

ಶಿವಮೊಗ್ಗ: ಜೂನ್ 1ರಂದು ಸಿಎಂ ಸಿದ್ದರಾಮಯ್ಯನವರು 1 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಉದ್ಘಾಟನೆ ಮಾಡಲಿದ್ದಾರೆಂದು’ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದ್ದಾರೆ.
ಜೂನ್ 1 ರಂದು ಕೆಪಿಎಸ್ ಶಾಲೆಗಳ ಉದ್ಘಾಟನೆ ನಡೆಯಲಿರುವ ಅಲ್ಲಮಪ್ರಭು ಮೈದಾನದಲ್ಲಿ ಕಾರ್ಯಕ್ರಮದ ವೇದಿಕೆ ಕಾಮಗಾರಿ ವೀಕ್ಷಣೆ ನಡೆಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನಮ್ಮ ಸರ್ಕಾರದಲ್ಲಿ ಕೆಪಿಎಸ್ ಶಾಲೆಗಳ ಉದ್ಘಾಟನೆ ನೆರವೇರಲಿದೆ. ಇದು ನಮ್ಮ ಶಿಕ್ಷಣ ಇಲಾಖೆಯ ಸಾಧನೆಯಾಗಿದೆ. ಜೂನ್ 1 ರಂದು 1 ಸಾವಿರ ಕೆಪಿಎಸ್ ಶಾಲೆಗಳ ಶಂಕುಸ್ಥಾಪನೆ ನೆರವೇರಲಿದೆ. ನಿನ್ನೆ ಪಿಯುಸಿ ಪರೀಕ್ಷೆಯೆ ಎರಡನೇ ಫಲಿತಾಂಶದಲ್ಲಿ ಶೇ. 92ರಷ್ಟು ಸಾಧನೆ ತೋರಿದ್ದೇವೆ’ ಎಂದರು.
ನಮ್ಮ ಇಲಾಖೆಯಲ್ಲಿ ಬಹಳಷ್ಟು ನ್ಯೂನತೆ ಸರಿಪಡಿಸಿದ್ದೇವೆ. ರಾಜ್ಯದಲ್ಲಿ ಕಳೆದ ಬಾರಿ ಶೇ. 62ರಷ್ಟು ಮಕ್ಕಳು ಪಾಸ್ ಆಗಿದ್ದರು. ಈ ಬಾರಿ ಶೇ. 66.5 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದು ಕೂಡ ನಮ್ಮ ಇಲಾಖೆಯ ಸಾಧನೆಯಾಗಿದೆ. ಮೊದಲು ಮಕ್ಕಳು ಶಿಕ್ಷಕರಿಗೆ ಹುಡುಕುವಂತಾಗುತ್ತಿತ್ತು, ಆದರೆ ಈಗ ಶಿಕ್ಷಕರು ಮಕ್ಕಳನ್ನು ಹುಡುಕುತ್ತಿದ್ದಾರೆ. ನಮ್ಮ ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಸರ್ಕಾರಿ ಶಾಲೆಯಲ್ಲಿ ಬಹಳಷ್ಟು ಬದಲಾವಣೆ ಮಾಡಿದ್ದೇವೆ. ಎಲ್ಲೆಡೆ ಗುಣಮಟ್ಟದ ಶಿಕ್ಷಣ ನೀಡಲು ನಾವು ಬದ್ಧರಾಗಿದ್ದೇವೆ. ತೆಲಂಗಾಣದಲ್ಲಿ ಪಬ್ಲಿಕ್ ಶಾಲೆಗಳು ಆರಂಭವಾಗಿದ್ದು, ಅವರು ಸಹ ನಮ್ಮ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಪಬ್ಲಿಕ್ ಶಾಲೆಗಳ ಆರಂಭಕ್ಕೆ ಮುಂದಾಗಿದ್ದೇವೆ’ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ 19 ಕೆಪಿಎಸ್ ಶಾಲೆ, ಶಿವಮೊಗ್ಗದಲ್ಲಿ ನಗರದಲ್ಲಿ 7 ಪಬ್ಲಿಕ್ ಶಾಲೆಗಳು ಆರಂಭವಾಗುತ್ತಿವೆ. ಒಂದು ಶಾಲೆಗೆ 3.5 ಕೋಟಿ ರೂ. ಖರ್ಚಾಗುತ್ತಿದೆ. ಜೂನ್, ಜುಲೈ ಒಳಗೆ ಎಲ್ಲಾ ಕೆಪಿಎಸ್ ಶಾಲೆಗಳ ಆರಂಭಿಸಲಾಗುವುದು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಂದಿನ ಕಾರ್ಯಕ್ರಮದ ಬಳಿಕ ಮಕ್ಕಳ ಜೊತೆ ಸಿಎಂ ಅವರು ಊಟ ಮಾಡಲಿದ್ದಾರೆ. 600ಕ್ಕೂ ಹೆಚ್ಚು ಅಂಕ ಪಡೆದ ಸುಮಾರು 900 ಮಕ್ಕಳಿಗೆ ವೇದಿಕೆ ಮುಂಭಾಗ ಕೂರಿಸಿ ಗೌರವ ನೀಡಲಾಗುವುದು. ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಕೆಲವು ಯೋಜನೆಗಳನ್ನು ಆರಂಭಿಸಲಾಗುತ್ತಿದೆ. ಜುಲೈ ಒಳಗೆ ಎಲ್ಲಾ ಕೆ.ಪಿ.ಎಸ್. ಶಾಲೆಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಸಚಿವರು ಮಾಹಿತಿ ನೀಡಿದರು.
