ಮಾಹಿತಿಯೇ ಇಲ್ಲದೇ ಸಂಪರ್ಕ ಸಭೆಗೆ ಬಂದ ಜನ!

ದಾವಣಗೆರೆ:

      ಮಿಟಿಂಗ್ ಇದೆ ಬನ್ನಿ ಅಂತಾ ನಮ್ಮ ಸಂಘದವರು ಹೇಳಿದಕ್ಕೆ ಇಲ್ಲಿಗೆ ಬಂದಿದ್ದೇವೆ, ಇಲ್ಲಿ ಬಂದಿರೋದ್ರಿಂದ ನಮಗೆ ಏನಾದರೂ ಸೌಲಭ್ಯ ಸಿಗುತ್ತಾ?… ಹೀಗೆ ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದ್ದು, ಸಂತೇಬೆನ್ನೂರಿನಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಗೆ ಬಂದಿದ್ದ ಮಹಿಳೆಯರು.

      ಹೌದು… ಚನ್ನಗಿರಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಸಂತೇಬೆನ್ನೂರು ಹೋಬಳಿಯ ಜನ ಸಂಪರ್ಕ ಸಭೆಗೆ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಮಿಸಿದ್ದರು. ಆದರೆ, ಇವರಲ್ಲಿ ಬಹುತೇಕರಿಗೆ ನಾವು ಯಾವ ಕಾರಣಕ್ಕಾಗಿ ಇಲ್ಲಿಗೆ ಬಂದಿದ್ದೇವೆ ಎಂಬುದರ ಪರಿವೆ ಇರಲಿಲ್ಲ.

       ಸಂತೇಬೆನ್ನೂರಿನ ಶ್ರೀಕಾಳಿಕೇಶ್ವರಿ ಸಂಘದ ಪ್ರೇಮಾದೇವಿ ಮಾತನಾಡಿ, ನಮ್ಮ ಸ್ತ್ರೀ ಶಕ್ತಿ ಸಂಘದಲ್ಲಿ 18 ಜನ ಸದಸ್ಯೆಯರಿದ್ದೇವೆ. ನಮಗೆ ಇಲ್ಲಿ ಏನು ನಡಿತಿದೆ ಎಂಬುದು ಗೊತ್ತಿಲ್ಲ. ಇಲ್ಲಿ ಸಭೆ ಇದೆ ಬನ್ನಿ ಎಂಬುದಾಗಿ ನಮ್ಮ ಸಂಘದ ಲೀಡರ್ ಹೇಳಿದಕ್ಕೆ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ಸಂಘದ ಆರಂಭವಾಗಿ ಸುಮಾರು 10 ವರ್ಷ ಕಳೆದಿದೆ. ನಮಗೆ ಇನ್ನೂ ಸುತ್ತು ನಿಧಿ ಕೊಟ್ಟಿಲ್ಲ, ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯವೂ ನೀಡಿಲ್ಲ ಎಂದು ಆರೋಪಿಸಿದರು.

      ಇನ್ನೂ ಅದೇ ಸಂತೇಬೆನ್ನೂರಿನ ಶ್ರೀರಾಣಿ ಸ್ತ್ರೀಶಕ್ತಿ ಸಂಘದ ಸಿದ್ದಮ್ಮ ಮಾತನಾಡಿ, ನಮಗೂ ಇಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ಇಲ್ಲಿ ಬಂದಾದ ಮೇಲೆ ಮನೆ ಇಲ್ಲದವರಿಗೆ ಮನೆ ಕೊಡುತ್ತಾರೆಂಬುದು ಗೊತ್ತಾಗಿದೆ. ನಾವು ಸಹ 6 ತಿಂಗಳ ಹಿಂದೆ ನಮಗಿರುವ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ನೆರವು ನೀಡುವಂತೆ ಕೋರಿ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದೇವು. ಆದರೆ, ಈ ವರೆಗೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆಪಾದಿಸಿದರು.

