ತುಮಕೂರು

ತುಮಕೂರು ನಗರದಲ್ಲಿ ಮಳೆ ನೀರಿನ ಚರಂಡಿ ಕುರಿತಂತೆ ಇರುವ ಅವ್ಯವಸ್ಥೆಗೆ ಹಾಗೂ ನಗರದ ಹಲವೆಡೆ ಇರುವ ಅನೈರ್ಮಲ್ಯದ ಸಮಸ್ಯೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಂಬಂಧಿಸಿದ ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಅಪರೂಪದ ಪ್ರಸಂಗ ತುಮಕೂರು ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ಬೆಳಗ್ಗೆ ನಡೆಯಿತು.
ಪಾಲಿಕೆ ಸಭಾಂಗಣದಲ್ಲಿ ಅವರು ನಗರದಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕೈಗೊಂಡಿದ್ದರು. ದಾರಿಯಲ್ಲಿ ಬರುವಾಗ ನಗರದೊಳಗೆ ತಮಗೆ ಕಾಣಿಸಿದ ಕಸದ ರಾಶಿ, ಮಣ್ಣಿನ ರಾಶಿ, ಚರಂಡಿಯ ದುಸ್ಥಿತಿಗಳನ್ನು ತಮ್ಮ ಮೊಬೈಲ್ ಪೋನ್ನಲ್ಲೇ ಫೋಟೋ ತೆಗೆದಿದ್ದ ಅವರು ಅದನ್ನು ಈ ಸ`Éಯಲ್ಲಿ ಪ್ರದರ್ಶಿಸುತ್ತ ಏರಿದ ದನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಿಸಿದ ಅಧಿಕಾರಿಗಳತ್ತ ಮಾತಿನ ಚಾಟಿ ಬೀಸಿದರು.
ನಗರದಲ್ಲಿ ಒಟ್ಟು ಎಷ್ಟು ಕಿ.ಮೀ. ಚರಂಡಿ ಇದೆ? ಎಷ್ಟು ಕಿ.ಮೀ. ಚರಂಡಿಗಳಲ್ಲಿ ಸಮಸ್ಯೆ ಇದೆ? ಒತ್ತುವರಿ ಆಗಿದೆಯೇ? ಎಷ್ಟು ಚರಂಡಿಗಳಿಗೆ ಕಾಂಕ್ರಿಟ್ ಮೇಲು ಹೊದಿಕೆ ಹಾಕಲಾಗಿದೆ? ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ?” ಎಂಬಿತ್ಯಾದಿ ಪ್ರಶ್ನೆಗಳನ್ನು ಮೊದಲಿಗೆ ಅವರು ಮುಂದಿಟ್ಟರು.
ನೀವೆಂಥ ಇ.ಇ.?
ಇದಕ್ಕೆ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ತಿಪ್ಪೇರುದ್ರಪ್ಪ ಸ್ಪಷ್ಟವಾಗಿ ಉತ್ತರಿಸಲಾಗದೆ ತಡವರಿಸಿದರು. “ಚರಂಡಿ ಸರಿಪಡಿಸಲು ನಿಮ್ಮ ಕ್ರಿಯಾಯೋಜನೆ ಏನೆಂಬುದರ ಪಟ್ಟಿ ಮೊದಲು ಕೊಡಿ” ಎಂದು ಶಾಲಿನಿ ರಜನೀಶ್ ತಾಕೀತು ಮಾಡಿದರು. ಆಗ ಇಂಜಿನಿಯರ್ ಏನನ್ನೋ ಹೇಳಲು ಹೋದರು. ಅವರ ಮಾತನ್ನು ಅ`ರ್Àದಲ್ಲೇ ತಡೆದ ಶಾಲಿನಿ ರಜನೀಶ್, “ಒಂದು ವರ್ಷದಿಂದ ಇದೇ ಕಥೆ ಆಯಿತು.
