ತುರುವೇಕೆರೆ:
ಕೊರೋನಾ ಸೊಂಕು ಧೃಡಪಟ್ಟ ಯಾವುದೇ ವ್ಯಕ್ತಿ ಭಯಭೀತರಾಗದೆ ದಯಮಾಡಿ ತಕ್ಷಣ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ಶಾಸಕ ಮಸಾಲ ಜಯರಾಮ್ ಕ್ಷೇತ್ರದ ಜನತೆಗೆ ಮನವಿ ಮಾಡಿದರು.
ತಾಲ್ಲೂಕಿನ ವ್ಯಾಪ್ತಿಯ ಮಾಯಸಂದ್ರ, ಶೆಟ್ಟಗೊಂಡನಹಳ್ಳಿ ಹಾಗೂ ಮಾಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್ ಕೇಂದ್ರಕ್ಕೆ ಸಂಬಂಧಿಸಿದಂತೆ ಜೀವರಕ್ಷಕ ಔಷಧಿಗಳು, ಮಾತ್ರೆಗಳು, ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ಉಚಿತವಾಗಿ ತಾಲ್ಲೂಕು ವೈಧ್ಯಾಧಿಕಾರಿಗೆ ನೀಡಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಜೀವರಕ್ಷಕ ಔಷಧಗಳ ಕೊರತೆಗೆ ಧಕ್ಕೆ ಬಾರದಂತೆ ಸರ್ಕಾರದಿಂದಲ್ಲದೆ ನನ್ನ ಸ್ವಂತ ವೆಚ್ಚದಿಂದ ಔಷಧಿಗಳನ್ನು ತಾಲ್ಲೂಕಿನ 11 ಕೇಂದ್ರಗಳಿಗೂ ಒದಗಿಸುತ್ತಿದ್ದು ಆಸ್ಪತ್ರೆಯಲ್ಲಿ ಔಷಧಿ, ಮಾತ್ರೆಗಳು, ಆಕ್ಷಿಜನ್, ವೆಂಟಿಲೇಟರ್ ಸೌಲಭ್ಯಗಳಿದ್ದು ಯಾವುದೇ ವ್ಯಕ್ತಿ ಕೊರೋನಾ ಸೋಂಕು ಕಂಡು ಬಂದಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗದೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಲ್ಲಿ ಬೇಗ ಗುಣಮುಖರಾಗುವಿರಿ. ಹಾಗೆಯೇ ಪಂಚಾಯಿತಿ ವ್ಯಾಪ್ತಿಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ಗ್ರಾಮಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸುವುದು ಹಾಗೂ ಸೋಂಕಿತ ವ್ಯಕ್ತಿಯನ್ನು ಗುರ್ತಿಸಿ ಕ್ವಾರಂಟೈನ್ಗೆ ಒಳಪಡಿಸುವ ಜೊತೆಗೆ ಹಗಲಿರುಳು ತಮ್ಮ ಜೀವವನ್ನೂ ಲೆಕ್ಕಿಸದೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು. ಮಾಯಸಂದ್ರದಲ್ಲಿ ಕೋವಿಡ್ ಕೇಂದ್ರಕ್ಕೆ ತಮ್ಮ ಭವನ ಬಿಟ್ಟು ಕೊಡಲು ಜೈನ ಸಮುದಾಯ ಈಗಾಗಲೇ ಮುಂದೆ ಬಂದಿದ್ದು ಇನ್ನೂ ಹೆಚ್ಚು ಅವಶ್ಯಕತೆ ಬಂದಲ್ಲಿ ಮುಸ್ಲಿಂ ಸಮುದಾಯ ಭವನವನ್ನೂ ಪಡೆಯುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ಆಡಳಿತಾಧಿಕಾರಿ ಡಾ.ಸುಪ್ರಿಯಾ, ಜೈನ ಸಮುದಾಯ ಹಾಗೂ ಮುಸ್ಲಿಂ ಸಮುದಾಯದ ಮುಖಂಡರುಗಳು ಸ್ಥಳೀಯ ಮುಖಂಡರುಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕರ್ಯಕರ್ತೆಯರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