರಂದು ಮೂರನೇ ತರಬೇತಿ ನಡೆಯಲಿದ್ದು, ನಿಯೋಜಿಸಿದ ಎಲ್ಲಾ ಸಿಬ್ಬಂದಿಗಳು ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು. ಒಟ್ಟು 32 ಮತದಾನ ಕೇಂದ್ರಗಳಿಗೆ ಪಿಆರ್ಒ ಮತ್ತು ಇನ್ನಿತರೆ ಮತದಾನ ಸಿಬ್ಬಂದಿಗಳು ಸೇರಿ 196 ಜನ ಮತದಾನ ಸಿಬ್ಬಂದಿಗಳಿಗೆ ತರಬೇತಿ ನೀಡಿ ನಿಯೋಜಿಸಲಾಗಿದೆ. 49 ಮಂದಿ ಮೈಕ್ರೋ ಅಬ್ಸ್ರ್ವರ್ ನೇಮಕ ಮಾಡಲಾಗಿದೆ ಎಂದು ಚುನಾವಣಾ ವೀಕ್ಷಕರಿಗೆ ಜಿಲ್ಲಾಧಿಕಾರಿ ಹಾಗೂ ಸಹಾಯಕಿ ಚುನಾವಣಾಧಿಕಾರಿ ಕವಿತಾ ಎಸ್.ಮನ್ನಿಕೇರಿ ವಿವರಿಸಿದರು.
ಕೋವಿಡ್ ಮಾರ್ಗಸೂಚಿ ಪಾಲನೆಗೆ ಸೂಚನೆ: ಮತದಾನದ ಸಮಯದಲ್ಲಿ ಪ್ರತಿ ಬೂತ್ಗೆ ಮೆಡಿಕಲ್ ಕಿಟ್ ಒದಗಿಸಬೇಕು. ಈ ವೇಳೆ ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್, ಸ್ಯಾನಿಟೈಸರ್ ಹೊಂದಿರುವ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಲು ವೀಕ್ಷಕರು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.
ಮತದಾನ ಮಾಡಲು ಆಗಮಿಸುವ ಮತದಾರರು ಮಾಸ್ಕ್ ಧರಿಸುವಂತೆ, ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿ ಚುನಾವಣಾ ದೂರುಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಯೋಗೇಶ, ಎಸ್ಪಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