ನಿಮ್ಮ ಕೈಕೆಳಗೆ ಎಷ್ಟು ಜನ ಇಂಜಿನಿಯರ್ಗಳಿದ್ದಾರೆ? ಅವರೆಲ್ಲ ಏನು ಮಾಡುತ್ತಿದ್ದಾರೆ? ಯಾರಿಗೂ ಜವಾಬ್ದಾರಿ ಇಲ್ಲವೇ? ಮಳೆಗಾಲಕ್ಕೆ ಮೂರು ತಿಂಗಳ ಮೊದಲೇ ಎಲ್ಲ ಮಳೆನೀರಿನ ಚರಂಡಿಗಳನ್ನು ಸ್ವಚ್ಚಗೊಳಿಸಬೇಕಲ್ಲವೇ? ನೀವೆಂಥ ಎಕ್ಸಿಕ್ಯುಟೀವ್ ಇಂಜಿನಿಯರ್?” ಎಂದು ಏರಿದ ದನಿಯಲ್ಲಿ ತರಾಟೆಗೆ ತೆಗೆದುಕೊಂಡರು.
ಮಧ್ಯ ಮತ್ತೆ ಉತ್ತರಿಸಿದ ತಿಪ್ಪೇರುದ್ರಪ್ಪ ಅವರು “ಮಳೆ ಬಂದರೆ ನಗರದ ಚರಂಡಿಗಳಲ್ಲಿ ಅಂಥ ತೊಂದರೆ ಏನೂ ಆಗುವುದಿಲ್ಲ. ಕೇವಲ 19 ನೇ ವಾರ್ಡ್ನಲ್ಲಿ ಮಾತ್ರ ಸಮಸ್ಯೆ ಕಾಣುತ್ತದೆ” ಎಂದೊಡನೆ, ಶಾಲಿನಿ ರಜನೀಶ್ ಅವರು
“ಓಹೋ..ಹೋ.. ಕೇಳಿದಿರಾ ಇವರ ಮಾತನ್ನು” ಎಂದು ವ್ಯಂಗ್ಯವಾಗಿ ಉದ್ಗರಿಸಿದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಮೇಯರ್ ಲಲಿತಾ ರವೀಶ್, “ಮಳೆ ಬಂದರೆ ಬೇಕಾದಷ್ಟು ಸಮಸ್ಯೆ ಉಂಟಾಗುತ್ತಿದೆ ಮೇಡಂ” ಎಂದು ಪ್ರತಿಕ್ರಿಯಿಸಿದರು. ಬಳಿಕ “ನೀವಿಲ್ಲಿಗೆ ಬಂದು ಎಷ್ಟು ವರ್ಷ ಆಯಿತು?” ಎಂದು ಶಾಲಿನಿ ರಜನೀಶ್ ಪ್ರಶ್ನಿಸಿದಾಗ, ತಿಪ್ಪೇರುದ್ರಪ್ಪ ಅವರು “ಮೂರು ವರ್ಷ ಮೇಡಂ” ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಚರ್ಚೆಯ ಮಧ್ಯ ಪ್ರವೇಶಿಸಿ, “ನಗರದಲ್ಲಿ ಮಳೆ ನೀರಿನ ಚರಂಡಿ ವ್ಯವಸ್ಥೆ ತೃಪ್ತಿಕರವಾಗಿಲ್ಲ. ಶೇ. 60 ರಷ್ಟು ಮಳೆ ನೀರಿನ ಚರಂಡಿಯನ್ನು ರೀಮಾಡಲ್ ಮಾಡುವ ಅಗತ್ಯತೆ ಇದೆ” ಎಂದು ಪ್ರತಿಪಾದಿಸಿದರು.
ಒತ್ತುವರಿ ತೆರವುಗೊಳಿಸಿ
“ನಗರದಲ್ಲಿರುವ ಮಳೆ ನೀರಿನ ಚರಂಡಿಗಳನ್ನು ಶೇ. 100 ರಷ್ಟು ಸ್ವಚ್ಛಗೊಳಿಸಲೇ ಬೇಕು. ಹೂಳು ತುಂಬಿದ್ದರೆ ಅದನ್ನು ತೆಗೆಸಬೇಕು. ಚರಂಡಿಗಳಿಗೆ ಸಂಬಂಧಿಸಿದಂತೆ ಸಿವಿಲ್ ಸಮಸ್ಯೆಗಳಿದ್ದರೆ ಅದನ್ನು ಸರ್ವೆ ಮಾಡಿಸಿ ತ್ವರಿತವಾಗಿ ಬಗೆಹರಿಸಬೇಕು. ಒತ್ತುವರಿ ಆಗಿದ್ದರೆ ಆ ಬಗ್ಗೆ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಿ, ಅದನ್ನು ಬಹಿರಂಗಗೊಳಿಸಬೇಕು. ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು” ಎಂದು ಶಾಲಿನಿ ರಜನೀಶ್ ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟರು.
