ಕೊರೊನಾ ಭಯ ಬಿಟ್ಟು ಕಾಲೇಜಿನತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

ಹುಳಿಯಾರು : 

      ಕಳೆದ ಒಂದೂವರೆ ವರ್ಷಗಳಿಂದ ಮುಚ್ಚಲಾಗಿದ್ದ ಶಾಲಾ ಕಾಲೇಜಿನ ಬೌತಿಕ ತರಗತಿಗಳು ಸೋಮವಾರದಿಂದ ಆರಂಭವಾಗಿದ್ದು ವಿದ್ಯಾರ್ಥಿಗಳು ಕೊರೊನಾ ಭಯ ಬಿಟ್ಟು ಲವಲವಿಕೆಯಿಂದ ಕಾಲೇಜಿನತ್ತ ಹೆಜ್ಜೆ ಹಾಕಿದರು.

      ಹೌದು ಕೊರೊನಾ ವೈರಸ್ ಸೋಂಕಿನ ಆರ್ಭಟದ ಹಿನ್ನೆಲೆಯಲ್ಲಿ ಕಳೆದ 2020 ರ ಮಾರ್ಚ್ ತಿಂಗಳಿನಲ್ಲಿ ಶಾಲಾಕಾಲೇಜುಗಳನ್ನು ಮುಚ್ಚಲಾಗಿತ್ತು. ನಂತರ ಇದೇ ಕಾರಣಕ್ಕಾಗಿ ಪಿಯುಸಿ ಪರೀಕ್ಷೆ ಕೈ ಬಿಡಲಾಗಿದ್ದರೂ ಬಹಳ ಎಚ್ಚರಿಕೆಯಿಂದ ಎಸ್‍ಎಸ್‍ಎಲ್ಸಿ ಪರೀಕ್ಷೆ ನಡೆಸಲಾಗಿತ್ತು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುಸೂತ್ರವಾಗಿ ನಡೆದ ಹಿನ್ನೆಲೆಯಲ್ಲಿ ಕೊರೊನಾ ಮೂರನೇ ಅಲೆಯ ಆತಂಕ ಕಾಡುತ್ತಿದ್ದರೂ ಶಾಲಾ ಕಾಲೇಜಿನ ಬೌತಿಕ ತರಗತಿ ಆರಂಭಿಸಲು ಸರ್ಕಾರ ಮುಂದಾಯಿತು.

ಅದರಂತೆ ಹುಳಿಯಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅನ್ನು ಕೋವಿಡ್ ಕೆಲ ನಿಯಮದೊಂದಿಗೆ ಸೋಮವಾರ ಆರಂಭಿಸಲಾಯಿತು. ಅಲ್ಲದೆ ಕಾಲೇಜಿನ ಕೊಠಡಿಗಳನ್ನು ಕೋವಿಡ್ ಮಾರ್ಗಸೂಚಿಯಂತೆ ಸ್ಯಾನಿಟೈಸ್ ಮಾಡಲಾಗಿತ್ತು. ಸರ್ಕಾರ ದ್ವಿತೀಯ ಪಿಯುಸಿಗೆ ಮಾತ್ರ ತರಗತಿ ಆರಂಭಿಸಿದ್ದರೂ ಅಚ್ಚರಿ ಎನ್ನುವಂತೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳೂ ತರಗತಿಗೆ ಆಗಮಿಸಿದ್ದರು. ಪ್ರಥಮ ಪಿಯುಸಿಗೆ ಪ್ರವೇಶ ಪಡೆದ 250 ವಿದ್ಯಾರ್ಥಿಗಳ ಪೈಕಿ 180 ವಿದ್ಯಾರ್ಥಿಗಳು ಮೊದಲ ದಿನವೇ ಕಾಲೇಜಿಗೆ ಆಗಮಿಸಿದ್ದರು.

