ಮಧುಗಿರಿ
ತಾಲ್ಲೂಕಿನ ಬ್ಯಾಲ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗರಗೊಂಡನಹಳ್ಳಿ ಗ್ರಾಮಸ್ಥರು ಗುರುವಾರ ನೀರಿಗಾಗಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಗ್ರಾಮದಲ್ಲಿ ನೀರಿಗಾಗಿ ಕೊಳವೆ ಬಾವಿ ಕೊರೆಸಲಾಗಿತ್ತು. ಅದರಲ್ಲಿ ಪಂಪು ಮೋಟರು ಅಳವಡಿಸಲಾಗಿರಲಿಲ್ಲ. ಅದಕ್ಕಾಗಿ ರಿಬೋರ್ ಮಾಡಲೆಂದು ಗುರುವಾರ ಬಂದಿದ್ದ ಲಾರಿಯವರು ಸಾಧ್ಯವಾಗದ ಕಾರಣ ಕೆಲಸ ಸ್ಥಗಿತಗೊಳಿಸಿ ವಾಪಾಸ್ ಹೊರಟಿದ್ದರು. ತಕ್ಷಣ ಲಾರಿಯನ್ನು ತಡೆದು ಪ್ರತಿಭಟಿಸಲಾಗಿದೆ. ಆಗ ತಾಲ್ಲೂಕು ಅಭಿಯಂತರರು ಈ ಹಿಂದೆ ಬಳಸುತ್ತಿದ್ದು, ಈಗ ನೀರಿಲ್ಲದೆ ಖಾಲಿಯಾಗಿರುವ ಮತ್ತೊಂದು ಕೊಳವೆಬಾವಿಯನ್ನು ರಿಬೋರ್ ಮಾಡಲು ಸೂಚಿಸಿದಾಗ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ.
ಗ್ರಾಪಂ ಅಧ್ಯಕ್ಷೆ ಪವಿತ್ರ ಮತ್ತು ಪಿಡಿಓ ಗೋಪಾಲಕೃಷ್ಣ ಪ್ರಗತಿಯೊಂದಿಗೆ ಮಾತನಾಡಿ, ಈಗಾಗಲೆ ಸಿಂಗರಗೊಂಡನಹಳ್ಳಿ ಮತ್ತು ಮುದ್ದಯ್ಯನಪಾಳ್ಯದ ನೀರಿನ ಸಮಸ್ಯೆಯನ್ನು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಶೀಘ್ರದಲ್ಲೆ ಸಮಸ್ಯೆ ಬಗೆಹರಿಯಲಿದೆ. ಅಲ್ಲಿಯ ತನಕ ಟ್ಯಾಂಕರ್ಗಳಲ್ಲಿ ನೀರು ಪೂರೈಸಲಾಗುವುದು ಎಂದು ತಿಳಿಸಿದ್ದಾರೆ. ಗ್ರಾಪಂ ಸದಸ್ಯೆ ಭಾಗ್ಯಮ್ಮ, ನರಸಿಂಹಮೂರ್ತಿ, ಮಂಜುನಾಥ, ಶ್ರೀನಿವಾಸ್, ಯಾಕೂಬ್, ರಫಿ ಅಹಮದ್, ಕದರಪ್ಪ, ಲಕ್ಷ್ಮಮ್ಮ, ಪ್ಯಾರಿಜಾನ್, ನೂರ್ ಜಹಾನ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/02/bylaya.jpg)