ಮುಂದುವರೆದ ಮಧು ಬಂಗಾರಪ್ಪ ಅವರು, ‘ಕ್ಯಾನ್ಸರ್ ಪೀಡಿತ ಮಕ್ಕಳ ಶಾಲೆಗಳನ್ನು ಮುಂದಿನ ದಿನಗಳಲ್ಲಿ ಯೋಜನೆ ತೆಗೆದುಕೊಳ್ಳಲಾಗುವುದು. ಮಾನವೀಯತೆಯ ದೃಷ್ಟಿಯಿಂದ ಈ ಶಾಲೆಗಳನ್ನು ಆರಂಭಿಸಲಾಗುವುದು. ಈ ಯೋಜನೆಯಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲ ಅದಕ್ಕೆ ಸೂಕ್ತ ವೈದ್ಯರ ಸಲಹೆ ಕೂಡ ಅಗತ್ಯವಿದೆ. ಹೀಗಾಗಿ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಆ ಶಾಲೆಗಳಿಗೆ ಹಣ ಈಗಾಗಲೇ ಮೀಸಲಿರಿಸಲಾಗಿದೆ. ಆದರೆ ವೈದ್ಯರು ಸೇರಿದಂತೆ ಒಂದು ತಂಡದೊAದಿಗೆ ಚರ್ಚೆ ನಡೆಸಿ ಯೋಜನೆ ರೂಪುಗೊಳಿಸಬೇಕಿದೆ ಇದಕ್ಕಾಗಿ ಸಮಯ ಬೇಕಾಗುತ್ತದೆ’ ಎಂದರು.
ಮಳೆಗಾಳಿಗೆ ಹೊಳೆಹೊನ್ನೂರು ಭಾಗದಲ್ಲಿ ನಷ್ಟ ವಿಚಾರವಾಗಿ ಮಾತನಾಡಿದ ಸಚಿವರು, ‘ಜಿಲ್ಲಾಧಿಕಾರಿಗಳ ಬಳಿ ವರದಿ ತರಿಸಿಕೊಂಡು ತೀರ್ಮಾನಿಸಲಾಗುವುದು. ವಿಶೇಷ ಅನುದಾನದ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದೇವೆ. ಸಿಎಂ ರಿಲೀಫ್ ಫಂಡ್ ಹಾಗೂ ಎನ್.ಡಿ.ಆರ್.ಎಫ್. ಪರಿಹಾರ ವಿತರಣೆಗೆ ಕ್ರಮ ವಹಿಸಲಾಗಿದೆ. ವರದಿ ತರಿಸಿಕೊಂಡು ವಿಶೇಷ ಪ್ಯಾಕೇಜ್ ಘೋಷಿಸಲು ಚರ್ಚಿಸಿದ್ದೇವೆ. ಮರಗಳು ಬಹಳಷ್ಟು ಬಿದ್ದು ಹೋಗಿದ್ದು ವಿಶೇಷ ಪರಿಹಾರ ನೀಡಲೇಬೇಕಿದೆ’ ಎಂದರು.
ಶಾಲೆಗಳಲ್ಲಿ ಕೇಸರಿ ಶಾಲು ಅಭಿಯಾನದ ವಿಚಾರಕ್ಕೆ ಸಚಿವರ ಪ್ರತಿಕ್ರಿಯೆ: ‘ಶಾಲೆಗಳಿಗೆ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬನ್ನಿ ಎಂದು ಹೇಳಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಮಹಾರಾಷ್ಟçದಲ್ಲಿ ಬೇರೆ ರೀತಿ, ಇಲ್ಲಿ ಹೊಟ್ಟೆಕಿಚ್ಚಿಗೆ ಮಾಡುವುದು ಸರಿಯಲ್ಲ. ಕೇಂದ್ರೀಯ ವಿದ್ಯಾಲಯದಲ್ಲಿ ಹಿಜಾಬ್ ಹಾಕಲು ಅವಕಾಶವಿದೆ. ಆದರೆ ಶಾಲೆಯಲ್ಲಿ ಇದಕ್ಕೆ ಅವಕಾಶವಿಲ್ಲ ಅಂದ್ರೆ ಹೇಗೆ?’, ಎಂದು ಸಚಿವ ಮಧು ಬಂಗಾರಪ್ಪ ಅವರು ಪ್ರಶ್ನಿಸಿದರು.








