ಮಾಧುಸ್ವಾಮಿ ಗುಡುಗಿಗೆ ಬೂಸ ರೇಟು ಇಳಿಯಿತು:ಹಳೆಮನೆ ಶಿವನಂಜಪ್ಪ

ಹುಳಿಯಾರು:

              ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ವಿಧಾನಸಭೆಯಲ್ಲಿ ಗುಡುಗಿದ ಪರಿಣಾಮ ಬೂಸಾ ರೇಟು 50 ಕೇಜಿಗೆ 100 ರೂ. ಇಳಿಯಿತು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಹಳೆಮನೆ ಶಿವನಂಜಪ್ಪ ಹೇಳಿದರು.
ಹುಳಿಯಾರು ಹೋಬಳಿಯ ಕೆಂಕೆರೆ ಹಾಲಿನ ಡೇರಿ ಬಳಿ ಏರ್ಪಡಿಸಿದ್ದ ಹೈನು ರಾಸುಗಳಿಗೆ ವಿಮೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

             ಮಳೆಬೆಳೆಯಾಗದೆ ಐದಾರು ವರ್ಷಗಳಿಂದ ಬರಗಾಲ ಆವರಿಸಿದ್ದ ಜೀವನ ನಿರ್ವಹಣೆಯೇ ಕಷ್ಟಕರವಾಗಿದ್ದು ಬೂಸ ರೇಟು ಇಳಿಸಿ ಎಂದು ರೈತರು ಕೇಳಿಕೊಂಡಿದ್ದರೂ ಇಳಿಸಿರಲಿಲ್ಲ. ಕಳೆದ ವಿಧಾನಸಭೆಯಲ್ಲಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಹೈನುಗಾರರ ಪರ ಮಾತನಾಡಿ ಪರಿಣಾಮ ಮುಂದಿನ ವಿಧಾನಸಭೆಯಲ್ಲಿ ಮತ್ತೆ ತರಾಟೆಗೆ ತೆಗೆದುಕೊಂಡಾರು ಎಂದು ಹೆದರಿ 100 ರೂ. ಕಡಿಮೆ ಮಾಡಿದ್ದಾರೆ. ಇಂತಹ ಶಾಸಕರನ್ನು ವಿಧಾನಸಭೆಗೆ ಕಳುಹಿಸಿರುವ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜನರನ್ನು ರಾಜ್ಯದ ಜನ ಪ್ರಶಂಸಿಸುತ್ತಿದ್ದಾರೆ ಎಂದು ಹೇಳಿದರು.

            ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಮಾತನಾಡಿ ಇಂದು ಅನೇಕ ಸಂಸಾರಗಳನ್ನು ಹಸುಗಳು ನಡೆಸುತ್ತಿವೆ. ಇಂತಹ ಹಸುಗಳು ಸಾವನ್ನಪ್ಪಿದರೆ ಕುಟುಂಬ ಬೀದಿಗೆ ಬರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಹೈನುಗಾರರು ಹೈನು ರಾಸುಗಳಿಗೆ ವಿಮೆ ಮಾಡಿಸಬೇಕಿದೆ. ಆದರೆ ರಿಯಾಯಿತಿ ದರದಲ್ಲಿ ವಿಮೆ ಮಾಡಿಸುತ್ತೇವೆಂದರೂ ರೈತರು ನಿರ್ಲಕ್ಷ್ಯಿಸುತ್ತಿದ್ದಾರೆ. ಹಾಗಾಗಿ ಹಾಲಿನ ಡೇರಿಯ ಮುಖಾಂತರ ಕಡ್ಡಾಯವಾಗಿ ಡೇರಿಗೆ ಹಾಲು ಹಾಕುವ ಹಸುಗಳ ವಿಮೆ ಮಾಡಿಸಿ ರೈತನ ಪಾಲಿನ ವಿಮೆಯ ಹಣವನ್ನು ಬಟವಾಡೆಯಲ್ಲಿ ಕಂತಿನ ಪ್ರಕಾರ ಜಮೆ ಮಾಡಿಸಿಕೊಳ್ಳುವುದು ಒಳಿತು ಎಂದು ಅಭಿಪ್ರಾಯಪಟ್ಟರು.

             ಹೈನು ರಾಸುಗಳ ವಿಮೆಯ ಜೊತೆಗೆ ರೈತರೂ ಸಹ ವೈಯಕ್ತಿಕ ಆರೋಗ್ಯ ವಿಮೆ ಮಾಡಿಸಬೇಕಿದೆ. ಏಕೆಂದರೆ ಇಂದು ಯಾರಿಗೆ ಯಾವ ಸಂದರ್ಭದಲ್ಲಿ ಏನಾಗುತ್ತದೆಯೋ ಹೇಳದಾಗಿದ್ದು ಪಟ್ಟಣದ ಆಸ್ಪತ್ರೆಗೆ ಹೋದರೆ ಲಕ್ಷಾಂತರ ರೂ. ವೆಚ್ಚವಾಗುತ್ತದೆ. ಇನ್ನೂ ಸರ್ಕಾರವೋ ರೈತರ ಪಾಲಿನ ಆಶಾಕಿರಣವಾಗಿದ್ದ ಯಶಸ್ವಿನಿ ಯೋಜನೆಗೆ ಎಳ್ಳುನೀರು ಬಿಟ್ಟು ಯೂನಿವರ್ಸಲ್ ಹೆಲ್ತ್ ಕಾರ್ಡ್ ಕೊಡುತ್ತಿದ್ದಾರೆ. ಈ ಕಾರ್ಡ್ ಪಡೆದರೆ ಮೊದಲು ಸರ್ಕಾರಿ ಆಸ್ಪತ್ರಗೆ ಹೋಗುವ ನಿಯಮವಿದೆ. ವೈದ್ಯರೇ ಇಲ್ಲದ ಸರ್ಕಾರಿ ಆಸ್ಪತ್ರೆಗೆ ಯಾವ ಧೈರ್ಯದ ಮೇಲೆ ಹೋಗುವುದು ಹೇಳಿ ಎಂದು ಪ್ರಶ್ನಿಸಿದರಲ್ಲದೆ ನಿಮ್ಮ ಆರ್ಥಿಕ ಹಿತದೃಷ್ಠಿಯಿಂದ ಕಡ್ಡಾಯವಾಗಿ ಆರೋಗ್ಯವಿಮೆ ಮಾಡಿಸುವುದು ಒಳಿತು ಎಂದು ಸಲಹೆ ನೀಡಿದರು.

              ಕೆಂಕೆರೆ ಹಾಲಿನ ಡೇರಿ ಅಧ್ಯಕ್ಷ ಓಂಕಾರಮೂರ್ತಿ, ಮಾಜಿ ಅಧ್ಯಕ್ಷ ಕೇಶವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ತುಮಕೂರು ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ರಾಜು, ಎ.ಪಿ.ಯರಗುಂಟಪ್ಪ, ಪಶುವೈದ್ಯೆ ಡಾ.ಸಂದ್ಯಾ, ಡಾ.ಕೌಶಿಕ್ ಮತ್ತಿತರರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link