ಹಾನಗಲ್ಲ :
ಸತತ ಬರಗಾಲದಿಂದ ಜಿಲ್ಲೆಯ ರೈತ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರೈತರಿಗೆ ಬರಬೇಕಿದ್ದ 2016-17ರ ಬೆಳೆವಿಮಾ ಪರಿಹಾರ ನೀಡುವಲ್ಲಿ ಬ್ಯಾಂಕುಗಳು ವಿಫಲವಾಗಿವೆ ಎಂದು ರೈತರು ಗೆಜ್ಜಿಹಳ್ಳಿ ಸಿಂಡಿಕೇಟ್ ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.
ಬೆಳಿಗ್ಗೆ 11 ಘಂಟೆಗೆ ರೈತ ಸಂಘದ ಪದಾಧಿಕಾರಿಗಳು ಬ್ಯಾಂಕಿನ ಎದುರು ಮುತ್ತಿಗೆ ಹಾಕಿ ವ್ಯವಹಾರ ವಹಿವಾಟು ನಡೆಯದಂತೆ ತಡೆಯೊಡ್ಡಿದರು. ಸಿಂಡಿಕೇಟ್ ಬ್ಯಾಂಕಿನ 370 ರೈತರು ಸೇರಿದಂತೆ ತಾಲೂಕಿನ ಮೂರು ಹೋಬಳಿಗಳಲ್ಲಿ ಒಟ್ಟು 4386 ರೈತರಿಗೆ ಪರಿಹಾರ ವಿತರಣೆ ಬಾಕಿ ಉಳಿದಿದೆ. ಬ್ಯಾಂಕಿನ ಸಿಬ್ಬಂದಿಗಳು ಆನ್ಲೈನ್ ಮೂಲಕ ಬೆಳೆವಿಮಾ ಅರ್ಜಿ ತುಂಬುವಾಗ ಮೇಜರ್-ಮೈನರ್ ಎಂಬ ಜಾಗೆಯಲ್ಲಿ ಕ್ಲಿಕ್ ಮಾಡುವ ಬದಲಾಗಿ ಅದರ್ಸ ಎಂಬಲ್ಲಿ ಕ್ಲಿಕ್ ಮಾಡಿದ ತಪ್ಪಿನಿಂದಾಗಿ ಈ ರೈತರಿಗೆ ಬರಬೇಕಿದ್ದ ಪರಿಹಾರ ವಿತರಣೆ ವಿಳಂಬಗೊಂಡಿದೆ ಎಂದು ಆರೋಪಿಸಿದರು
ಈ ಕುರಿತಂತೆ ಹಲವು ಬಾರಿ ರೈತ ಸಂಘ ಪ್ರತಿಭಟನೆ ಕೈಗೊಂಡು ಮನವಿ ಅರ್ಪಿಸಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ತಹಸೀಲ್ದಾರ್ ಕಚೇರಿಯಲ್ಲಿಯೂ ಬ್ಯಾಂಕ್ ಅಧಿಕಾರಿಗಳು ರೈತರ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗಿದ್ದರೂ ಸಮಸ್ಯೆಯ ಮೂಲವೇ ಸಿಕ್ಕಿರಲಿಲ್ಲ.