ಅನೈರ್ಮಲ್ಯಕ್ಕೆ ಆಕ್ರೋಶ
ನಗರದ ವಿವಿಧೆಡೆ ತಮಗೆ ಕಾಣಿಸಿದ ಅನೈರ್ಮಲ್ಯದ ಸ್ಥಳಗಳ ಫೋಟೋಗಳನ್ನು ಸಭೆಯಲ್ಲಿ ಪ್ರದರ್ಶಿಸುತ್ತ ಪಾಲಿಕೆಯ ಆರೋಗ್ಯಶಾಖೆಯ ಪರಿಸರ ಇಂಜಿನಿಯರ್ಗಳನ್ನೂ ಶಾಲಿನಿ ರಜನೀಶ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಗರದ ಶಂಕರ ಮಠ ವೃತ್ತದ ಬಳಿ ಸೋಮೇಶ್ವರ ದೇವಾಲಯದ ಮುಂದಾಗ ದೊಡ್ಡ ಚರಂಡಿಯಲ್ಲಿ ಅನೈರ್ಮಲ್ಯ ಉಂಟಾಗಿರುವ ಫೋಟೋ ಪ್ರದರ್ಶಿಸಿದ ಅವರು, ಪ್ರಮುಖ ರಸ್ತೆ ಬದಿಯಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಗಲೀಜು ಉಳಿದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಪರಿಸರ ಇಂಜಿನಿಯರ್ಗಳಾದ ಮೃತ್ಯುಂಜಯ ಮತ್ತು ಮೋಹನ್ಕುಮಾರ್ ಅವರುಗಳು ನೀಡಿದ ಸ್ಪಷ್ಟೀಕರಣವು ಶಾಲಿನಿ ರಜನೀಶ್ರನ್ನು ಮತ್ತಷ್ಟು ಸಿಟ್ಟಿಗೆಬ್ಬಿಸಿತು. “ಒಂದು ವರ್ಷದಿಂದ ನಾನು ನೋಡುತ್ತಿದ್ದೇನೆ. ಇಲ್ಲಿ ಇದೇ ಸ್ಥಿತಿ ಇದೆ. ಗಲೀಜು ಇಲ್ಲದಂತೆ ಮಾಡಲು ಏನೂ ಕ್ರಮ ಕೈಗೊಂಡಿಲ್ಲ. ಆಧುನಿಕ ಯಂತ್ರೋಪಕರಣಗಳನ್ನೂ ಬಳಸಿಕೊಂಡಿಲ್ಲ. ಕನಿಷ್ಟಪಕ್ಷ ಬಾಡಿಗೆಗೆ ಪಡೆಯುವ ಯತ್ನವನ್ನೂ ಮಾಡಿಲ್ಲ. ನೀವೆಲ್ಲ ಏನು ಕೆಲಸ ಮಾಡುತ್ತಿದ್ದೀರಿ?” ಎಂದು ಏರಿದ ದನಿಯಲ್ಲಿ ಗುಡುಗಿದರು.
ನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಒಂದು ಬದಿಯ ಖಾಲಿ ಜಾಗದಲ್ಲಿ ಮಣ್ಣಿನ ರಾಶಿಗಳಿರುವುದು, ಒಂದು ಕಡೆ ಟ್ರಂಚ್ ನಿರ್ಮಿಸಿರುವುದು, ಅವುಗಳ ನಡುವೆ ಪ್ಲಾಸ್ಟಿಕ್ ಇತ್ಯಾದಿ ಕಸ ಇರುವುದರ ಫೋಟೋ ಪ್ರದರ್ಶಿಸುತ್ತ, “ನಗರದ ಪ್ರಮುಖ ಸ್ಥಳವೊಂದರಲ್ಲೇ ಈ ರೀತಿ ಇದ್ದರೆ ಹೇಗೆ?” ಎಂದು ನೇರವಾಗಿ ಆಯುಕ್ತ ಟಿ.ಭೂಬಾಲನ್ ಅವರನ್ನು ಪ್ರಶ್ನಿಸಿದರು.
ಆಗ ಆಯುಕ್ತರು “ಸದರಿ ಸ್ಥಳದಲ್ಲಿ ವೆಂಡರ್ ಜೋನ್ ಬರಲಿದ್ದು, ಅದಕ್ಕೆ ಪೂರಕವಾಗಿ ಇಲ್ಲಿನ ಜಾಗವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದೆ” ಎಂದು ಸ್ಪಷ್ಟನೆ ಕೊಟ್ಟರಾದರೂ, ಶಾಲಿನಿ ರಜನೀಶ್ ಮಾತ್ರ ಸಮಾಧಾನಗೊಳ್ಳಲಿಲ್ಲ.
