ಬೆಂಗಳೂರು:
ಸಚಿವ ಸಾ ರಾ ಮಹೇಶ್ ವಿರುದ್ಧ ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಸಿಟ್ಟಾಗಿದ್ದಕ್ಕೆ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊಡಗಿನಲ್ಲಿ ಪ್ರವಾಹ ಮತ್ತು ಭೂ ಕುಸಿತ ಸಂಭವಿದ ದಿನದಿಂದ ವಾರಗಳ ಕಾಲ ನಮ್ಮ ಸಚಿವರುಗಳು ಅಲ್ಲಿ ಸ್ವತಃ ಹೋಗಿ ಪರಿಹಾರ ಮತ್ತು ರಕ್ಷಣಾ ಕಾರ್ಯದ ಉಸ್ತುವಾರಿ ನೋಡಿಕೊಂಡಿದ್ದಾರೆ. ನೀವು ಅವರಿಗೆ ಅದೇ ತರಹದ ಗೌರವ ಮತ್ತು ಸಹಕಾರ ತೋರಿಸಬೇಕಾಗಿತ್ತು. ಅದು ಬಿಟ್ಟು ಅವರ ಮೇಲೆ ಸಿಟ್ಟಾಗಿ ಮಾತನಾಡಿದ್ದು ತೀವ್ರ ಬೇಸರವನ್ನುಂಟುಮಾಡಿದೆ ಎಂದಿದ್ದಾರೆ.
ರಾಜ್ಯ ಸರ್ಕಾರಗಳು ತಮ್ಮ ಅಧಿಕಾರವನ್ನು ಸಂವಿಧಾನದಿಂದ ಪಡೆದುಕೊಳ್ಳುತ್ತದೆಯೇ ಹೊರತು ಕೇಂದ್ರ ಸರ್ಕಾರದಿಂದಲ್ಲ. ಈ ದೇಶದ ಸಂವಿಧಾನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸರಿಯಾದ ಹೊಂದಾಣಿಕೆಯಾಗುವಂತೆ ಸಮನ್ವಯವಾಗಿ ಅಧಿಕಾರವನ್ನು ಹಂಚಿಕೆ ಮಾಡಿದೆ. ನಾವು ಕೇಂದ್ರ ಸರ್ಕಾರಕ್ಕಿಂತ ಕಡಿಮೆಯಲ್ಲ, ನಾವು ಸಹಭಾಗಿಗಳು ಎಂದು ತಿರುಗೇಟು ನೀಡಿದ್ದಾರೆ.








