ಬಳ್ಳಾರಿ:
ಗಣಿ ನಾಡು ಬಳ್ಳಾರಿ ಜಿಲ್ಲೆಯ ಎಲ್ಲ ಶ್ರೀರಾಘವೇಂದ್ರ ಸ್ವಾಮೀಗಳವರ ಮಠ ಸೇರಿದಂತೆ ನಾನಾ ಪ್ರಸಿದ್ಧ ದೇವಾಲಯಗಳಲ್ಲಿ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮಧ್ಯರಾಧಾನೆಯನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು. ನಗರ ಸೇರಿದಂತೆ ಸಿರುಗುಪ್ಪ, ಕುರಗೋಡು, ಕಂಪ್ಲಿ, ಸಂಡೂರು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಗಿ, ಹಂಪಿ ಸೇರಿದಂತೆ ನಾನಾ ಪ್ರಸಿದ್ಧ ದೇವಾಲಯದಲ್ಲಿ ಶ್ರೀರಾಘವೇಂದ್ರ ತೀರ್ಥ ಸ್ವಾಮೀಗಳವರ ಮಧ್ಯಾರಾಧನೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ನಗರದ ಶ್ರೀಸತ್ಯನಾರಾಯಣ ಪೇಟೆಯ ನಂಜನಗೂಡು ಶ್ರೀರಾಘವೇಂದ್ರ ಸ್ವಾಮೀಗಳವರ ಶ್ರೀಮಠದಲ್ಲಿ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 347ನೇ ಆರಾಧನಾ ಮಹೋತ್ಸವವನ್ನು ಮಂಗಳವಾರ ಆಚರಿಸಲಾಯಿತು. ಮಧ್ಯಾರಾಧನೆ ನಿಮಿತ್ತ ದೇವಾಲಯದಲ್ಲಿ ಶ್ರೀಮಠದ ವ್ಯವಸ್ಥಾಪಕ ಹಾಗೂ ಧರ್ಮಕರ್ತ ರಾಜಾ ಎಂ.ಎಚ್.ಬ್ರಹ್ಮಣ್ಯಾಚಾರ್ಯ ಅವರ ನೇತೃತ್ವದಲ್ಲಿ, ಬೆಳಿಗ್ಗೆ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಪಂಚಾಮೃತಾಭಿಷೇಕ, ಕನಕಾಭಿಷೇಕ, ಅರ್ಚನೆ, ನೈವಿದ್ಯೆ, ವಿಶೇಷ ಪೂಜೆ, ಅಲಂಕಾರ, ಹಸ್ತೋದಕ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು. ಸಂಜೆ ದಿವಟಿಗೆ ಮಂಗಳಾರತಿ, ಉತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ ಸೇರಿದಂತೆ ಸುಧಾ ಸಂಗೀತ ನಿಲಯ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು. ಆರಾಧಾನೆ ನಿಮಿತ್ತ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ, ಮಾಜಿ ಸಚಿವ ದಿವಾಕರ್ ಬಾಬು, ಮಾಜಿ ಶಾಸಕ ಸುರೇಶ್ ಬಾಬು, ಶಾಸಕ ಬಿ.ನಾಗೇಂದ್ರ ಸೇರಿದಂತೆ ವಿವಿಧ ಗಣ್ಯರು, ಉದ್ಯಮಿಗಳು ಗುರುರಾಯರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಶ್ರೀಮಠದ ಗೌರವ ವಿಚಾರಣಾಕರ್ತ ಬಿ.ಕೆ.ಸಂಜೀವ ಮೂರ್ತಿ ಸೇರಿದಂತೆ ಇತರರು ಇದ್ದರು.
ಲಕ್ಷ್ಮೀನಾರಾಯಣ ದೇವಾಲಯ: ನಗರದ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಮಧ್ಯರಾಧಾನೆಯನ್ನು ಮಂಗಳವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಆರಾಧನೆ ನಿಮಿತ್ತ ದೇವಾಲಯದಲ್ಲಿ ಶ್ರೀಗುರುರಾಯರಿಗೆ ಪಂಚಾಮೃತಾಭಿಷೇಕ, ನೈವಿದ್ಯ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಇದಕ್ಕೂ ಮುನ್ನ ಬೆಳಿಗ್ಗೆ ಶ್ರೀಗುರುರಾಯರ ಅಷ್ಟೋತ್ತರ ಪಾರಾಯಣ ಸೇರಿದಂತೆ ವಿವಿಧ ಪಂಡಿತರಿಂದ ಉಪನ್ಯಾಸ ನಡೆಯಿತು. ಈ ಸಂದರ್ಭದಲ್ಲಿ ಮುಖಂಡರಾದ ಡಾ.ಶ್ರೀನಾಥ್ ಸೇರಿದಂತೆ ವಿವಿಧ ಗಣ್ಯರು, ದೇವಾಲಯದ ಅರ್ಚಕರು, ಮುಖ್ಯಸ್ಥರು ಇತರರು ಇದ್ದರು.
