ಹುಳಿಯಾರು
ಹುಳಿಯಾರು ಪಟ್ಟಣದಲ್ಲಿ ಹೈವೆ ರಸ್ತೆಯ ಅಭಿವೃದ್ಧಿ ಕಾಮಗಾರಿ ಸಲುವಾಗಿ ಅಗೆದಿದ್ದ ರಸ್ತೆ ಧೂಳುಮಯವಾಗಿದ್ದು ಕನಿಷ್ಠ ರಸ್ತೆಗೆ ನೀರು ಹಾಕಿಕೊಂಡು ಕಾಮಗಾರಿ ಮಾಡುವಂತೆ ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್.ಆರ್.ಬಾಲಾಜಿ ಮನವಿ ಮಾಡಿದ್ದಾರೆ.
ಹುಳಿಯಾರು-ಶಿರಾ ಹೈವೆ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಕಳೆದ ಐದಾರು ತಿಂಗಳಿಂದ ಹುಳಿಯಾರಿನಲ್ಲಿ ನಡೆಯುತ್ತಿದೆ. ಈ ಕಾಮಗಾರಿಯ ಸಲುವಾಗಿ ರಸ್ತೆಯ ಎರಡೂ ಭಾಗದಲ್ಲಿ ಚರಂಡಿ ನಿರ್ಮಾಣಕ್ಕೆ ಭೂಮಿ ಅಗೆಯಲಾಗಿದೆ. ಅಲ್ಲದೆ ರಸ್ತೆಯ ಮೂರ್ನಲ್ಕು ಕಡೆ ಸೇತುವೆ ನಿರ್ಮಾಣಕ್ಕೆ ಭೂಮಿ ಅಗೆಯಲಾಗಿದೆ. ಎಪಿಎಂಸಿ ಸಮೀಪದಲ್ಲಂತೂ 100 ಮೀಟರ್ಗೂ ಹೆಚ್ಚು ದೂರ ರಸ್ತೆ ಅಗೆಯಲಾಗಿದೆ. ಹೀಗೆ ಭೂಮಿ ಅಗೆದಾಗ ಬರುವ ಮಣ್ಣನ್ನು ವಿಲೆ ಮಾಡದೆ ಅಲ್ಲೇ ಸುರಿಯಲಾಗಿದೆ. ಇದರಿಂದ ರಸ್ತೆ ಪೂರ್ತಿ ಧೂಳುಮಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪರಿಣಾಮ ಈ ರಸ್ತೆಯಲ್ಲಿ ನಿತ್ಯವೂ ಸಂಚರಿಸುವ ವಾಹನ ಸವಾರರು ಧೂಳು ಸೇವಿಸುತ್ತಾ ಸಂಚರಿಸುವ ದುಸ್ಥಿತಿ ಬಂದಿದೆ. ರಸ್ತೆಯಲ್ಲಿರುವ ಧೂಳು ಮನೆಯನ್ನೆಲ್ಲಾ ಆವರಿಸಿದೆ. ದಿನಕ್ಕೊಬ್ಬರಂತೆ ಆಸ್ಪತ್ರೆಯ ಬಾಗಿಲು ತುಳಿಯುತ್ತಿದ್ದಾರೆ. ಧೂಳು ಹೆಚ್ಚಾಗಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವುದನ್ನೇ ಜನರು ನಿಲ್ಲಿಸಿದ್ದಾರೆ. ಜನರು ಇಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಗುತ್ತಿಗೆದಾರರು ಕನಿಷ್ಠ ನೀರು ಹಾಕಿಕೊಂಡು ಕಾಮಗಾರಿ ಮಾಡುವ ಮನಸ್ಸು ಮಾಡಿಲ್ಲ ಎಂದು ದೂರಿದರು.ಹೈವೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರು ಈ ಬಗ್ಗೆ ಗಮನ ಹರಿಸಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ರಸ್ತೆಗೆ ನೀರು ಹಾಕಿ ರಸ್ತೆಯ ಅಭಿವೃದ್ಧಿ ಕಾಮಗಾರಿ ಮುಂದುವರಿಸುವಂತೆ ಗುತ್ತಿಗೆದಾರರಿಗೆ ಸೂಚಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/02/28HULIYAR1.jpg)