ತುಮಕೂರು
ವಿಶ್ವವಿದ್ಯಾಲಯಗಳ ಪ್ರಮುಖ ಆದ್ಯತೆ ದೀನದಲಿತರ ಮಹತ್ವಾಕಾಂಕ್ಷೆಗಳಿಗೆ ಸ್ಪಂದಿಸುವುದಾಗಿರಬೇಕು. ವಿಶ್ವವಿದ್ಯಾಲಯಗಳು ಜ್ಞಾನ ಶಾಖೆಗಳಾಗಬೇಕೇ ಹೊರತು ಅಂಕಪಟ್ಟಿ ತಯಾರಿಸುವ ಫ್ಯಾಕ್ಟರಿಗಳಾಗಬಾರದು ಎಂದು ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಎಂ.ಕೆ.ಸೂರಪ್ಪ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಸ್ಥಾಪನೆಗೊಂಡು 14 ವರ್ಷಗಳಾದ ಸಂದರ್ಭದಲ್ಲಿ ಮಂಗಳವಾರ ನಡೆದ ವಿವಿ ಸಂಸ್ಥಾಪನಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ವಿಶೇಷ ಉಪನ್ಯಾಸ ನೀಡಿದರು.ಉನ್ನತ ಶಿಕ್ಷಣ ನೀಡುವ ಸಂಸ್ಥೆಗಳು ಸಮಾಜದ ಏಳಿಗೆಗೆ ದುಡಿಯಬೇಕಿರುವುದು ಉನ್ನತ ಶಿಕ್ಷಣದ ಮೂಲ ಉದ್ದೇಶ. ಅದಕ್ಕೆ ಪೂರಕವಾಗಿ ನಮ್ಮ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಕೂಡ ಆಗಿರುವುದರಿಂದ ಭಾರತದ ಭವಿಷ್ಯ ಉಜ್ವಲವಾಗುವುದರ ಬಗ್ಗೆ ತಮ್ಮ ಆಶಯ ವ್ಯಕ್ತಪಡಿಸಿದರು. ಅಧ್ಯಾಪಕರ ಪ್ರಕಟಣೆಗಳು ಗುಣಮಟ್ಟ ಕಾಪಾಡಿಕೊಳ್ಳದೆ ಹೋದರೆ ದೇಶಕ್ಕೆ ಮಾರಕ ಎಂದ ಅವರು, ವಿಶ್ವವಿದ್ಯಾಲಯಗಳು ಜ್ಞಾನ ಶಾಖೆಗಳಾಗಬೇಕೇ ಹೊರತು ಅಂಕಪಟ್ಟಿ ತಯಾರಿಸುವ ಫ್ಯಾಕ್ಟರಿಗಳಾಗಬಾರದು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ವೈ.ಎಸ್.ಸಿದ್ದೇಗೌಡರು ಅಧ್ಯಕ್ಷೀಯ ನುಡಿಗಳನ್ನಾಡಿ, ತುಮಕೂರು ವಿಶ್ವವಿದ್ಯಾಲಯ ತನ್ನ ಹದಿನಾರು ವರ್ಷಗಳ ಇತಿಹಾಸದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದೆ ಎಂದರು. ತುಮಕೂರು ವಿಶ್ವವಿದ್ಯಾಲಯವು ರಾಜ್ಯದ ಬಹಳಹಳೆಯ ವಿಶ್ವವಿದ್ಯಾಲಯಗಳೊಂದಿಗೆ ಸ್ಪರ್ಧಿಸಿ ಶ್ರೇಷ್ಠಗುಣಮಟ್ಟದ ಶಿಕ್ಷಣಕ್ಕಾಗಿ ಗುರುತಿಸಲ್ಪಟ್ಟ ರಾಜ್ಯದ ಐದು ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವುದನ್ನು ಹೆಮ್ಮೆಯಿಂದ ನೆನೆದರು. ಕುಲಸಚಿವರಾದ ಗಂಗಾನಾಯಕ್ ಸ್ವಾಗತ ಭಾಷಣ ಮಾಡಿ ಮುಖ್ಯ ಅಥಿತಿಗಳನ್ನು ಪರಿಚಯಿಸಿದರು. ಮತ್ತು ಪರೀಕ್ಷಾಂಗ ಕುಲಸಚಿವರಾದ ಕೊಟ್ರೇಶ್ ವಂದನಾರ್ಪಣೆ ಮಾಡಿದರು. ಡಾ.ಜಾಯ್ನೆರೆಲ್ಲಾ ಕಾರ್ಯಕ್ರಮ ನಿರೂಪಣೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