ಕೋತಿತೋಪು ರಸ್ತೆಯ ಅನೇಕ ಕಡೆಗಳಲ್ಲಿ ರಸ್ತೆ ಬದಿ ಮಣ್ಣಿನ ರಾಶಿ ಬಿದ್ದಿರುವ ಫೋಟೋಗಳನ್ನೂ ಪ್ರದರ್ಶಿಸುತ್ತ ಮತ್ತೆ ಅವರು ತಮ್ಮ ಸಿಟ್ಟನ್ನು ಹೊರಹಾಕಿದರು.
ಆಗ ಪರಿಸರ ಇಂಜಿನಿಯರ್ ಮೃತ್ಯುಂಜಯ ಮೌನವಾಗಿ ನಿಂತರು. “ಇದು ನಿಮ್ಮ ನಗರ. ನೀವು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛತೆ ಕಾಪಾಡಲು ನಿಮಗೇನು ಕಷ್ಟ? ಜೆಸಿಬಿ ಅಗತ್ಯವಿದ್ದರೆ, ಬಾಡಿಗೆಗೆ ಪಡೆದುಕೊಂಡಾದರೂ ಸ್ವಚ್ಛತಾ ಕೆಲಸವನ್ನು ಆದ್ಯತೆಯಿಂದ ಮಾಡಿ. ಇನ್ನು ಮುಂದೆ ಇದೇ ರೀತಿ ಗಲೀಜಿದ್ದರೆ ನಾನಂತೂ ಸಹಿಸುವುದಿಲ್ಲ” ಎಂದು ಎಚ್ಚರಿಸಿದರು. “ನಗರದಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮ ಜಾರಿಯಲ್ಲಿದೆ. ಜೊತೆಗೆ ಇದು ಸ್ಮಾರ್ಟ್ಸಿಟಿ ಸಹ ಆಗುತ್ತಿದೆ. ಸ್ವಚ್ಛತೆಗೆ ಗಮನಕೊಡಿ” ಎಂದು ಅವರು ಎಲ್ಲ ಅಧಿಕಾರಿಗಳಿಗೆ ಖಡಕ್ ಆಗಿ ತಾಕೀತು ಮಾಡಿದರು.
ಭಾರಿ ಮಳೆ ಬಂದರೆ ನಿಮ್ಮ ಮುಂಜಾಗ್ರತಾ ಕ್ರಮ ಏನು?
“ಈಗ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಬಂದು ಪ್ರವಾಹ ಪರಿಸ್ಥಿತಿ ಬಂದಿದೆ. ಒಂದು ವೇಳೆ ಇಲ್ಲೂ ಸಹ ಭಾರಿ ಮಳೆ ಬಂದರೆ, ಹಾನಿಯಾಗುವುದನ್ನು ನಿಯಂತ್ರಿಸಲು ನಿಮ್ಮ ಮುಂಜಾಗ್ರತಾ ಕ್ರಮಗಳು ಏನು?” ಎಂಬ ಪ್ರಶ್ನೆಯನ್ನು ಶಾಲಿನಿ ರಜನೀಶ್ ಅವರು ಮುಂದಿಟ್ಟಾಗ, ಮತ್ತೊಮ್ಮೆ ಎಲ್ಲ ಅಧಿಕಾರಿಗಳು ಮೌನಕ್ಕೆ ಶರಣಾದರು.