ಕಾಲೇಜಿಗೆ ವಿದ್ಯಾರ್ಥಿಗಳು ಬರುವರೋ ಇಲ್ಲವೋ ಎನ್ನುವ ಗೊಂದಲದಲ್ಲಿದ್ದ ಉಪನ್ಯಾಸಕರಿಗೆ ಅಚ್ಚರಿಯ ಜೊತೆಗೆ ಕೋವಿಡ್ ನಿಯಮ ಪಾಲನೆಯ ತಲೆಬಿಸಿ ಎದುರಾಯಿತು. ಸಮಾಜಿಕ ಅಂತರ ಕಾಪಾಡಿ ಪಠ್ಯ ಬೋದನೆ ಅಸಾಧ್ಯವೆಂದು ನಿರ್ಧರಿಸಿ ಕಾಲೇಜಿನ ನಿಯಮ, ಉಪನ್ಯಾಸಕರ ಪರಿಚಯ, ಆಫ್‍ಲೈನ್ ತರಗತಿಯ ವಿವರ ನೀಡುವ ಜೊತೆಗೆ ಕೋವಿಡ್ ನಿಯಮ ಪಾಲನೆಯ ಎಚ್ಚರಿಕೆ ನೀಡಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಮನೆಗಳಿಗೆ ಕಳುಹಿಸಿಕೊಡಲಾಯಿತು.

      ಇನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೂ ಸಹ ನಾವೇನು ಕಮ್ಮಿ ಎನ್ನುವಂತೆ ಕಾಲೇಜಿಗೆ ಆಗಮಿಸಿದ್ದರು. ವಿಜ್ಞಾನ ವಿಭಾಗದಿಂದ ಪ್ರವೇಶ ಪಡೆದ 99 ವಿದ್ಯಾರ್ಥಿಗಳ ಪೈಕಿ 93 ವಿದ್ಯಾರ್ಥಿಗಳು, ಕಾಮರ್ಸ್‍ನಿಂದ ಪ್ರವೇಶ ಪಡೆದ 124 ವಿದ್ಯಾರ್ಥಿಗಳ ಪೈಕಿ 98 ವಿದ್ಯಾರ್ಥಿಗಳು, ಕಲಾ ವಿಭಾಗದಿಂದ ಪ್ರವೇಶ ಪಡೆದ 134 ವಿದ್ಯಾರ್ಥಿಗಳ ಪೈಕಿ 63 ವಿದ್ಯಾರ್ಥಿಗಳು ಮೊದಲ ದಿನ ಹಾಜರಾಗಿದ್ದರು.

      ಕಡ್ಡಾಯವಾಗಿ ಮಾಸ್ಕ್ ಧರಿಸಿ ಪೋಷಕರ ಒಪ್ಪಿಗೆ ಪತ್ರ ತಂದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು ಕಾಲೇಜಿನ ಮುಂಭಾಗ ಉಪನ್ಯಾಸಕರು ಥರ್ಮಲ್ ಸ್ಮಿನಿಂಗ್ ಹಾಗೂ ಸ್ಯಾನಿಟೈಸರ್ ನಿಂದ ಪ್ರತಿ ವಿದ್ಯಾರ್ಥಿಯನ್ನು ಪರೀಕ್ಷಿಸಿ ಶಾಲೆಯ ಒಳಕ್ಕೆ ಬಿಡಲಾಗುತ್ತಿತ್ತು. ಹೊರಗಿನ ತಿಂಡಿಗಳನ್ನು ತಿನ್ನಬಾರದು. ಸಾಧ್ಯವಾದರೆ ಮನೆಯಿಂದಲೇ ಬಿಸಿ ನೀರನ್ನು ತರಬೇಕು. ಕೊರೋನ ನಿಯಂತ್ರಣಕ್ಕೆ ಬರುವವರೆಗೆ ಸ್ನೇಹಿತರೊಟ್ಟಿಗೆ ಗುಂಪುಗೂಡುವುದನ್ನು ನಿಲ್ಲಿಸಬೇಕು. ಜ್ವರ, ನೆಗಡಿ, ಕೆಮ್ಮಿನಂತಹ ಲಕ್ಷಣಗಳು ಕಂಡುಬಂದರೆ ಪೋಷಕರೊಂದಿಗೆ ಚರ್ಚಿಸಿ ಮನೆಯಲ್ಲಿ ಉಳಿದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link