ಬೆಂಗಳೂರು
ಹಿಂದಿಯೇತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಒತ್ತಾಯಪೂರಕ ಹಿಂದಿ ಹೇರಿಕೆಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಶನಿವಾರ ಕರಾಳ ದಿನಾಚರಣೆ ಆಚರಿಸಿ ಪ್ರತಿಭಟನೆ ನಡೆಸಿದರು.ನಗರದ ಆನಂದ್ರಾವ್ ವೃತ್ತದ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಸೇರಿದ ನೂರಾರು ವೇದಿಕೆ ಕಾರ್ಯಕರ್ತರು ಕೇಂದ್ರ ಸರ್ಕಾರ ಒತ್ತಾಯ ಪೂರಕವಾಗಿ ಹಿಂದಿ ಹೇರಿಕೆ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆ ಅಧ್ಯಕ್ಷ ನಾರಾಯಣಗೌಡ ಮಾತನಾಡಿ,ವಿವಿಧ ರಾಜ್ಯಗಳ ಒಕ್ಕೂಟ ದೇಶವಾಗಿರುವ ಭಾರತದಲ್ಲಿ ಎಲ್ಲ ಭಾಷೆಗಳಿಗೆ ಸಮಾನ ಗೌರವ ನೀಡಬೇಕು. ರಾಷ್ಟ್ರಭಾಷೆ ಎಂಬ ಕಾರಣಕ್ಕೆ ಹಿಂದಿಯನ್ನು ಒತ್ತಾಯಪೂರಕವಾಗಿ ಹೇರಬಾರದು ಎಂದರು.
ಕೇಂದ್ರ ಸರ್ಕಾರದ ಅಧೀನದ ರೈಲ್ವೆ ಬ್ಯಾಂಕ್ ಇನ್ನಿತರ ಕಚೇರಿಗಳಲ್ಲಿ ಇಂದು ಹಿಂದಿ ಸಪ್ತಾಹ ಆಚರಿಸುವುದು ಸರಿಯಲ್ಲ, ದೇಶದ ಎಲ್ಲ ಭಾಷೆಯ ಜನರ ತೆರಿಗೆ ಹಣದಲ್ಲಿ ಹಿಂದಿ ಭಾಷೆಯನ್ನು ಬೆಳೆಸಬಾರದು. ಎಲ್ಲ ಭಾಷೆಗಳ ಬೆಳವಣಿಗೆಯೂ ಕೇಂದ್ರ ಸರ್ಕಾರದ ಆದ್ಯತೆಯಾಗಬೇಕು ಎಂದು ಆಗ್ರಹಿಸಿದರು.
ಸಂವಿಧಾನದ 8ನೇ ಪರಿಚ್ಛೇದಲ್ಲಿರುವಂತೆ ಕನ್ನಡ ಸೇರಿದಂತೆ ಎಲ್ಲ ಭಾಷೆಗಳಿಗೂ ಕೇಂದ್ರ ಸರ್ಕಾರ ಗೌರವ ನೀಡಿ ಪ್ರೋರೀತ್ಸಾಹಿಸ ಬೇಕಾಗುತ್ತದೆ. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗಬಹುದು ಎಂದು ಅವರು ಆಗ್ರಹಿಸಿದರು. ಹಿಂದಿಯೇತರ ರಾಜ್ಯಗಳಲ್ಲಿ ಬಲವಂತವಾಗಿ ಹಿಂದಿಯನ್ನು ಹೇರಿಕೆ ಮಾಡಿಕೊಂಡು ಬಂದಿರುವ ಕೇಂದ್ರಸರ್ಕಾರದ ನಿಲುವನ್ನು ಖಂಡಿಸಿ ವೇದಿಕೆಯು ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದೆ. ಮುಂದೆ ಸಹ ನಾಡು-ನುಡಿಯ ವಿಚಾರದಲ್ಲಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ನಾರಾಯಣಗೌಡ ತಿಳಿಸಿದರು.ಪ್ರತಿಭಟನೆಯಲ್ಲಿ ವೇದಿಕೆಯ ಮುಖ್ಯಸ್ಥ ಆಂಜನಪ್ಪ, ಸಣ್ಣೀರಪ್ಪ, ಬಸವರಾಜ ಪಡುಕೋಟೆ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








