ವಿಧಾನ ಪರಿಷತ್ : ದಿಕ್ಸೂಚಿ ಫಲಿತಾಂಶ

ಕೊರಟಗೆರೆ:


ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಜಿ. ಪರಮೇಶ್ವರ್ ಅಭಿಮತ

   ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜ್ಯದಲ್ಲಿ 43,500 ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ರಾಜೇಂದ್ರರವರ ಗೆಲುವು ಪಕ್ಷದ ನಾಯಕರ ಒಗಟ್ಟಿನ ಬಲವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಅವರು ಪಟ್ಟಣದ ಶಾಸಕರ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪಕ್ಷವು 11 ಸ್ಥಾನಗಳನ್ನು ಗೆದ್ದಿದೆ. 2 ಕಡೆ ಅತಿ ಕಡಿಮೆ ಮತಗಳಿಂದ ಸೋತಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಇತರ ಪಕ್ಷಗಳಿಗಿಂತ ಬಲಿಷ್ಠವಾಗಿದೆ ಎಂಬುದನ್ನು ತೋರಿಸುತ್ತದೆ. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಎದುರಿಸಲು ಪಕ್ಷ ಮತಷ್ಟು ಬಲಿಷ್ಠವಾಗಿ ಹೊರಹೊಮ್ಮಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬರಲಿದೆ. ಆ ಅಲೆಯು 2024ರ ಲೋಕಸಭಾ ಚುನಾವಣೆಗೂ ಪಸರಿಸಲಿದೆ ಎಂದರು.

ತುಮಕೂರು ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ರಾಜೇಂದ್ರರಾಜಣ್ಣ ಬಹುಮತದಿಂದ ಜಯಗಳಿಸಿದ್ದಾರೆ. ಇದಕ್ಕಾಗಿ ಜಿಲ್ಲೆಯ ಎಲ್ಲಾ ಮತದಾರರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ರಾಜೇಂದ್ರರವರ ಗೆಲುವಿಗೆ ಮುಖ್ಯವಾಗಿ ನಮ್ಮ ಅಭ್ಯರ್ಥಿ ಸ್ಥಳೀಯರು, ಬಹಳ ವರ್ಷಗಳಿಂದ ಜಿಲ್ಲೆಯಲ್ಲಿ ಒಡನಾಟ ಹೊಂದಿದ್ದರು, ಬಿಜೆಪಿ ಜೆಡಿಎಸ್ ಪಕ್ಷದ ಆಭ್ಯರ್ಥಿಗಳು ಚುನಾವಣೆಗೆ 15 ದಿನ ಮುಂಚಿತವಾಗಿ ಜಿಲ್ಲೆಗೆ ಬಂದವರು.

ಜಿಲ್ಲೆಯಲ್ಲಿ ಪಕ್ಷದ ಸದಸ್ಯರು ಹೆಚ್ಚು ವಿಜೇತರಾಗಿದ್ದರು. ಜಿಲ್ಲೆಯ ಪಕ್ಷದ ಎಲ್ಲಾ ನಾಯಕರು, ಮುಖಂಡರು ತಮ್ಮಗಳ ಸಣ್ಣ ಭಿನ್ನಾಭಿüಪ್ರಾಯಗಳನ್ನು ಬದಿಗಿಟ್ಟು, ಒಮ್ಮತದಿಂದ ಚುನಾವಣೆಯಲ್ಲಿ ಶ್ರಮ ವಹಿಸಿದ್ದರು. ಎಂಎಲ್‍ಸಿ ರಾಜೇಂದ್ರ ಮತ್ತು ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ ಜಿಲ್ಲೆಯ ಎಲ್ಲಾ ಮತದಾರರ ಮನ ಒಲಿಸುವುದರಲ್ಲಿ ಯಶಸ್ವಿಯಾದರು. ಇದು ರಾಜೇಂದ್ರರವರ ಗೆಲುವಿಗೆ ಪ್ರಮುಖ ಕಾರಣವಾಯಿತು. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ವಿಧಾನ ಸಭಾ ಸದಸ್ಯರು ಗೆಲ್ಲಲಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 36 ಗ್ರಾಮ ಪಂಚಾಯತಿ ಮತ್ತು ಪಟ್ಟಣ ಪಂಚಾಯಿತಿ ಬಹುತೇಕ ಸದಸ್ಯರು ನನ್ನ ಮನವಿಗೆ ಸ್ಪಂದಿಸಿ ವಿಶ್ವಾಸವಿಟ್ಟು, ರಾಜೇಂದ್ರರವರಿಗೆ ಮತ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಇದಕ್ಕೆ ಕ್ಷೇತ್ರದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಯುವಕರು, ಮಹಿಳೆಯರು ಶ್ರಮ ವಹಿಸಿದ್ದಾರೆ ಎಂದರು.

ಗೌಡರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ:

ಮಾಜಿ ಪ್ರಧಾನಿ ದೇವೇಗೌಡರು ದೇಶದ ಅತ್ಯಂತ ಹಿರಿಯ ಅನುಭವಿ ರಾಜಕಾರಣಿಗಳು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಮೈತ್ರಿಯಲ್ಲಿ ಹೈಕಮಾಂಡ್ ಹಂತದಲ್ಲಿ ನಿರ್ಧಾರವಾಗಿ, ಅವರು ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಜಿಲ್ಲೆಯಲ್ಲಿ ಸ್ಪರ್ಧಿಸಿದಾಗ ನಾವುಗಳು ಅವರನ್ನು ಗೌರವವಾಗಿ ನೋಡಿಕೊಂಡಿದ್ದೇವೆ. ಗೆಲುವಿಗೆ ಪ್ರ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ದುರಾದೃಷ್ಟ ಅವರು ಸೋತರು, ಆ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಎರಡೂ ಪಕ್ಷಗಳು ಸೋತವು. ಈಗ ಕೆಲವರು ಆ ಚುನಾವಣೆ ಬಗ್ಗೆ ಸಂದರ್ಭಕ್ಕೆ ತಕ್ಕಂತೆ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಅದು ಸತ್ಯವಲ್ಲ. ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ಥ್ ನಾರಾಯಣ್, ಅರಕೆರೆ ಶಂಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಯಮ್ಮ, ಶೈಲಜ, ಯುವಾಧ್ಯಕ್ಷ ವಿನಯಕುಮಾರ್, ಪ.ಪಂ ಸದಸ್ಯ ಬಲರಾಮಯ್ಯ, ತುಮುಲ್ ನಿರ್ದೇಶಕ ಈಶ್ವರಯ್ಯ, ಮುಖಂಡರಾದ ಎಲ್.ರಾಜಣ್ಣ, ವೆಂಕಟಪ್ಪ, ವೆಂಕಟೇಶ್, ಕೆ.ವಿ.ಮಂಜುನಾಥ್, ಮಹೇಶ್, ಗೋಂದಿಹಳ್ಳಿ ರಂಗರಾಜು, ಟಿ.ಸಿ.ರಾಮಯ್ಯ, ಅರವಿಂದ, ಉಮಾಶಂಕರ್, ಕೆ.ಎಲ್.ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap