ಹುಳಿಯಾರು:
ರೇಬಿಸ್ ರೋಗವು ಹೆಚ್ಚಾಗಿ ಹರಡುತ್ತಿದ್ದು ದೇಶದಲ್ಲಿ 10 ನಿಮಿಷಕ್ಕೊಬ್ಬ ರೇಬಿಸ್ ರೋಗದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಪಶು ವೈದ್ಯಾಧಿಕಾರಿಗಳಾದ ಡಾ.ಕಾವ್ಯ ತಿಳಿಸಿದರು.
ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆಯಲ್ಲಿ ಪಶು ಇಲಾಖೆ ಹಾಗೂ ಹಾಲು ಉತ್ಪಾದಕರ ಸಂಘದಿಂದ ಏರ್ಪಡಿಸಿದ್ದ ರೇಬಿಸ್ ರೋಗದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸಾಕುನಾಯಿ ಮತ್ತು ಬೆಕ್ಕುಗಳಿಗೆ ನಿಯಮಿತವಾಗಿ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ಕೊಡಿಸಬೇಕು. ಅವುಗಳ ಆರೋಗ್ಯದ ಬಗ್ಗೆ ಪಶುವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಬೇಕು. ಬೀದಿ ನಾಯಿಗಳೊಂದಿಗೆ ಆಟವಾಡಲು ಮಕ್ಕಳಿಗೆ ಅವಕಾಶ ನೀಡಬಾರದು ಎಂದರು.
ಜೊಲ್ಲು ಸುರಿಸುವುದು, ಬೆಳಕು ಕಂಡರೆ ಓಡುವುದು, ನೀರು ಕುಡಿಯದಿರುವುದು ರೇಬಿಸ್ ರೋಗ ಬಂದಿರುವ ಲಕ್ಷಣವಾಗಿದೆ. ರೇಬಿಸ್ ವ್ಯಾಕ್ಸಿನ್ ಹಾಕಿಸುವುದರಿಂದ ರೋಗ ಹರಡುವುದನ್ನು ತಪ್ಪಿಸಬಹುದಾಗಿದೆ. ಹಾಗಾಗಿ ನಿಮ್ಮ ಮನೆಯ ನಾಯಿ, ಬೆಕ್ಕು ಸೇರಿದಂತೆ ಇತರ ಸಾಕುಪ್ರಾಣಿಗಳಿಗೆ ರೇಬಿಸ್ ರೋಗ ಬಂದಿರುವ ಪ್ರಾಣಿ ಕಚ್ಚಿದರೆ ಯಾವುದೋ ಮಾತ್ರೆ ಹಾಕಿ ಸುಮ್ಮನಾಗದೆ ಸಮೀಪದ ಪಶು ಆಸ್ಪತ್ರೆಗೆ ತೆರಳಿ ರೇಬಿಸ್ ವ್ಯಾಕ್ಸಿನ್ ಹಾಕಿಸುವಂತೆ ತಿಳಿಸಿದರು.
ಸೋಂಕಿತ ಪ್ರಾಣಿಯೊಂದು ಇನ್ನೊಂದು ಪ್ರಾಣಿಯನ್ನು ಕಚ್ಚಿದಾಗ ಸೋಂಕಿತ ಪ್ರಾಣಿಯ ಜೊಲ್ಲಿನಲ್ಲಿರುವ ವೈರಸ್ ವರ್ಗಾವಣೆಗೊಳ್ಳುತ್ತದೆ. ಅಲ್ಲದೆ ನೆಕ್ಕುತ್ತಿರುವುದರಿಂದಲೂ ರೇಬಿಸ್ ವೈರಸ್ ಶರೀರವನ್ನು ಪ್ರವೇಶಿಸುತ್ತದೆ. ನಿಮ್ಮ ಪ್ರಾಣಿಗಳಿಗೆ ಯಾವುದೇ ಇನ್ನೊಂದು ಪ್ರಾಣಿ ಕಚ್ಚಿದರೆ ಕಚ್ಚಿರುವ ಜಾಗವನ್ನು ನಲ್ಲಿ ನೀರಿನಿಂದ ಸೋಪು ಬಳಸಿ 10 ನಿಮಿಷ ತೊಳಯಬೇಕು. ನಂತರ ಆಸ್ಪತ್ರೆಗೆ ಕರೆ ತಂದು 5 ಬಾರಿ ವ್ಯಾಕ್ಸಿನ್ ಹಾಕಿಸಬೇಕು ಎಂದು ಮಾಹಿತಿ ನೀಡಿದರು.
ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೆ.ಮ.ನಾಗಭೂಷಣ, ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಹೆಚ್.ಟಿ.ಮಂಜುನಾಥ, ಯಳನಾಡು ಪಶುವೈದ್ಯಾಧಿಕಾರಿ ಸಂಧ್ಯಾರಾಣಿ, ಗಾಣದಾಳು ಪಶು ವೈದ್ಯಾಧಿಕಾರಿಗಳಾದ ಡಾ.ಯೋಗೇಶ್, ಪಶು ಪರೀಕ್ಷಕರಾದ ವೆಂಕಟಪ್ಪ, ಸೇವಾನಾಯ್ಕ, ಪಶುವೈದ್ಯ ಸಹಾಯಕರಾದ ಚಂದ್ರಶೇಖರ್, ಸಿಬ್ಬಂದಿಗಳಾದ ಭಾಸ್ಕರ, ಗಜೇಂದ್ರ, ತ್ರಿವೇಣಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