ತುಮಕೂರು:
ಮಕ್ಕಳ ಮನಸ್ಸು ನಿಷ್ಕಲ್ಮಶವಾಗಿರುತ್ತದೆ. ವಯಸ್ಸಾದಂತೆ ಸದ್ಭಾವನೆಗಳ ಜಾಗದಲ್ಲಿ ದುರ್ಭಾವನೆಗಳು ಬೆಳೆಯುತ್ತವೆ. ಅದನ್ನು ಯಾರು ಮೆಟ್ಟಿನಿಲ್ಲುತ್ತಾರೋ, ಅವರು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ಕುಲಪತಿಗಳಾದ ಪ್ರೊ. ವೈ.ಎಸ್. ಸಿದ್ದೇಗೌಡ ತಿಳಿಸಿದರು.
ವಿಶ್ವವಿದ್ಯಾನಿಲಯದ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಸೋಮವಾರ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಜನ್ಮದಿನದ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ‘ಸದ್ಭಾವನಾ ದಿನಾಚರಣೆ’ಯನ್ನು ಕುರಿತು ಮಾತನಾಡಿದರು.
ನಮ್ಮ ಯುವಜನಾಂಗ ಹಕ್ಕುಗಳ ಬಗೆಗೆ ಕ್ರಿಯಾಶೀಲವಾಗಿ ಚಿಂತಿಸುವಂತೆ, ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗೆಗೆ ಚಿಂತಿಸಬೇಕು. ಯಾವುದು ಉಪಯುಕ್ತ, ಯಾವುದು ಉಪಯುಕ್ತವಲ್ಲ ಎಂಬ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ತಂದೆ-ತಾಯಿ ಇವನು ನನ್ನ ಮಗ-ಮಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ವ್ಯಕ್ತಿತ್ವ ನಮ್ಮದಾಗಿರಬೇಕು. ಜೊತೆಗೆ ಎಲ್ಲಾ ಅರಿಷಡ್ವರ್ಗಗಳನ್ನು ಹಾಗೂ ಎಲ್ಲಾ ಆಕರ್ಷಣೆಗಳನ್ನು ಮೆಟ್ಟಿನಿಲ್ಲಬೇಕು ಎಂದರು. ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ದಾಂಜಲಿ ಅರ್ಪಿಸಿದರು.
ವಿಶ್ವವಿದ್ಯಾನಿಲಯ ಸಾಂಸ್ಕತಿಕ ಸಮಿತಿಯ ಸಂಯೋಜಕರಾದ ಪ್ರೊ. ಬಿ.ಕರಿಯಣ್ಣ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎ.ಎಂ. ಮಂಜುನಾಥ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಬೋಧಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
