ಕಿಶ್ತ್ವಾರ್‌ನಲ್ಲಿ ಭಾರೀ ಮೇಘಸ್ಫೋಟ; 45 ಸಾವು

ಶ್ರೀನಗರ:

    ಗುರುವಾರ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ  ಚೋಸಿತಿ ಗ್ರಾಮದಲ್ಲಿ ಸಂಭವಿಸಿದ ಭಾರಿ ಮೇಘಸ್ಫೋಟದಿಂದ ಇಬ್ಬರು ಸಿಐಎಸ್‌ಎಫ್ ಯೋಧರು ಸೇರಿದಂತೆ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ ಮತ್ತು 167 ಜನರು ಗಾಯಗೊಂಡಿದ್ದಾರೆ. ದಿಢೀರ್‌ ಪ್ರವಾಹದಿಂದಾಗಿ ಸುಮಾರು 220 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಪ್ರಸ್ತುತ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಯುತ್ತಿದೆ. ಮಚೈಲ್ ಮಾತಾ ದೇವಾಲಯದ ಬಳಿಯ ಚೋಸಿಟಿಯಲ್ಲಿ ಮೇಘಸ್ಫೋಟವಾಗಿದೆ. ಆಡಳಿತವು ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

   “45 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ, 100 ಕ್ಕೂ ಹೆಚ್ಚು ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಇನ್ನೂ ಅನೇಕ ಜನರು ಕಾಣೆಯಾಗಿರುವ ಶಂಕೆ ಇದೆ” ಎಂದು ಹೆಚ್ಚುವರಿ ಎಸ್‌ಪಿ ಪರ್ದೀಪ್ ಸಿಂಗ್ ಹೇಳಿದ್ದಾರೆ. ಮಚೈಲ್ ಮಾತಾ ಯಾತ್ರೆಯು ಹಿಮಾಲಯದ ಮಾತಾ ಚಂಡಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಈ ದುರಂತ ಸಂಭವಿಸಿದ್ದು, ತೀರ್ಥಯಾತ್ರೆಯ ಹಾದಿ ಅಸ್ತವ್ಯಸ್ತವಾಗಿದೆ. ಮೇಘಸ್ಫೋಟ ವರದಿಯಾದ ಸ್ಥಳದಲ್ಲಿ ಸುಮಾರು 1,200 ಜನರು ಇದ್ದರು ಎಂದು ಹೇಳಲಾಗಿದೆ.

   ಕಿಶ್ತ್ವಾರ್ ಪ್ರದೇಶದ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿವರಿಸಿದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಮೇಘಸ್ಫೋಟ ಪೀಡಿತ ಪ್ರದೇಶದಿಂದ ದೃಢಪಡಿಸಿದ ಮಾಹಿತಿ ನಿಧಾನವಾಗಿ ಬರುತ್ತಿದೆ, ಆದರೆ “ರಕ್ಷಣಾ ಕಾರ್ಯಾಚರಣೆಗಳನ್ನು ನಿರ್ವಹಿಸಲು ಜಮ್ಮು ಮತ್ತು ಕಾಶ್ಮೀರದ ಒಳಗೆ ಮತ್ತು ಅದರಾಚೆಗೆ ಸಾಧ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಲಾಗುತ್ತಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ. 

   ಘಟನೆ ಕುರಿತು ಪ್ರಧಾನಿ ಮೋದಿ ಸಂತಾಪ ಸೂಚಿಸಿದರು. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಮೇಘಸ್ಫೋಟ ಮತ್ತು ಪ್ರವಾಹದಿಂದ ಹಾನಿಗೊಳಗಾದ ಎಲ್ಲರೊಂದಿಗೆ ನಾವಿದ್ದೇವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಅಗತ್ಯವಿರುವವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು” ಎಂದು ಅವರು ಹೇಳಿದರು.

Recent Articles

spot_img

Related Stories

Share via
Copy link