ಚಿತ್ರದುರ್ಗ:
ಯಾರು ಹಸಿವಿನಿಂದ ಬಳಬಾರದೆಂದು ಸರ್ಕಾರ ಉಚಿತವಾಗಿ ನೀಡುತ್ತಿರುವ ಅಕ್ಕಿ ನಮಗೆ ಸಿಗುತ್ತಿಲ್ಲ ಎಂದು ತಾಲೂಕಿನ ಯಳಗೋಡು ವ್ಯಾಪ್ತಿಗೆ ಸೇರಿದ ಅಜ್ಜಪ್ಪನಹಳ್ಳಿ ಗ್ರಾಮದ ಬಡವರು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ಬಾಬು ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಉಚಿತ ರೇಷನ್ ತರಬೇಕೆಂದರೆ ಅಜ್ಜಪ್ಪನಹಳ್ಳಿಯಿಂದ ಐದಾರು ಕಿ.ಮೀ.ದೂರ ಹೋಗಬೇಕಾಗಿರುವುದರಿಂದ ಐವತ್ತು ರೂ.ಗಳು ಖರ್ಚಾಗುತ್ತದೆ. ಹೀಗಾದರೆ ನಮಗೆ ಉಚಿತವಾಗಿ ಅಕ್ಕಿ ಸಿಗುವುದಾದರೂ ಎಲ್ಲಿಂದ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ಕಳೆದ ಐದಾರು ತಿಂಗಳಿಂದ ಪಡಿತರ ಧಾನ್ಯಗಳು ನಮ್ಮ ಕೈಗೆ ಸಿಕ್ಕಿಲ್ಲ ಎಂದು ಕಷ್ಟಗಳನ್ನು ತೋಡಿಕೊಂಡರು.
ಆಹಾರ ಇಲಾಖೆಯವರು ತಿಂಗಳ ಕೊನೆಗೆ ತಂಬ್ ಇಂಪ್ರೆಷನ್ ತೆಗೆದುಕೊಂಡು ಹೋಗಲು ಬಂದರೂ ಸರ್ವರ್ ಸರಿಯಿಲ್ಲ ಎಂಬ ನೆಪ ಹೇಳಿ ಹಿಂದಿರುಗುತ್ತಾರೆ. ಯಳಗೋಡು ಸೊಸೈಟಿ ಮೂಲಕ ನಮಗೆ ಪ್ರತಿ ತಿಂಗಳು ಅಕ್ಕಿ ವಿತರಣೆಯಾಗಬೇಕು. ಇಲ್ಲದಿದ್ದರೆ ನಾವು ಬದುಕುವುದು ಹೇಗೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.ಸೈಯದ್ ಮಹಮದ್, ಇಲಿಯಾಸ್ಖಾನ್, ಗಿರೀಶ್, ಇಲಿಯಾಸ್, ಫೈರೋಜ್ಖಾನ್, ಸೈಯದ್ ಇಮಾಂಸಾಬ್, ದಾದಾಪೀರ್, ಇರ್ಫಾನ್, ಆಶಾಭಿ, ಮರಿಯಜ್ಜಿ, ನೀಲಮ್ಮ, ಜಯಮ್ಮ, ಸಮೀರ್, ತಿಮ್ಮಜ್ಜ, ಹುಸೇನ್ಬೀ ಸೇರಿದಂತೆ ಅಜ್ಜಪ್ಪನಹಳ್ಳಿಯ ನೂರಾರು ಮಂದಿ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