ನಗರದ ಕೆರೆಗಳ ಅಭಿವೃದ್ಧಿ ವಿಷಯವನ್ನು ಅವರು ಚರ್ಚೆಗೆ ತೆಗೆದುಕೊಂಡಾಗ, ಪಾಲಿಕೆಯ ಜೂನಿಯರ್ ಇಂಜಿನಿಯರ್ ವನಿತಾ ಮಾಹಿತಿ ನೀಡುತ್ತ “ನಗರದ 27 ಕೆರೆಗಳ ಪೈಕಿ 11 ಕೆರೆಗಳು ಪಾಲಿಕೆ ವ್ಯಾಪ್ತಿಗೆ ಬರಲಿವೆ. ಇವುಗಳ ವಿಸ್ತೀರ್ಣದ ಬಗ್ಗೆ ಈಗ ಸರ್ವೆ ಕಾರ್ಯ ನಡೆಯುತ್ತಿದೆ. ಸರಹದ್ದು ಗುರುತಿನ ಕಲ್ಲು ನೆಡಬೇಕಾಗಿದೆ. ಶೆಟ್ಟಿಹಳ್ಳಿ ಕೆರೆಯಲ್ಲಿ ಒತ್ತುವರಿ ಆಗಿರುವುದು ಕಂಡುಬಂದಿದೆ” ಎಂಬಿತ್ಯಾದಿ ಮಾಹಿತಿ ನೀಡಿದರು. ಆಗ ಶಾಲಿನಿ ರಜನೀಶ್ ಮೇಲಿನಂತೆ ಪ್ರಶ್ನಿಸಿದರು.
“ನಗರದ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಉದ್ದೇಶಿಸಲಾಗಿದೆ. ಜೊತೆಗೆ ಈಗ ಭಾರಿ ಮಳೆ ಬಂದರೆ ಆಗ ಆ ನೀರೂ ಕೆರೆಗಳಿಗೆ ಹರಿಯುತ್ತದೆ. ಕೆರೆಗಳ ಒತ್ತುವರಿ ಒಂದು ಸಮಸ್ಯೆಯಾದರೆ, ಕೆರೆಗಳ ಸುತ್ತಮುತ್ತ ವಸತಿ ಪ್ರದೇಶಗಳೂ ಇರುತ್ತವೆ. ಭಾರಿ ಮಳೆ ಬಂದಾಗ ಸಮಸ್ಯೆ ಎದುರಾದರೆ ಏನು ಮಾಡಬೇಕೆಂಬ ಬಗ್ಗೆ ಯೋಚನೆ ಮಾಡಬೇಕು. ಇಂತಹ ಪ್ರದೇಶಗಳಲ್ಲಿ ಸಮಸ್ಯೆಗಳಿದ್ದರೆ ಅದನ್ನೊಂದು ಪಟ್ಟಿ ಮಾಡಿ” ಎಂದು ಅವರು ಹೇಳಿದರು.
ಗುಂಡ್ಲಮ್ಮನ ಕೆರೆ ಸಮಸ್ಯೆ
ನಗರದ ಚರಂಡಿಗಳ ವ್ಯವಸ್ಥೆಯನ್ನು ಸೆಟಲೈಟ್ ಚಿತ್ರದ ಮೂಲಕ ಪರಿಶೀಲಿಸುವ ಸಂದರ್ಭದಲ್ಲಿ ಕ್ಯಾತಸಂದ್ರದ ಗುಂಡ್ಲಮ್ಮನ ಕೆರೆಯು ಕೊಳಚೆಯಂತಾಗಿರುವುದನ್ನು ಶಾಲಿನಿ ರಜನೀಶ್ ವಿಶೇಷವಾಗಿ ಗಮನಿಸಿದರು. ಇಲ್ಲಿ ಈ ರೀತಿ ಕೊಳಚೆ ಸೇರಲು ಕಾರಣವೇನು? ಇದಕ್ಕೆ ಪರಿಹಾರವೇನು? ಎಂದು ಸಭೆಯಲ್ಲಿದ್ದ ಅಧಿಕಾರಿಗಳನ್ನು ಅವರು ಪ್ರಶ್ನಿಸಿದರು.
ಸಿದ್ಧಗಂಗಾ ಮಠದ ತ್ಯಾಜ್ಯ ನೀರಿನಿಂದ ಈ ಸಮಸ್ಯೆ ಎದುರಾಗಿದೆ” ಎಂದು ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ತಿಪ್ಪೇರುದ್ರಪ್ಪ ಹೇಳಿದರು. ಆಗ ಶಾಲಿನಿ ರಜನೀಶ್ ಅವರು “ಕಾರಣ ಏನಾದರಿರಲಿ. ಸಾರ್ವಜನಿಕ ಹಿತದೃಷ್ಟಿಯಿಂದ ಇಲ್ಲೊಂದು ತ್ಯಾಜ್ಯನೀರಿನ ಸಂಸ್ಕರಣ ಘಟಕ (ಎಸ್.ಟಿ.ಪಿ.)ವನ್ನು ಸ್ಥಾಪಿಸಲೇಬೇಕು. ಮಠದವರಾದರೂ ತೆರೆಯಬಹುದು . ಈ ನಿಟ್ಟಿನಲ್ಲಿ ಮಠದವರ ಗಮನಕ್ಕೂ ತರಬೇಕು” ಎಂದರು.
