ಬಿಹಾರ ಮೂಲದ ಐವರ ಬಂಧನ: 1 ಕೆಜಿ ಬಂಗಾರ ವಶ

ದಾವಣಗೆರೆ:

  ಒಂಟಿ ಮನೆಗಳನ್ನು ಗುರಿ ಮಾಡಿಕೊಂಡು ದರೋಡೆ ನಡೆಸುತ್ತಿದ್ದ, ಬಂಗಾರ ಪಾಲೀಶ್ ಮಾಡುವ ನೆಪದಲ್ಲಿ ಬಂಗಾರ ದೊಚುತ್ತಿದ್ದ, ಬೈಕ್‍ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಬಿಹಾರ್ ಮೂಲದ ಐವರು ಕಳ್ಳರನ್ನು ಬಂಧಿಸಿರುವ ಪೊಲೀಸರು, ಸುಮಾರು 24 ಪ್ರಕರಣಗಳನ್ನು ಭೇದಿಸಿ 30 ಲಕ್ಷ ರೂ. ಮೌಲ್ಯದ 1 ಕೆಜಿ 6 ಗ್ರಾಂ ಚಿನ್ನಾಭರಣ, 1 ಲಕ್ಷ ರೂ. ಮೌಲ್ಯದ 2 ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಿಡಿಸಿಕೊಂಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ತಿಳಿಸಿದ್ದಾರೆ.
ನಗರದ ಎಸ್‍ಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರ ರಾಜ್ಯದ ಗೋವಿಂದಪುರದ ನಿವಾಸಿಗಳಾದ ಸಮೀತ್‍ಕುಮಾರ್(24 ವರ್ಷ), ನಿರಂಜನ್ ಕುಮಾರ್(22 ವರ್ಷ), ಭಜ್ರಾಹ ಬಜಾರ್ ಗ್ರಾಮದ ಮುಖೇಶ್‍ಕುಮಾರ್ ಸಾ(26 ವರ್ಷ), ಮದುರಪುರ ಗ್ರಾಮದ ರಾಕೇಶ್ ಸಾ(39 ವರ್ಷ) ಹಾಗೂ ಪರ್ವತಪುರ ಗ್ರಾಮದ ಸಂತೋಷ್ ಕುಮಾರ್ ಸಾ(29 ವರ್ಷ) ಬಂಧಿತರಾಗಿದ್ದಾರೆ ಎಂದು ಹೇಳಿದರು.

