ತುಮಕೂರು:
ತುಮಕೂರು ಮಹಾನಗರ ಪಾಲಿಕೆಗೆ ಇದೇ ಆಗಸ್ಟ್ 31 ರಂದು (ಶುಕ್ರವಾರ) ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 292 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಮಂಗಳವಾರ (ಆಗಸ್ಟ್ 21) ಬೆಳಗ್ಗೆ 11 ಗಂಟೆಯಿಂದ ಪಾಲಿಕೆ ಕಚೇರಿಯಲ್ಲಿ ಎಲ್ಲ 7 ಚುನಾವಣಾಧಿಕಾರಿಗಳು ನಾಮಪತ್ರ ಪರಿಶೀಲನೆ ಕಾರ್ಯ ನಡೆಸಿದರು.
ಅಂತಿಮವಾಗಿ ಪರಿಶೀಲನಾ ಕಾರ್ಯ ಮುಗಿದ ನಂತರ 265 ನಾಮಪತ್ರಗಳು ಕ್ರಮಬದ್ಧವಾದವು. ಉಳಿದ ಹಲವು ನಾಮಪತ್ರಗಳು ಹಾಗೂ ಅಭ್ಯರ್ಥಿಗಳು ವಿವಿಧ ಕಾರಣಗಳಿಂದಾಗಿ ತಿರಸ್ಕರಿಸಲ್ಪಟ್ಟಿದ್ದಾರೆ.
ಕ್ರಮಬದ್ಧವಾಗಿರುವ ನಾಮನಿರ್ದೇಶಿತ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ನಿಂದ 35, ಜೆಡಿಎಸ್ನಿಂದ 35, ಬಿಜೆಪಿಯಿಂದ 33, ಸಿಪಿಐನಿಂದ 2, ಸಿಪಿಐಎಂನಿಂದ 3, ಬಿಎಸ್ಪಿಯಿಂದ 8, ಎಸ್ಡಿಪಿಐನಿಂದ 2 ಹಾಗೂ ಪಕ್ಷೇತರರ 147 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆ ಕಚೇರಿಯ ನಿಗದಿತ ಚುನಾವಣಾಧಿಕಾರಿಗಳ ಕೊಠಡಿ ಮುಂದೆ ನಾಮಪತ್ರ ಸಲ್ಲಿಸಿರುವ ಸ್ಪರ್ಧಾಕಾಂಕ್ಷಿಗಳೆಲ್ಲರೂ ಹಾಜರಿದ್ದರು. ನಾಮಪತ್ರ ಸಲ್ಲಿಸಿರುವ ಪ್ರತಿಯೊಬ್ಬರನ್ನೂ ಚುನಾವಣಾಧಿಕಾರಿಗಳು ಕೊಠಡಿಯೊಳಕ್ಕೆ ಆಹ್ವಾನಿಸಿ, ಅವರ ನಾಮಪತ್ರಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಅವರ ಸಮ್ಮುಖದಲ್ಲೇ ಪರಿಶೀಲಿಸಿದರು. ಬಳಿಕ ಅದು ಸ್ವೀಕೃತವಾಗಿರುವ ಅಥವಾ ತಿರಸ್ಕøತವಾಗಿರುವ ಮಾಹಿತಿಯನ್ನು ನೇರವಾಗಿ ಸ್ಪರ್ಧಾಕಾಂಕ್ಷಿಗಳಿಗೆ ನೀಡಿದರು.
