ಮಧುಗಿರಿ
ರಾಜ್ಯ ಸರಕಾರ ಟಿಡಿಸಿಸಿ ಬ್ಯಾಂಕ್ನ್ನು ಸೂಪರ್ ಸೀಡ್ ಮಾಡಿರುವುದನ್ನು ಖಂಡಿಸಿ ಕೊಡಿಗೇನಹಳ್ಳಿ, ಬಡವನಹಳ್ಳಿ, ಮಧುಗಿರಿ ಶಾಖೆಗಳ ಹಾಗೂ ತಾಲ್ಲೂಕಿನ ವಿಎಸ್ಎಸ್ ಎನ್ಗಳ ಮುಂಭಾಗ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ರೈತರು ಹಾಗು ಸಿಬ್ಬಂದಿ ಸೋಮವಾರ ಬ್ಢ್ಥೆಗ್ಗೆ ಪ್ರತಿಭಟಿಸಿದರು.
ನಿವೃತ್ತ ವ್ಯವಸ್ಥಾಪಕ ಸೀತಾರಾಂ ಮಾತನಾಡಿ, ಈ ಹಿಂದೆ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೆಕ್ಷನ್ 11ಕ್ಕೆ ಹೋಗಿತ್ತು. ಅಂತಹ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಕೆ .ಎನ್. ರಾಜಣ್ಣ ಬ್ಯಾಂಕ್ನ ಎಲ್ಲಾ ಸಿಬ್ಬಂದಿ ವರ್ಗದವರುಗಳಿಗೆ ಆಡಳಿತ ಮಂಡಲಿ, ರೈತ ವರ್ಗದವರಿಗೆ ಗ್ರಾಹಕರಿಗೆ, ಸಹಕಾರ ಸಂಘಗಳಿಗೆ ಹಾಗೂ ಇನ್ನಿತರೆ ಅಶಕ್ತರುಗಳಿಗೆ ಕುಂದು ಕೊರತೆ ಇಲ್ಲದಂತೆ ಬ್ಯಾಂಕಿನಿಂದ ಎಲ್ಲಾ ರೀತಿಯ ನೆರವನ್ನು ನೀಡುತ್ತಾ ಬಂದಿದ್ದಾರೆ.
ರೈತರ ಸಾಲ ಮನ್ನಾ, ಆರ್ಥಿಕ ನೆರವು ಹಾಗೂ ಗೋಶಾಲೆ, ಉಚಿತ ಊಟದ ವ್ಯವಸ್ಥೆ, ಮೃತಪಟ್ಟ ರೈತರ ಸಾಲ ಮನ್ನಾ ಮಾಡಿ ರೈತರ ಬೆನ್ನೆಲುಬಾಗಿ ನಿಂತು ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದಾರೆ. ಬ್ಯಾಂಕಿನ ಗ್ರಾಹಕರಿಗೆ ಅನನುಕೂಲ ವಾಗದಂತೆ ಕಾರ್ಯನಿರ್ವಹಿಸಿದ್ದಾರೆ ಎಂದ ಅವರು, ಪ್ರತಿಭಟನೆಯ ನಂತರ ಗ್ರಾಹಕರಿಗೆ ಹಾಗೂ ರೈತರಿಗೆ ಅನನುಕೂಲವಾಗದಂತೆ ಸಿಬ್ಬಂದಿವರ್ಗ ಕಾರ್ಯನಿರ್ವಹಿಸಲಿದೆ ಎಂದರು.
ಮಾಜಿ ಜಿಪಂ ಸದಸ್ಯ ಎಚ್.ಡಿ. ಕೃಷ್ಣಪ್ಪ ಮಾತನಾಡಿ, ಸರಕಾರ ತೆಗೆದು ಕೊಂಡಿರುವ ತೀರ್ಮಾನ ಸರಿಯಿಲ್ಲ. ಇದರಿಂದಾಗಿ ಲಕ್ಷಾಂತರ ರೈತರಿಗೆ ಅನ್ಯಾಯವಾಗುತ್ತಿದೆ. ಕೆ.ಎನ್.ರಾಜಣ್ಣ ಜಾತ್ಯತೀತವಾಗಿ, ಪಕ್ಷಾತೀತವಾಗಿ ಸಾಲವನ್ನು ವಿತರಿಸಿದ್ದಾರೆ. ಬಡವರ ಪರವಾಗಿರುವಂತಹ ಇವರ ವಿರುದ್ಧ ಅವರ ಏಳಿಗೆ ಸಹಿಸದೆ ಕೆಲವರು ರಾಜಕೀಯ ದುರುದ್ದೇಶದಿಂದ ಬ್ಯಾಂಕ್ ಸೂಪರ್ ಸೀಡ್ ಮಾಡಿಸಿದ್ದಾರೆ.
ಇದೊಂದು ಅಮಾನವೀಯ ಕೃತ್ಯವಾಗಿದ್ದು, ಆದಷ್ಟೂ ಬೇಗ ಸರಕಾರ ನೀಡಿರುವ ಆದೇಶವನ್ನು ವಾಪಸ್ಸು ಪಡೆಯಬೇಕು. ಇಲ್ಲವಾದರೆ ಜಿಲ್ಲೆ ಹಾಗೂ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಮಾಜಿ ಗ್ರಾಪಂ ಸದಸ್ಯ ವೀರಣ್ಣ ಮಾತನಾಡಿ, ಕೆ.ಎನ್ ರಾಜಣ್ಣ ಅಧ್ಯಕ್ಷರಾಗುವುದಕ್ಕಿಂತ ಮುಂಚೆ ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮಾಸಿಕ ವೇತನವನ್ನು ನೀಡಲು ಸಹ ಆಗುತ್ತಿರಲಿಲ್ಲ. ಈಗ ಬ್ಯಾಂಕ್ ಜಿಲ್ಲೆಯಲ್ಲಿಯೇ ನಂ 1 ಸ್ಥಾನದಲ್ಲಿದೆ. ರಾಜಕೀಯ ದುರುದ್ದೇಶದಿಂದ ಕೆಲವರು ಅಧಿಕಾರದ ಆಸೆಗಾಗಿ ಈಗ ಬ್ಯಾಂಕ್ ಸೂಪರ್ ಸೀಡ್ ಮಾಡಿಸಿರುವುದು ಸರಿಯಲ್ಲ ಎಂದ ಅವರು ರಾಜಕೀಯವನ್ನು ರಾಜಕಾರಣದಿಂದಲೇ ಎದುರಿಸಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