ಈ ಮಧ್ಯೆ ರೈತ ಸಂಘಟನೆ ಕೃಷಿ ಸಚಿವರು ಹಾಗೂ ವಿಮಾ ಸಂಸ್ಥೆಯ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಶೀಲಿಸುವಂತೆ ಮನವಿ ಮಾಡಿದ್ದರಿಂದಾಗಿ ಪರಿಶೀಲನೆ ಕೈಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳೇ ತಪ್ಪು ಮಾಹಿತಿ ನೀಡಿದ್ದಾರೆಂಬ ಮಾಹಿತಿ ಲಭ್ಯವಾಯಿತು. ಆದರೆ ಈ ಮಾಹಿತಿ ಲಭ್ಯವಾಗಲು ಒಂದು ವರ್ಷ ಕಳೆದುಹೋಗಿತ್ತು. ಒಂದು ತಿಂಗಳೊಳಗಾಗಿ ವಿಮಾ ಕಂಪನಿ ಮಾಹಿತಿ ನೀಡಿದ್ದರೆ ರೈತರಿಗೆ ವಿಮಾ ಕಂತಿನ ಹಣ ಹಿಂತಿರುಗಿಸಬಹುದಿತ್ತು. ಇದಕ್ಕೆಲ್ಲ ವಿಮಾ ಸಂಸ್ಥೆಯೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂಬುದು ಅಧಿಕಾರಿಗಳ ವಾದವಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕದರಪ್ಪ, ಸಿಂಡಿಕೇಟ್ ಬ್ಯಾಂಕ್ ಮುಖ್ಯ ಪ್ರಬಂಧಕ ಸಿ.ಈಶ್ವರಪ್ಪ, ಶಾಖಾ ವ್ಯವಸ್ಥಾಪಕ ಸಂತೋಷ ಗುಡ್ಡಣ್ಣನವರ, ಕೃಷಿ ಅಧಿಕಾರಿ ಪ್ರಶಾಂತ ರೆಡ್ಡಿ ಮಾತನಾಡಿ, ಈ ಸಮಸ್ಯೆ ಕುರಿತಂತೆ ವಿಮಾ ಸಂಸ್ಥೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದೇವೆ. ನ್ಯಾಯಾಲಯದ ನಿರ್ದೇಶನದಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಇದಕ್ಕೊಪ್ಪದ ರೈತರು 15 ದಿನಗಳಲ್ಲಿ ರೈತರ ಖಾತೆಗಳಿಗೆ ಹಣ ಹಾಕಿ ನಂತರ ಏನಾದರೂ ಮಾಡಿಕೊಳ್ಳಿ ಎಂದು ಪಟ್ಟು ಹಿಡಿದರು. ಹಣ ಹಾಕುವ ನಿರ್ಧಾರ, ಅಧಿಕಾರ ಯಾರ ಕೈಲೂ ಇಲ್ಲ. ಇನ್ನಷ್ಟು ಕಾಲಾವಕಾಶ ನೀಡಿದರೆ ಪರಿಹಾರ ದೊರೆಯಲಿದೆ ಎಂದು ಅಧಿಕಾರಿಗಳು ಮನವಿ ಮಾಡಿದರು. ಡಿವೈಎಸ್ಪಿ ಎಲ್.ಕುಮಾರಪ್ಪ ಮಧ್ಯ ಪ್ರವೇಶಿಸಿ ರೈತರು ಹಾಗೂ ಬ್ಯಾಂಕಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ 20 ದಿನಗಳೊಳಗೆ ಸಮಸ್ಯೆ ಇತ್ಯರ್ಥಗೊಳಿಸಿ ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು. ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ಸಿಪಿಐ ರೇವಣ್ಣ ಕಟ್ಟಿಮನಿ, ಪಿಎಸ್ಐಗಳಾದ ಗುರುರಾಜ ಮೈಲಾರ, ಟಿ.ಮುರುಗೇಶ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ರುದ್ರಪ್ಪ ಹಣ್ಣಿ, ಅಜ್ಜನಗೌಡ ಕಲಗೌಡ್ರ, ಈಶ್ವರ ಅರಿಷಣಗುಪ್ಪಿ, ರಾಜೇಂದ್ರಪ್ಪ ಗಾಳಪೂಜಿ, ಸೋಮಣ್ಣ ಜಡೆಗೊಂಡರ, ಮಲ್ಲನಗೌಡ ಪಾಟೀಲ, ನಾಗನಗೌಡ ಪಾಟೀಲ, ಶ್ರೀಕಾಂತ ದುಂಡಣ್ಣನವರ, ಶ್ರೀಧರ ಮಲಗುಂದ, ಮೈಲಾರಪ್ಪ ಬಡೆಮ್ಮನವರ, ಮಹೇಶ ವಿರುಪಣ್ಣನವರ, ಚನಬಸಪ್ಪ ಕಳ್ಳಿ, ಸಂಗನಗೌಡ ಉದಯಗೌಡ್ರ, ಬಸವರಾಜ ಹನಮನಕೊಪ್ಪ, ಅಬ್ದುಲ್ಖಾದರ ಮುಲ್ಲಾ, ಉಮೇಶ ಮೂಡಿ, ಮಹೇಶ ವಾಸನದ ಇತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
