ಹಿರಿಯೂರು :
ಸಮಾಜದ ಸ್ವಾಸ್ಥ ಕಾಪಾಡುವ ಹಾಗೂ ಸಮಾಜದಲ್ಲಿ ಚಲನಶೀಲ ಬದಲಾವಣೆ ತರುವ ನಿಟ್ಟಿನಲ್ಲಿ ರಂಗಭೂಮಿ ಒಂದು ಪ್ರಮುಖ ಮಾಧ್ಯಮವಾಗಿದೆ ಎಂಬುದಾಗಿ ಹಿರಿಯ ರಂಗಭೂಮಿ ಕಲಾವಿದ ಮಲ್ಲಪ್ಪನಹಳ್ಳಿ ಮಹಲಿಂಗಯ್ಯ ಹೇಳಿದರು.ನಗರದ ಜ್ಞಾನಭಾರತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವಿಶ್ವರಂಗಭೂಮಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗ ಚಟುವಟಿಕೆಗಳು ವ್ಯಕ್ತಿಯ ಮತ್ತು ಸಮಾಜದ ವಿಕಸನಕ್ಕೆ ಪರಿಣಾಮಕಾರಿಯಾದ ಕೊಡುಗೆ ನೀಡುತ್ತಾ ಬಂದಿವೆ. ಪ್ರಸ್ತುತ ರಂಗಭೂಮಿಯೂ ರಾಜಕೀಯ ಪಕ್ಷಗಳ ಪ್ರಚಾರ ಮಾಧ್ಯಮವಾಗಿ ಬದಲಾಗುತ್ತಿರುವುದು ನೋವಿನ ಸಂಗತಿ. ಎಲೆಕ್ಟ್ರಾನಿಕ ಮಾಧ್ಯಮಗಳ ಹಾವಳಿಯಿಂದ ಗ್ರಾಮೀಣ ಪ್ರದೇಶಗಳಲ್ಲೂ ಸಾಂಸ್ಕøತಿಕ ಹಾಗೂ ಸಾಮಾಜಿಕ ಬದಲಾವಣೆಗಳಾಗುತ್ತಿವೆ. ಇದನ್ನು ಪ್ರಜ್ಞಾವಂತರು ತಡೆಯಬೇಕಿದೆ ಎಂದು ಅವರು ಹೇಳಿದರು.
ರಂಗ ವಿಮರ್ಶಕ ಡಾ. ವಿ.ಬಸವರಾಜ್ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ರಂಗಭೂಮಿಯ ಆಯಾಮಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳಬಹುದು. ರಂಗಭೂಮಿ ಶಿಸ್ತು, ಏಕಾಗ್ರತೆಯನ್ನು ಬೆಳೆಸುವುದರಿಂದ, ಪಠ್ಯದಲ್ಲಿರುವ ವಿಷಯ ವಿಸ್ತಾರವನ್ನು ಉಂಟುಮಾಡಿ ಅರ್ಥಪೂರ್ಣ ಕಲಿಕೆಗೆ ಹಾದಿ ಮಾಡಿಕೊಡುತ್ತದೆ. ನವರಸಗಳನ್ನು ರೂಢಿಸಿಕೊಂಡಲ್ಲಿ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯ ಎಂದರು.
ರಂಗನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ರಂಗಭೂಮಿ ಕುರಿತು ಉಪನ್ಯಾಸ ನೀಡಿದರು ಪ್ರಾಂಶುಪಾಲ ಎನ್.ಧನಂಜಯ, ಜ್ಞಾನಭಾರತಿ ಶಿಕ್ಷಣಸಂಸ್ಥೆ ವ್ಯವಸ್ಥಾಪಕ ಕೆ.ದೊರೇಶ್ ಹಾಗೂ ಉಪನ್ಯಾಸಕರುಗಳಾದ ನಾಗೇಶ್, ಅರುಣ, ತನು, ರವಿಕುಮಾರ್, ನಂದೀಶ್, ಇದ್ದರು. ರಂಗಭೂಮಿ ನಟ ಎಂ.ಕೆ.ಹರೀಶ್ ಮತ್ತು ಸಂಗಡಿಗರು ರಂಗಗೀತೆ ಹಾಡಿದರು. ಹಿರಿಯ ಉಪಸ್ಯಾಸಕ ಎಂ.ಬಸವರಾಜ್ ಕಾರ್ಯಕ್ರಮ ನಿರೂಪಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
