15 ಕ್ಷೇತ್ರಗಳೂ ಬಿಜೆಪಿ ಪಾಲು: ಎಂಪಿಆರ್

ದಾವಣಗೆರೆ:

     ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಈ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಲಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸಂಘಟನೆ, ಚುನಾವಣೆ ಹೊಸದೇನೂ ಅಲ್ಲ. ನಮ್ಮ ಪಕ್ಷದ ಸಂಘಟನೆಯೂ ಎಂದಿಗೂ ನಿಂತ ನೀರಲ್ಲ.

       15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು. ಅನರ್ಹ ಶಾಸಕರ ಬಗ್ಗೆ ವಿಶ್ವಾಸ, ಗೌರವವಿದೆ. 17 ಶಾಸಕರು ರಾಜೀನಾಮೆ ಕೊಟ್ಟಾಗ ನ್ಯಾಯಾಲಯ ಶಾಸಕರ ನಿಲುವನ್ನು ಎತ್ತಿ ಹಿಡಿಯಿತು. ಆದರೆ, ಆಗಿನ ಸ್ಪೀಕರ್ ರಮೇಶ್‍ಕುಮಾರ ತುಘಲಕ್ ದರ್ಬಾರ್ ನಡೆಸಿ ಅಷ್ಟೂ ಶಾಸಕರನ್ನೂ ಅನರ್ಹಗೊಳಿಸಿದರು. ಸುಪ್ರೀಂ ಕೋರ್ಟ್‍ನಲ್ಲಿ ಈ ಶಾಸಕರ ಪರವಾಗಿ ತೀರ್ಮಾನ ಬರುವ ವಿಶ್ವಾಸವಿದೆ ಎಂದು ಹೇಳಿದರು.

        ಉಪ ಚುನಾವಣೆಯ ಹಿನ್ನೆಲೆಯಲ್ಲಿ ಆದಷ್ಟು ಬೇಗನೆ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು 15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆ ಮಾಡಿ, ತೀರ್ಮಾನಿಸುತ್ತಾರೆ. ಉಪ ಚುನಾವಣೆ ನಂತರ ಸರ್ಕಾರ ಬೀಳುತ್ತದೆಂಬುದು ಅಸಾಧ್ಯದ ಮಾತು. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಸುಭದ್ರ ಸರ್ಕಾರವಿದೆ. ಬಾಕಿ ಅವಧಿಯನ್ನೂ ನಮ್ಮ ಸರ್ಕಾರ ಪೂರೈಸಲಿದೆ ಎಂದರು.

          ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಷ್ಟು ಅತಿವೃಷ್ಟಿ, ಪ್ರವಾಹ ಉಂಟಾಗಿದ್ದು, ಸರ್ಕಾರವು ಸಮರೋಪಾದಿಯಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿರ್ವಹಣೆ ಕೈಗೊಂಡಿದೆ. ಹಿಂದಿನ ಯಾವುದೇ ಸರ್ಕಾರಗಳೂ ಮಾಡದಷ್ಟು ಕಾರ್ಯವನ್ನು ಹಾಗೂ ಅನುದಾನವನ್ನು ತಮ್ಮ ಸರ್ಕಾರ ನೀಡಿದ್ದು, ಸೂರು ಕಳೆದುಕೊಂಡವರಿಗೆಲ್ಲಾ ಹಿಂದೆ ಆಳಿದ್ದ ಸರ್ಕಾರಗಳು ಕೇವಲ 2-3 ಸಾವಿರ ರು. ನೀಡುತ್ತಿದ್ದವು. ತಮ್ಮ ಸರ್ಕಾರ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂತ್ರಸ್ಥರಿಗೆ 10 ಸಾವಿರ ರು. ಪರಿಹಾರ ನೀಡುತ್ತಿದೆ ಎಂದು ಸಮರ್ಥಿಸಿಕೊಂಡರು.

        ಗೋಡೆ ಕುಸಿತ, ಭಾಗಶಃ ಹಾನಿ, ಸಂಪೂರ್ಣವಾಗಿ ಮನೆ ನೆಲಸಮ ಇಂತಹ ಪ್ರಕರಣದಲ್ಲಿ 25 ಸಾವಿರ ರು., 1 ಲಕ್ಷ ರು. ಹಾಗೂ 5 ಲಕ್ಷ ರು.ವರೆಗೆ ಪರಿಹಾರ ನೀಡುತ್ತಿದ್ದೇವೆ. ಮನೆ ಕಳೆದಕೊಂಡವರಿಗೆ ತಾತ್ಕಾಲಿಕ ಆಶ್ರಯಕ್ಕೆ 10ರಿಂದ 15 ಸಾವಿರ ರು.ಗಳನ್ನು 10 ತಿಂಗಳ ಕಾಲ ಬಾಡಿಗೆ ರೂಪದಲ್ಲಿ ನೀಡುತ್ತಿದ್ದೇವೆ. ಹಿಂದೆ ಯಾವ ಸರ್ಕಾರವೂ ಸಂತ್ರಸ್ತರಿಗೆ ಹೀಗೆ ಪರಿಹಾರ ನೀಡಿದ ನಿದರ್ಶನವಿಲ್ಲ ಎಂದರು.ಬಿಜೆಪಿ ಸರ್ಕಾರವು ಜನಪರ ಕಾರ್ಯಕ್ರಮಗಳಲ್ಲಿ ಎಲ್ಲರಿಗೂ ಮಾದರಿಯಾಗಿದೆ. ನೀರಾವರಿ ರೈತರಿಗೆ 4 ಸಾವಿರ ರು. ಸಹಾಯಧನ, ನೇಕಾರರು, ಮೀನುಗಾರರ ಸಾಲ ಮನ್ನಾ ಹೀಗೆ ಹಲವಾರು ಯೋಜನೆ ನೀಡಿ, ಅತಿವಷ್ಟಿಯಿರಲಿ, ಅನಾವೃಷ್ಚಿಯಾಗಿರಲಿ ರಾಜ್ಯದ ಜನರಿಗೆ ಸ್ಪಂದಿಸಿದೆ ಎಂದು ನುಡಿದರು.

       ಬಳ್ಳಾರಿ ಜಿಲ್ಲೆಯ ವಿಸ್ತೀರ್ಣವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನೇಕ ತಾಲೂಕುಗಳು ಜಿಲ್ಲಾ ಕೇಂದ್ರದಿಂದ 200 ಕಿ.ಮೀ ಅಂತರದಲ್ಲಿವೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಕಷ್ಟವಾಗುತ್ತಿದೆ. ಜನ ಸಾಮಾನ್ಯರಿಗೂ ತೊಂದರೆ ತಪ್ಪಿದ್ದಲ್ಲವೆಂಬ ಕಾರಣಕ್ಕೆ, ಚಿಕ್ಕ ಚಿಕ್ಕ ಜಿಲ್ಲೆಗಳಾದರೆ ಅಭಿವೃದ್ಧಿ, ಆಡಳಿತ, ಜನರ ಹಿತದೃಷ್ಟಿಯಿಂದಲೂ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಆ ಜಿಲ್ಲೆಯ ಮಠಾಧೀಶರು, ಜನರು, ಜನ ಪ್ರತಿನಿ„ಗಳ ಹಕ್ಕೊತ್ತಾಯದ ಮೇರೆಗೆ ಹೊಸ ವಿಜಯ ನಗರ ಜಿಲ್ಲೆ ರಚಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link