      ನಾಗರತ್ನಮ್ಮ ಎಂಬ ಮಹಿಳೆ ಮಾತನಾಡಿ, ನನಗೆ ಗಂಡ ಇಲ್ಲ, ವಿಧವಾ ವೇತನ ಕೊಡ್ತಿವಿ ಅಂತಾ ಹೇಳಿ, ನಮ್ಮ ಬಳಿ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಆದರೆ, ವಿಧವಾ ವೇತನ ಬರುತ್ತಿಲ್ಲ ಎಂಬುದಾಗಿ ಅಳಲು ತೋಡಿಕೊಳ್ಳುತ್ತಿದ್ದಂತೆ, ಮತ್ತೋರ್ವ ವಿಧವೆ ಪದ್ಮಮ್ಮ ಎಂಬುವರು ಮಾತನಾಡಿ, ನಮಗೆ ಮುಂಚೆ ವಿಧವಾ ವೇತನ ಬರುತ್ತಿತ್ತು. ಆದರೆ, ಕಳೆದ ಮೂರು ತಿಂಗಳಿನಿಂದ ಬರುತ್ತಿಲ್ಲ. ಸಂಬಂದ್ಧ ಪಟ್ಟ ಪೋಸ್ಟ್ ಮನ್ ಅವರನ್ನು ಕೇಳಿದರೆ, ನಿಮ್ಮ ವೇತನ ಬಂದಿಲ್ಲ ಅಷ್ಟೇ ಅಧಿಕಾರಿಗಳನ್ನು ವಿಚಾರಿಸಿ ಎಂಬುದಾಗಿ ಜವಾಬು ನೀಡುತ್ತಾರೆ. ಆದರೆ, ನಮಗೆ ಎಲ್ಲಿ ಹೋಗಿ ಕೇಳಬೇಕೆಂಬುದೇ ಗೊತ್ತಿಲ್ಲ ಎಂದು ಅಲವತ್ತುಕೊಂಡರು.

      ಮರಡಿ ಗ್ರಾಮದ ಕೆಂಚಪ್ಪ ಎಂಬುವರು ಮಾತನಾಡಿ, ನಾವು ಕಳೆದ 40 ವರ್ಷಗಳಿಂದ ಗೋಮಾಳದ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ನಮಗೆ ಹಕ್ಕು ಪತ್ರ ಸಹ ನೀಡಲಾಗಿದೆ. ಆದರೆ, ನನ್ನನ್ನು ಸೇರಿ ನಾಲ್ಕು ಜನರ ಹೆಸರಿಗೆ ಒಟ್ಟು 8 ಎಕರೆ ಜಮೀನಿಗೆ ಒಂದೇ ಪಹಣಿ ನೀಡಿದ್ದಾರೆ. ಹೀಗಾಗಿ ನಮಗೆ ಕೃಷಿ ಸಾಲ ಸೇರಿದಂತೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ನಮಗೆ ನಾಲ್ವರಿಗೂ ಬೇರೆ, ಬೇರೆ ಪಹಣಿ ಬರುವಂತೆ ಮಾಡಿ ಕೊಡಿ ಎಂಬುದಾಗಿ ಕೋರಿ ಸುಮಾರು 2 ವರ್ಷಗಳಿಂದ ಹೊಲಮನೆ ಕೆಲಸ ಬಿಟ್ಟು ಓಡಾಡುತ್ತಿದ್ದೇನೆ. ಈ ಬಗ್ಗೆ ನಮ್ಮ ಹೋಬಳಿಯ ಕಂದಾಯ ನಿರೀಕ್ಷಕ ಜಗನ್ನಾಥ್ ಅವರಿಗೆ ಕೇಳಿದರೆ, ಭೂ ಮಾಪಕರಿಗೆ ಅರ್ಜಿ ಸಲ್ಲಿಸುವಂತೆ ಹೇಳುತ್ತಾರೆ. ಹೀಗಾಗಿ ನಮಗೆ ಅಲೆದಲೆದು ಸಾಕಾಗಿದೆ. ಈ ಅರ್ಜಿ ಈ ಜನಸಂಪರ್ಕ ಸಭೆಯಲ್ಲಿ ನೀಡಿದರೆ, ನಮ್ಮ ಸಮಸ್ಯೆ ಇತ್ಯರ್ಥವಾಗಲಿದೆಯೇ ಎಂಬ ನಿರೀಕ್ಷೆಯಲ್ಲಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link