ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರಜ್ವಲ್ ರೇವಣ್ಣ ಅವರಂತಹ ವ್ಯಕ್ತಿಗಳ ವಿರುದ್ಧ ನಾವು ಶೂನ್ಯ ಸಹಿಷ್ಣುರಾಗಿದ್ದೇವೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ಜೆಡಿಎಸ್ ಸಂಸದ ದೇಶದಿಂದ ಹೊರಗೆ ಹೋಗಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ.
ಇದು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿರುವ ಕಾರಣ ಕ್ರಮ ಜರುಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇದೆ. ಸಹಸ್ರಾರು ವಿಡಿಯೋಗಳ ಇವೆ ಎಂದಾದರೆ ಅವು ಜೆಡಿಎಸ್ ಪಕ್ಷ, ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಅವಧಿಯದ್ದಾಗಿವೆ ಎನ್ನುವುದು ತಿಳಿದುಬಂದಿದೆ. ಅವರು ಅಧಿಕಾರದಲ್ಲಿ ಇದ್ದಾಗ ಆ ವಿಡಿಯೋಗಳನ್ನು ಒಟ್ಟುಗೂಡಿಸಿಕೊಂಡು,
ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಕ್ಕಲಿಗರು ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಆ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.
ಜೆಡಿಎಸ್ ಸಂಸದನನ್ನು ದೇಶದಿಂದ ಹೊರಗೆ ಕಳುಹಿಸಿದ ನಂತರ ವೀಡಿಯೊಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬೆಳವಣಿಗೆಯು ತುಂಬಾ ಅನುಮಾನಾಸ್ಪದವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮಾಹಿತಿ ಇದ್ದಿದ್ದರೆ ನಿಗಾ ಇಡಬೇಕಿತ್ತು. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕಿತ್ತು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೋದಿ ಕಿಡಿಕಾರಿದ್ದಾರೆ.
ನೀವು(ಕಾಂಗ್ರೆಸ್ ಸರ್ಕಾರ) ಏನನ್ನೂ ಮಾಡಲಿಲ್ಲ. ಕನಿಷ್ಠ ಪಕ್ಷ ಕೇಂದ್ರ ಸರ್ಕಾರಕ್ಕೂ ಇದರ ಬಗ್ಗೆ ಮಾಹಿತಿಯೂ ನೀಡಲಿಲ್ಲ. ಅಂದರೆ ಇದು ಪೊಲಿಟಿಕಲ್ ಗೇಮ್ ಆಗಿತ್ತು. ಅವರೊಂದಿಗೆ ಮೈತ್ರಿ ಇದ್ದ ಕಾಲದಿಂದಲೂ ಈ ವಿಡಿಯೋಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಹಾಗಂತ ನಮ್ಮ ವಿಚಾರ ಇದಲ್ಲ. ಯಾವುದೇ ಅಪರಾಧಿಗಳನ್ನು ಬಿಡಬಾರದು ಎನ್ನುವುದಷ್ಟೇ ನಮ್ಮ ಉದ್ದೇಶ. ನಮ್ಮ ದೇಶದಲ್ಲಿ ಇಂತಹ ರಾಜಕೀಯ ಆಟಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.