ಆಗ ಮಧ್ಯಪ್ರವೇಶಿಸಿದ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು, “ಇದು ಸಣ್ಣನೀರಾವರಿ ಇಲಾಖೆ ವ್ಯಾಪ್ತಿಗೆ ಬರಲಿದೆ. ಆ ಇಲಾಖೆ ವತಿಯಿಂದ ಇಲ್ಲೊಂದು ಎಸ್.ಟಿ.ಪಿ. ಸ್ಥಾಪಿಸಬೇಕು. ಮಠವು ಬಡವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿರುವುದರಿಂದ ಇಲಾಖೆಯಿಂದಲೇ ಇಲ್ಲಿ ಎಸ್.ಟಿ.ಪಿ. ಸ್ಥಾಪಿಸಬೇಕು” ಎಂದು ಒತ್ತಿಹೇಳಿದರು.
ತಕ್ಷಣವೇ ಪ್ರತಿಕ್ರಿಯಿಸಿದ ಶಾಲಿನಿ ರಜನೀಶ್, “ತುಮಕೂರು ಅಮಾನಿಕೆರೆಗೆ ನೀರು ತುಂಬಿಸಲು ಸ್ಮಾರ್ಟ್ಸಿಟಿ ಯೋಜನೆಯಡಿ ಎಸ್.ಟಿ.ಪಿ. ತೆರೆಯಲು ಯೋಜನೆ ಹಾಕಿಕೊಂಡಿದ್ದಾಗ, ಅದನ್ನು ಬೇಡವೆಂದು ನೀವೇ ವಿರೋಧಿಸಿದ್ದಿರಿ. ಆಗ ಅದು ಸ್ಥಗಿತವಾಯಿತು. ಆದರೆ ಈಗ ನೀವೇ ಇಲ್ಲಿ ಎಸ್.ಟಿ.ಪಿ. ಬೇಕು ಎನ್ನುತ್ತಿದ್ದೀರಿ. ಇಲ್ಲಿ ಎಸ್.ಟಿ.ಪಿ. ಬಂದರೆ ತೊಂದರೆ ಆಗುವುದಿಲ್ಲವೇ?” ಎಂದು ಶಾಸಕರನ್ನು ಪ್ರಶ್ನಿಸಿದರು.
ಅಷ್ಟರಲ್ಲಿ ನಗರದ ಬಟವಾಡಿ ಬಳಿಯ ಅಕ್ಕತಂಗಿ ಕೆರೆಯ ಬಳಿ ಸಹ ಯುಜಿಡಿ ಸಮಸ್ಯೆ ನಿರಂತರವಾಗಿದ್ದು, ಅಲ್ಲೂ ಸಹ ಒಂದು ಎಸ್.ಟಿ.ಪಿ. ಸ್ಥಾಪಿಸಬೇಕೆಂಬ ಸಲಹೆ ಅಧಿಕಾರಿಗಳ ವಲಯದಿಂದ ಬಂತು. ಇದಕ್ಕೆ ಆಗ ಶಾಸಕ ಜ್ಯೋತಿಗಣೇಶ್ ಮತ್ತು ಮೇಯರ್ ಲಲಿತಾ ರವೀಶ್ ಆಗಬಹುದೆಂದು ಸಹಮತ ವ್ಯಕ್ತಪಡಿಸಿದರು.
ನಗರದಲ್ಲಿ ಕೈಗೊಂಡಿರುವ 24/7 ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆಗಳ ಬಗ್ಗೆ ಶಾಲಿನಿ ರಜನೀಶ್ ಆಮೂಲಾಗ್ರವಾಗಿ ಪರಿಶೀಲಿಸಿದರು. ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಲಿಯ ಎಕ್ಸಿಕ್ಯುಟೀವ್ ಇಂಜಿನಿಯರ್ ರಂಗನಾಥ್ ಅವರು ಈ ಬಗ್ಗೆ ತಾಂತ್ರಿಕ ಮಾಹಿತಿಗಳನ್ನು ನೀಡಿದರು. ಕೊನೆಯಲ್ಲಿ ಸ್ಮಾರ್ಟ್ಸಿಟಿ ಯೋಜನೆಯ ಬಗೆಗೂ ಚರ್ಚಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
