ಉದ್ಯಮಿಯಿಂದ 4 ಲಕ್ಷ ರೂ. ಸುಲಿಗೆ: ಇಬ್ಬರು CCB ಅಧಿಕಾರಿಗಳು ಸೇರಿ ಮೂವರ ಬಂಧನ

ಬೆಂಗಳೂರು:

   ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಉದ್ಯಮಿಯೋರ್ವರಿಂದ 4 ಲಕ್ಷ ರೂಪಾಯಿ ಸುಲಿಗೆ ಮಾಡಿದ ಆರೋಪದಡಿ ಇಬ್ಬರು ಸಿಸಿಬಿ ಪೊಲೀಸರು ಸೇರಿ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.ಆರೋಪಿಗಳನ್ನು ಸಿಸಿಬಿ ವಿಶೇಷದಳ ವಿಭಾಗದ ಎಎಸ್ಐ ಸಗೀರ್ ಅಹ್ಮದ್, ಅಮಾನತುಗೊಂಡ ಹೆಡ್ ಕಾನ್‌ಸ್ಟೆಬಲ್ ಯತೀಶ್ ಮತ್ತು ಆಟೋ ಚಾಲಕ ಸಮೀರ್ ಎಂದು ಗುರುತಿಸಲಾಗಿದೆ.

   ರಿಯಲ್ ಎಸ್ಟೇಟ್ ಉದ್ಯಮಿ ನಾಗಾರ್ಜುನ ಗಣೇಶ್ ಎಂಬವರು ನೀಡಿದ ದೂರಿನ ಮೇರೆಗೆ ಸುಲಿಗೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.ಜ. 5ರಂದು ಜಯನಗರದ 5ನೇ ಹಂತದಲ್ಲಿ ದೂರುದಾರರು ಕಾರಿನಲ್ಲಿ ಬರುವಾಗ ಆರೋಪಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಪೊಲೀಸ್ ಎಂದು ಗುರುತಿನ ಚೀಟಿ ತೋರಿಸಿ, ನಿಮ್ಮ ಕಾರಿನಲ್ಲಿ ಗಾಂಜಾವಿರುವ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ಪರಿಶೀಲಿಸಬೇಕೆಂದು ಹೇಳಿ ಕಾರಿನಲ್ಲಿ ಕುಳಿತುಕೊಂಡಿದ್ದಾರೆ.

   ಈ ವೇಳೆ ಬ್ಯಾಗ್​ನಲ್ಲಿದ್ದ 4 ಲಕ್ಷ ಹಣ ನೀಡದಿದ್ದರೆ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಸುಳ್ಳು ಕೇಸ್ ಹಾಕುತ್ತೇವೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ, ಅಲ್ಲದೆ, ಹಣವನ್ನ ಕಸಿದ ಬಗ್ಗೆ ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದೂ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ನಾಗಾರ್ಜುನ ಅವರು ಹೇಳಿದ್ದಾರೆ.

   ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸಿದ ನಂತರ, ಅಹ್ಮದ್, ಯತೀಶ್ ಹಾಗೂ ಸಮೀರ್ ಅವರನ್ನು ಬಂಧಿಸಿದ್ದಾರೆ.ಆಟೋ ಚಾಲಕ ಸಮೀರ್ ಪೊಲೀಸ್ ಮಾಹಿತಿದಾರನಾಗಿದ್ದು, ಉದ್ಯಮಿ ದೊಡ್ಡ ಮೊತ್ತದ ಹಣವನ್ನು ಸಾಗಿಸುತ್ತಿರುವ ಬಗ್ಗೆ ಬಂಧನಕ್ಕೊಳಗಾಗಿರುವ ಸಿಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಪ್ರಕರಣ ಸಂಬಂಧ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link