ಬೆಂಗಳೂರು
ನಗರದ ಮಿಂಟೋ ಕಣ್ಣಾಸ್ಪತ್ರೆಯಲ್ಲಿ ನಡೆದ ಕಣ್ಣಿನ ಶಸ್ತ್ರಚಿಕಿತ್ಸಾ ರೋಗಿಗಳಿಗೆ ದೃಷ್ಟಿ ಹಾನಿಯಾಗಿರುವುದಕ್ಕೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವಾಗಿಲ್ಲ ಎಂದು ರಾಷ್ಟ್ರೀಯ ನೇತ್ರಾಧಿಕಾರಿಗಳ ಸಂಘದ ಉಪಾಧ್ಯಕ್ಷ ಎಂ. ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ರೋಗಿಗಳ ದೃಷ್ಟಿಗೆ ತೊಂದರೆಯಾಗಿರುವುದಕ್ಕೆ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಉಪಯೋಗಿಸಿದ ಔಷಧಿಯಲ್ಲಿ ಸೋಂಕಿದ್ದ ಕಾರಣವೇ ಹೊರತು, ವೈದ್ಯರ ನಿರ್ಲಕ್ಷ್ಯವಲ್ಲ ಎಂದು ಅವರು ಈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಕ್ಯುಜೆಲ್ – 2 % ಎಂಬ ಔಷಧಿಯನ್ನು ನಗರದ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಮೈಕ್ರೋಬಯೋಲಜಿ ಹಾಗೂ ಪಿಎಂಎಸ್ಎಸ್ಐ ಆಸ್ಪತ್ರೆಯ ಪ್ರಯೋಗಾಲಯಗಳ ತಪಾಸಣಾ ವರದಿಯಿಂದ ಈ ಔಷಧಿಯಲ್ಲಿ ಸ್ಯೂಡೋಮನಸ್ ಎಂಬ ವೈರಾಣು ಪತ್ತೆಯಾಗಿದ್ದು, ಈ ಔಷಧಿ ಪಾಸಿಟೀವ್ ಎಂಬ ವರದಿ ಬಂದಿದೆ ಎಂದಿದ್ದಾರೆ.
ತೊಂದರೆಗೆ ಒಳಗಾದ ರೋಗಿಗಳು ಗುಣಮುಖರಾಗಲು ಅಗತ್ಯ ಕ್ರಮಗಳನ್ನು ಆಸ್ಪತ್ರೆ ವೈದ್ಯರು ಕೈಗೊಂಡಿದ್ದಾರೆ. ಅಲ್ಲದೆ, ಔಷಧಿ ವಿತರಕರ ವಿರುದ್ಧ ಕ್ರಮ ಜರುಗಿಸಲು ಹಾಗೂ ಸಮಗ್ರ ತನಿಖೆ ನಡೆಸಲು ಮೇಲಧಿಕಾರಿಗಳಿಗೆ ವೈದ್ಯರು ಮನವಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








