ಬೆಂಗಳೂರು
ಬಾಂಬ್ ಬೆದರಿಕೆಯ ಹಿನ್ನಲೆಯಲ್ಲಿ ರಾಜ್ಯ ಹೈಕೋರ್ಟ್ಗೆ ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ಕಲ್ಪಿಸಿ ಕಟ್ಟೆಚ್ಚರ ವಹಿಸಲಾಗಿದೆ.ಇಂಟರ್ ನ್ಯಾಷನಲ್ ಖಲಿಸ್ತಾನ ಬೆಂಬಲಿತ ದೆಹಲಿ ಮೂಲದ ಹರ್ದರ್ಶನ್ ಸಿಂಗ್ ಎಂಬಾತನ ಹೆಸರಿನಿಂದ ಬಾಂಬ್ ಇಟ್ಟು ಸ್ಫೋಟಿಸುವ ಬೆದರಿಕೆ ಪತ್ರ ಹೈಕೋರ್ಟ್ ರಿಜಿಸ್ಟಾರ್ಗೆ ಬಂದಿರುವ ಹಿನ್ನಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿ ಹೈಕೋರ್ಟ್ ಆವರಣ ಸುತ್ತಮುತ್ತಲ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ತನ್ನ ಮಗನ ಜೊತೆಗೆ ಬೆಂಗಳೂರಿಗೆ ಆಗಮಿಸಿ ಹೈಕೋರ್ಟ್ ಸೆ,೩೦ ರಂದು ಹೈಕೋರ್ಟ್ ಸ್ಫೋಟಿಸುವುದಾಗಿ ಹರ್ದರ್ಶನ್ ಸಿಂಗ್ ಬೆದರಿಕೆ ಹಾಕಿ ಹೈಕೋರ್ಟ್ ರಿಜಿಸ್ಟಾರ್ಗೆ ದೆಹಲಿ ವಿಳಾಸದಿಂದ ಪತ್ರ ಬಂದಿದ್ದು ಅದನ್ನು ಪೊಲೀಸರಿಗೆ ತಲುಪಿಸದ ತಕ್ಷಣವೇ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಕೂಡಲೇ ಭದ್ರತೆಯನ್ನು ಬಿಗಿಗೊಳಿಸಿ ಹೈಕೋರ್ಟ್ ಪ್ರವೇಶಿಸುವ ಪ್ರತಿಯೊಬ್ಬರನ್ನು ಲೋಹ ನಿರೋಧಕ ಯಂತ್ರದಿಂದ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿತ್ತು ನಗರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ವಸ್ತುಗಳ ತಪಾಸಣೆಯನ್ನು ಚುರುಕುಗೊಳಿಸಲಾಗಿದೆ.ಕಳೆದ ತಿಂಗಳಷ್ಟೆ ಪಾಕಿಸ್ತಾನ ಮೂಲಕ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆಯ ಆರು ಜನ ಉಗ್ರರು ಭಾರತ ಪ್ರವೇಶಿಸಿದ್ದು ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ನೀಡಿದ್ದು ಅಲ್ಲಿಂದ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಈ ನಡುವೆ ಬಾಂಬ್ ಇಟ್ಟು ಹೈಕೋರ್ಟ್ ಸ್ಫೋಟಿಸುವ ಬೆದರಿಕೆ ಬಂದಿದ್ದು ಭದ್ರತೆಯನ್ನು ಬಿಗಿಗೊಳಿಸಿ ನಗರದ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ ಬೆದರಿಕೆ ಪತ್ರದ ಬಗ್ಗೆ ವಿಧಾನಸೌಧದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಪತ್ರ ಬರೆದವನಿಗಾಗಿ ಶೋಧ ನಡೆಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