  ಕಳೆದ ಆಗಸ್ಟ್ 25ರಂದು ರಾತ್ರಿ ಬೈಕ್‍ನಲ್ಲಿ ಬಂದ ಈ ಐವರು ಕಳ್ಳರು ಹೊನ್ನಾಳಿ ತಾಲೂಕಿನ ಕಮ್ಮರಗಟ್ಟೆ ಗ್ರಾಮದ ಹೊರ ವಲಯದಲ್ಲಿರುವ ಗಂಗಾಧರಪ್ಪ ಅವರ ಒಂಟಿ ಮನೆಯನ್ನು ಗುರಿ ಮಾಡಿಕೊಂಡು, ದರೋಡೆಗಾಗಿ ಮನೆಯೊಳಗೆ ನುಗ್ಗಿದ್ದರು. ಆಗ ಗಂಗಾಧರಪ್ಪ ಎಚ್ಚರಗೊಂಡಾಗ ಈ ಚೋರರು ಇವರನ್ನು ತಳ್ಳಾಡಿ ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು, ದೂಡಾಡುತ್ತಿದ್ದರು. ಈ ವೇಳೆ ಗಂಗಾಧರಪ್ಪನವರ ಮನೆಯ ಆಳುಗಳು ಎಚ್ಚೆತ್ತು ಮನೆ ಒಡೆಯನ ನೆರವಿಗೆ ಹೋದಾಗ ನಾಲ್ವರು ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದರು. ಆದರೆ, ಈ ಚೋರರ ತಂಡದಲ್ಲಿ ಓರ್ವನಾಗಿದ್ದ ಸುಮೀತ್‍ಕುಮಾರ್‍ನನ್ನು ಹಿಡಿದಿಟ್ಟುಕೊಂಡು, ಹೊನ್ನಾಳಿ ಪೊಲೀಸ್ ಠಾಣೆಗೆ ಒಪ್ಪಿಸಿ, ಕಳ್ಳತನದ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕರುಗಳಾದ ಜೆ.ರಮೇಶ ಹಾಗೂ ಲಕ್ಷ್ಮಣ ನಾಯ್ಕ, ಹೊನ್ನಾಳಿ ಪಿಎಸ್‍ಐ ಕಾಡದೇವರ, ಹರಿಹರ ಗ್ರಾಮಾಂತರ ಪಿಎಸ್‍ಐ ಸಿದ್ದೆಗೌಡ, ನ್ಯಾಮತಿ ಪಿಎಸ್‍ಐ ಹನುಮಂತಪ್ಪ ಶಿರೇಹಳ್ಳಿ ಹಾಗೂ ಸಿಬ್ಬಂದಿಗಳು ಅಂದು ರಾತ್ರಿಯೇ ತಲೆ ಮರೆಸಿಕೊಂಡಿದ್ದ ಇನ್ನುಳಿದ ನಾಲ್ವರನ್ನು ಬಂಧಿಸಿ, ತಮ್ಮ ನಿರ್ದೇಶನದಲ್ಲಿ ಹಾಗೂ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್ ಮಾರ್ಗದರ್ಶನದಲ್ಲಿ ಮತ್ತು ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಗಂಗಲ್ ಅವರ ಸಹಕಾರದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆಂದು ಮಾಹಿತಿ ನೀಡಿದರು.

  ಆರೋಪಿಗಳನ್ನು ವಿಚಾರಣೆಗೆ ಒಳ ಪಡಿಸಿದ ಪರಿಣಾಮ ಜಿಲ್ಲೆಯ ಹೊನ್ನಾಳಿ ಠಾಣೆಯ 5 ಪ್ರಕರಣಗಳು, ನ್ಯಾಮತಿ ಠಾಣೆಯಲ್ಲಿ 1, ಹರಿಹರ ನಗರ ಠಾಣೆಯ 3, ಹರಿಹರ ಗ್ರಾಮಾಂತರ ಠಾಣೆಯ 2, ಮಲೆಬೆನ್ನೂರು ಠಾಣೆಯ 1, ಹರಪನಹಳ್ಳಿ ಠಾಣೆಯ 2, ಅರಸಿಕೆರೆ ಠಾಣೆಯ 1, ಜಗಳೂರು, ಬಿಳಿಚೋಡು, ದಾವಣಗೆರೆ ಗ್ರಾಮಾಂತರ, ಆಜಾದ್ ನಗರ, ಚನ್ನಗಿರಿ, ಸಂತೇಬೆನ್ನೂರು, ಚಿತ್ರದುರ್ಗ ಬಡಾವಣೆ ಠಾಣೆಯ ಹಾಗೂ ತುಮಕೂರು ಜಿಲ್ಲೆಯ ಕ್ಯಾತಸಂದ್ರ ಠಾಣೆಗಳ ತಲಾ ಒಂದೊಂದು ಪ್ರಕರಣಗಳು ಸೇರಿದಂತೆ ಒಟ್ಟು 24 ಪ್ರಕರಣಗಳನ್ನು ಭೇದಿಸಿ, ಈ ಆರೋಪಿಗಳಿಂದ ಒಟ್ಟು 30 ಲಕ್ಷ ರೂ. ಮೌಲ್ಯದ 1 ಕೆಜಿ 6 ಗ್ರಾಂ ಚಿನ್ನಾಭರಣ, 1 ಲಕ್ಷ ರೂ. ಮೌಲ್ಯದ 2 ಪಲ್ಸರ್ ಬೈಕ್ ಹಾಗೂ ದೊಣ್ಣೆ, ರಾಡು ಸೇರಿದಂತೆ ಇತರೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಈ ಆರೋಪಿಗಳು ರಾಜ್ಯದ ಬೇರೆ, ಬೇರೆ ಜಿಲ್ಲೆಗಳಲ್ಲಲಿ ಹಾಗೂ ಹೊರ ರಾಜ್ಯಗಳಲ್ಲೂ ದರೋಡೆ, ಕಳ್ಳತನ ನಡೆಸಿರುವ ಬಗ್ಗೆ ಶಂಕೆಗಳಿದ್ದು, ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಐವರು ಕರ್ನಾಟಕದ ಬೆಂಗಳೂರು, ತುಮಕೂರು ಸೇರಿದಂತೆ ಬೇರೆ, ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು, ಎರಡೂ, ಮೂರು ತಿಂಗಳಿಗೊಮ್ಮೆ ದಾವಣಗೆರೆಗೆ ಬಂದು ಪರಿಚಯಸ್ಥರ ಮನೆಯಲ್ಲೊ ಇಲ್ಲವೇ, ರೂಂ ಬಾಡಿಗೆಗೆ ಪಡೆದು ಕೆಲವರ ಚಲನವನಗಳನ್ನು ಗಮನಿಸಿ, ಒಂಟಿ ಮನೆಗಳನ್ನು ಗುರಿ ಮಾಡಿಕೊಂಡು ದರೋಡೆ ನಡೆಸುತ್ತಿದ್ದದು, ಒಂಟಿ ಮಹಿಳೆಯರು ಇರುವ ಮನೆಯನ್ನು ಗುರಿ ಮಾಡಿಕೊಂಡು ಬಂಗಾರ ಪಾಲೀಶ್ ಮಾಡುವ ನೆಪದಲ್ಲಿ ಹಾಗೂ ಬಸ್‍ಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಬಂಗಾರ ದೋಚಿ ಪರಾರಿಯಾಗುತ್ತಿದ್ದರೆಂಬುದು ಬೆಳಕಿಗೆ ಬಂದಿದ್ದು, ಇವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.

  ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿರುವ ಮತ್ತು ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಗಂಗಲ್, ವೃತ್ತ ನಿರೀಕ್ಷಕರುಗಳಾದ ಜೆ.ರಮೇಶ ಹಾಗೂ ಲಕ್ಷ್ಮಣ ನಾಯ್ಕ, ಹೊನ್ನಾಳಿ ಪಿಎಸ್‍ಐ ಕಾಡದೇವರ, ಹರಿಹರ ಗ್ರಾಮಾಂತರ ಪಿಎಸ್‍ಐ ಸಿದ್ದೆಗೌಡ, ನ್ಯಾಮತಿ ಪಿಎಸ್‍ಐ ಹನುಮಂತಪ್ಪ ಶಿರೇಹಳ್ಳಿ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ಮಜೀದ್, ರಮೇಶ ನಾಯ್ಕ, ಶಾಂತರಾಜ್, ಮಹಮ್ಮದ್ ಇಲಿಯಾಜ್, ರಾಮಚಂದ್ರ ಜಾಧವ್, ಫೈರೋಜ್ ಖಾನ್, ವಂಕಟರಮಣ, ಸೈಯದ್ ಗಫಾರ್, ಗಿರೀಶ್ ನಾಯ್ಕ, ಕೃಷ್ಣ, ವೆಂಕಟೇಶ, ದಏವರಾಜ, ಮಂಜು, ನಾಗನಗೌಡ, ಜೀಪ್ ಚಾಲಕರುಗಳಾದ ಕುಮಾರನಾಯ್ಕ, ಮಹೇಶ್ ಕುಮಾರ್ ಅವರುಗಳ ಕಾರ್ಯವನ್ನು ಪ್ರಶಂಸಿಸಿ, ಜಿಲ್ಲಾ ಪೊಲೀಸ್ ಇಲಾಖೆಯಿಂದ 10 ಸಾವಿರ ರೂ. ಬಹುಮಾನ ಘೋಷಿಸಿದ್ದು, ಇನ್ನೂ ಹೆಚ್ಚಿನ ಬಹುಮಾನಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link