ಸ್ಪರ್ಧಾಳುಗಳ ವಿಭಿನ್ನ ಪ್ರತಿಕ್ರಿಯೆ:
ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕಮ್ಯೂನಿಸ್ಟ್, ಬಿ.ಎಸ್.ಪಿ. ಅಭ್ಯರ್ಥಿಗಳಲ್ಲದೆ, ಸ್ವತಂತ್ರವಾಗಿ ಸ್ಪರ್ಧಿಸಲಿರುವವರೆಲ್ಲರೂ ಪಾಲಿಕೆ ಕಚೇರಿಯಲ್ಲಿ ಉತ್ಸಾಹದಿಂದಲೇ ಕಾಣಿಸಿಕೊಂಡರು. ಅಲ್ಲೂ ಸಹ ಪರಸ್ಪರ “ನೀವು ಯಾವ ವಾರ್ಡ್ನಿಂದ ಸ್ಪರ್ಧಿಸುತ್ತಿದ್ದೀರಿ? ನಿಮಗೆ ಟಿಕೆಟ್ ಸಿಕ್ಕಿತೇ?” ಎಂದು ಕೆಲವರು ಮಾತನಾಡಿಕೊಂಡರೆ, ಇನ್ನು ಕೆಲವು ಸ್ಪರ್ಧಾಳುಗಳು “ನಿಮ್ಮ ಆಶೀರ್ವಾದ ಇರಲಿ” ಎಂದು ಎದುರಿಗೆ ಸಿಕ್ಕವರನ್ನು ಕೈಮುಗಿದು ಕೇಳಿಕೊಂಡರು. ಕೆಲವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
“ಪಕ್ಷದಲ್ಲಿ ನಮಗೆ ಮೋಸ ಮಾಡಿಬಿಟ್ಟರು. ಟಿಕೆಟ್ಗಳನ್ನು ಮಾರಿಕೊಂಡುಬಿಟ್ಟರು. ಎಂತೆಂಥವರಿಗೋ ಟಿಕೆಟ್ ಕೊಟ್ಟಿದ್ದಾರೆ. ಕೊನೆ ಗಳಿಗೆಯಲ್ಲಿ ನಮ್ಮ ಮುಖಂಡರೆನ್ನಿಸಿಕೊಂಡವರು ನಮ್ಮ ಫೋನ್ ಕರೆಗಳನ್ನೂ ರಿಸೀವ್ ಮಾಡಲಿಲ್ಲ. ಅದಕ್ಕೇ ನಾನೀಗ ಸ್ವತಂತ್ರ ಅಭ್ಯರ್ಥಿ ಆಗಿ ಕಣಕ್ಕಿಳಿಯುತ್ತಿದ್ದೇನೆ” ಎಂದು ಮತ್ತೆ ಕೆಲವರು ಆಕ್ರೋಶದಿಂದಲೇ ಹೇಳಿಕೊಳ್ಳುತ್ತ, ಎದುರಿಗೆ ಸಿಕ್ಕವರ ಸಹಕಾರ ಕೋರಿದರು.
ಓರ್ವ ಸ್ವತಂತ್ರ ಸ್ಪರ್ಧಿಯಂತೂ “ನನಗೆ ಮೋಸ ಆಗಿದೆ. ಸ್ವತಂತ್ರವಾಗಿ ನಾನೇನೋ ನಾಮಪತ್ರ ಸಲ್ಲಿಸಿದ್ದೇನೆ. ಆದರೆ ನಮ್ಮ ವಾರ್ಡ್ನಲ್ಲಿ …..ರವರು …. ಪಕ್ಷದಿಂದ ಸ್ಪರ್ಧಿಸಿದ್ದಾರೆ. ನಾನೂ ಬಡವ. ಅವರೂ ಬಡವರು. ಆದ್ದರಿಂದ ಅವರ ಪರವಾಗಿಯೇ ಕೆಲಸ ಮಾಡಲು ನಿರ್ಧರಿಸಿದ್ದೇನೆ” ಎಂದರಲ್ಲದೆ, “…ಪಕ್ಷದ ಅಭ್ಯರ್ಥಿ ಈಗಾಗಲೇ ಅಲ್ಲಿ ಹೆಂಡಕ್ಕೆ ದುಡ್ಡು ಹಂಚುತ್ತಿದ್ದಾನೆ. ಅದಕ್ಕೇ ನಾವು ಜನರಿಗೆ ದುಡ್ಡು ಪಡೆಯಿರಿ. ಆದರೆ ಓಟು ನಮ್ಮ ಕಡೆಯವರಿಗೆ ಹಾಕಿ ಎಂದು ಕೇಳಿಕೊಳ್ಳುತ್ತಿದ್ದೇವೆ” ಎನ್ನುತ್ತ “…..ರವರ ಹೆಂಡ, ….. ರವರಿಗೆ ಓಟು” ಎಂದು ರಾಗವಾಗಿ ಹಾಡಿಯೂ ಬಿಟ್ಟರು.
ಆಗಸ್ಟ್ 31 ರಂದು ಆಯಾ ವಾರ್ಡ್ಗಳ ಚುನಾವಣೆ ಮತ್ತು ಬಳಿಕ ಸೆಪ್ಟೆಂಬರ್ 3 ರಂದು ನಗರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಮತಎಣಿಕೆ ಕಾರ್ಯಗಳು ನಡೆಯಲಿವೆ.
ನಾಮಪತ್ರ ವಾಪಸ್ಗೆ ಆ.23: ಕಾಲಾವಕಾಶ:
ನಾಮಪತ್ರ ಸಲ್ಲಿಸಿರುವವರಲ್ಲಿ ಯಾರಾದರೂ ನಾಮಪತ್ರ ವಾಪಸ್ ಪಡೆಯಲು ಇಚ್ಛಿಸಿದಲ್ಲಿ ಅಂಥವರಿಗಾಗಿ ಆಗಸ್ಟ್ 23 ರಂದು (ಗುರುವಾರ) ಮಧ್ಯಾಹ್ನ 3 ಗಂಟೆಯವರೆಗೂ ಕಾಲಾವಕಾಶ ನೀಡಲಾಗಿದೆ. ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ವಾಪಸ್ಗೆ ಸಂಬಂಧಿಸಿದ ನೋಟೀಸ್ ನೀಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
