ಅಪರಿಚಿತ ಮಹಿಳೆ ಶವ ಪತ್ತೆ ಪ್ರಕರಣ : 3 ಜನರ ಬಂಧನ..!

ತುಮಕೂರು
     ತುರುವೇಕೆರೆ ತಾಲ್ಲೂಕು ಹೇಮಾವತಿ ಚಾನಲ್‍ನಲ್ಲಿ ಅಕ್ಟೋಬರ್ 1ರಂದು ದೊರಕಿದ್ದ ಮಹಿಳೆಯ ಶವದ ಪ್ರಕರಣದಲ್ಲಿ ಕೊಲೆಯ ಪ್ರಯತ್ನ ಇರುವ ಜಾಡು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಮೂರು ಜನ ಆರೋಪಿಗಳನ್ನು ತುರುವೇಕೆರೆ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
    ಅ.1ರಂದು ತುರುವೇಕೆರೆ ತಾಲ್ಲೂಕು ಹುಲಿಕಲ್‍ ಬಳಿ ಹೇಮಾವತಿ ನಾಲೆಯಲ್ಲಿ ಮಹಿಳೆಯೊಬ್ಬರ ಶವ ದೊರಕಿತ್ತು. ಅಪರಿಚಿತ ಹೆಂಗಸಿನ ಶವ ಇದಾದ್ದರಿಂದ ಶವದ ವಾರಸುದಾರರು ಹಾಗೂ ಇದರಲ್ಲಿ ಏನಾದರೂ ಕೊಲೆಯ ಸುಳಿವು ಸಿಗಬಹುದೆ ಎಂಬ ಅನುಮಾನದಿಂದ ಪೋಲೀಸರು ತನಿಖೆ ಕೈಗೊಂಡಿದ್ದರು. ಕುಣಿಗಲ್ ಉಪವಿಭಾಗದ ಡಿಎಸ್‍ಪಿ ರಾಮಲಿಂಗೇಗೌಡ ಅವರ ನೇತೃತ್ವದ ತಂಡ ಈ ಬಗ್ಗೆ ತನಿಖೆ ಕೈಗೊಂಡಿತ್ತು. 
    ಅ.8ರಂದು ಮಧ್ಯಾಹ್ನ ಕುಮಾರ ಅಲಿಯಾಸ್ ಲೋಕೇಶ್‍ಕುಮಾರ ವಿಜಿಪುರ, ನಿಂಗಪ್ಪ ಅಲಿಯಾಸ್ ಲಿಂಗಪ್ಪರೆಡ್ಡಿ , ಕೆಂಪಾಪುರ ಬೆಂಗಳೂರು, ನಾಗೇಶ್ ಜೆ. ಮಲ್ಲೇನಹಳ್ಳಿ ನೊಣವಿನಕೆರೆ ಇವರುಗಳ ಜಾಡು ಹಿಡಿದು ವಶಕ್ಕೆ ಪಡೆದು, ವಿಚಾರಣೆ ಮಾಡಲಾಗಿ ಮಹಿಳೆಯ ಕೊಲೆಯ ಹಿಂದೆ ಇವರ ಕೈವಾಡ ಇರುವುದು ಪತ್ತೆಯಾಯಿತು. ಲಾಭ ಗಳಿಸುವ ಉದ್ದೇಶದಿಂದ ಬೆಂಗಳೂರು ನಗರದ ರಾಜುಮತಿ ಶರ್ಮಾ ಅವರನ್ನು ಕೊಲೆಗೈದು ಅವರ ಶವವನ್ನು ಹೇಮಾವತಿ ನಾಲೆಗೆ ತಂದು ಎಸೆದಿದ್ದರು.
     ಗುರುತು ಸಿಗದಿರಲೆಂದು ಈ ಕೃತ್ಯ ಕೈಗೊಂಡಿದ್ದರು. ಆರೋಪಿತರಿಂದ ಸುಜುಕಿ ಆಕ್ಸಿಸ್ ದ್ವಿಚಕ್ರ ವಾಹನ, ಒಂದು ಟಾಟಾ ಬೋಲ್ಟ್ ಕಾರು, ಎರಡು ಬಂಗಾರದ ಬಳೆಗಳು, ಎರಡು ಉಂಗುರಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮೌಲ್ಯ 2 ಲಕ್ಷ ರೂಗಳದ್ದಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳ ಪತ್ತೆಗೆ ಶ್ರಮಿಸಿದ ಡಿಎಸ್‍ಪಿ ರಾಮಲಿಂಗೇಗೌಡ, ಸಿಪಿಐ ಲೋಕೇಶ್, ಎಎಸ್‍ಐ ಶಿವಲಿಂಗಪ್ಪ ಸಿಬ್ಬಂದಿಗಳಾಗ ರಮೇಶ್, ಕೇಶವಮೂರ್ತಿ, ಗಜೇಂದ್ರ ಕುಮಾರ್, ಮಧುಸೂಧನ್, ಸತೀಶ್ ಸಿ.ಆರ್., ಸುಪ್ರಿತ್ ವೈ.ಎಸ್., ಮುತ್ತಣ್ಣ ಗುಡ್ನಾಳ್, ಕುಮಾರ್ ಅವರನ್ನು ಪೋಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link